ಸೋಮವಾರ, ಡಿಸೆಂಬರ್ 8, 2025

ನಮ್ಮ ಸ್ನೇಹಯಾತ್ರೆ – ದುಂಬಿ ಹೋಮ್ ಸ್ಟೇ ಸವಿ-ನೆನಪುಗಳು

ಸ್ನೇಹವು ವರ್ಷಗಳಿಂದ ಅಳೆಯಲಾಗುವುದಿಲ್ಲ, ಅದು ಹೃದಯದಲ್ಲಿ ಉಳಿಯುವ ಕ್ಷಣಗಳಿಂದ ಅಳೆಯಲಾಗುತ್ತದೆ. 6ನೇ ತಾರೀಖು ಬೆಳಿಗ್ಗೆ 7:15ಕ್ಕೆ ನಮ್ಮ ಪಯಣ ಪೀಣ್ಯ ಮೆಟ್ರೋ ನಿಲ್ದಾಣದಿಂದ ಆರಂಭವಾಯಿತು. ನಾಯಂಡಹಳ್ಳಿ  ಮೆಟ್ರೋ ಎರಡನೇ ಪಿಕ್-ಅಪ್ ಪಾಯಿಂಟ್. ಸ್ವಲ್ಪ ವಿಳಂಬವಾದರೂ, ನಮ್ಮ ಹೃದಯಗಳಲ್ಲಿ ಉತ್ಸಾಹ ತುಂಬಿಕೊಂಡಿತ್ತುನಾವು ಹಲವು ತಿಂಗಳುಗಳ ಯೋಜನೆಯಂತೆ  HD ಕೋಟೆಯ ದುಂಬಿ ಹೋಮ್ ಸ್ಟೇಗೆ ಒಂದು ದಿನದ ಪ್ರವಾಸಕ್ಕೆ ಹೊರಟೆವು.

ಪಯಣದ ಆರಂಭ

ವಾಹನದೊಳಗೆ ಮಾತು, ನಗು, ನೆನಪುಗಳ ಹಬ್ಬ ಮನೆಮಾಡಿತ್ತು. ಮೊದಲ ನಿಲ್ದಾಣ ಮದ್ದೂರು ಟಿಫಾನೀಸ್. ಬಿಸಿ ಇಡ್ಲಿ, ವಡೆ, ಮಸಾಲೆ ದೋಸೆ, ಮದ್ದೂರು ವಡೆಬೆಳಗಿನ ಕಾಫಿಯ ಸವಿಯೊಂದಿಗೆ ಸ್ನೇಹದ ಬಾಂಧವ್ಯ ಇನ್ನಷ್ಟು ಗಟ್ಟಿಯಾಗತೊಡಗಿತು.

HD ಕೋಟೆಯ ಹಾದಿ ಸ್ವಲ್ಪ ದೂರವಾದರೂ, ಸ್ನೇಹಿತರ ಮಾತು-ಕತೆ, ಹರಟೆ, ಹಾಡು, ನೃತ್ಯ, ಹಾಸ್ಯಗಳಿಂದ ಪಯಣದ ಹಾದಿ ಹತ್ತಿರವಾದಂತೆ ತೋರಿತು.  

ದುಂಬಿಯ ತಾಣ

ಮಧ್ಯಾಹ್ನ 2:45ಕ್ಕೆ ನಾವು ದುಂಬಿ ಹೋಮ್ ಸ್ಟೇ ತಲುಪಿದೆವು. ಊಟ ರುಚಿಕರವಾಗಿತ್ತು, ಆದರೆ ಹೋಮ್ ಸ್ಟೇ ಕೊಠಡಿಗಳು ಇನ್ಸ್ಟಾಗ್ರಾಂ ಚಿತ್ರಗಳಂತೆ ಇರಲಿಲ್ಲ. ಆದರೂ ಪ್ರಕೃತಿಯ ಮೌನ, ಹಸಿರು, ಗಾಳಿ, ತಂಗಾಳಿಯ ಪಿಸುಮಾತಿಗೆ ನಾವೆಲ್ಲಾ ಮನಸೋತೆವು. ಪ್ರಕೃತಿ ಸೌಂದರ್ಯ ಮನದ ದುಗುಡವನ್ನು ಮರೆಮಾಡಿತು.

ನಂತರ ನಾವು ನುಗು ಬ್ಯಾಕ್ವಾಟರ್ ದೋಣಿ ಸವಾರಿಗೆ ಹೋದೆವು. ಪರ್ವತಗಳ ನೆರಳು, ನೀರಿನ ಮಿಂಚು, ಹಸಿರು ಸೌಂದರ್ಯಸ್ನೇಹದ ನಗು ಪ್ರಕೃತಿಯ ಸಂಗೀತವಾಗಿ ಪ್ರತಿಧ್ವನಿಸಿತು.

ದೋಣಿ ಸಾಗಲಿ, ಮುಂದೆ ಹೋಗಲಿ, ದೂರ ತೀರವ ಸೇರಲಿ
ಬೀಸು ಗಾಳಿಗೆ ಬೀಳು ತೆಳುವ ತೆರೆಯ ಮೇಗಡೆ ಹಾರಲಿ

ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸಿ
ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸಿ
ನೋಡಿ ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿದೆ ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ    ||ದೋಣಿ ಸಾಗಲಿ||

ಕೆರೆಯ ಅಂಚಿನ ಮೇಲೆ ಮಿಂಚಿನ ಹನಿಗಳಂದದಿ ಹಿಮಮಣಿ
ಮಿಂಚುತಿರ್ಪುವು ಮೂಡುತೈತರೆ ಬಾಲಕೊಮಲ ದಿನಮಣಿ
ಹಸಿರು ಜೋಳದ ಹೊಲದ ಗಾಳಿಯ ತೀಡಿ ತಣ್ಣಗೆ ಬರುತಿದೆ
ಹುದುಗಿ ಹಾಡುವ ಮತ್ತಕೋಕಿಲ ಮಧುರವಾಣಿಯ ತರುತಿದೆ    ||ದೋಣಿ ಸಾಗಲಿ||

ದೂರ ಬೆಟ್ಟದ ಮೇಲೆ ತೇಲುವ ಬಿಳಿಯ ಮೋಡವ ನೋಡಿರಿ
ಅದನೆ ಹೋಲುತ, ಅಂತೆ ತೇಲುತ ದೋಣಿಆಟವನಾಡಿರಿ
ನಾವು ಲೀಲಾಮಾತ್ರ ಜೀವರು ನಮ್ಮ ಜೀವನ ಲೀಲೆಗೆ
ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ    ||ದೋಣಿ ಸಾಗಲಿ||

ಕವಿಕುವೆಂಪು

ಕವಿಯ ಭಾವನೆಗಳ ದನಿಯಂತೆ ನಮ್ಮ ಪಯಣ ಸರೋವರದ ನೀರಿನಲ್ಲಿ ಸಾಗಿತ್ತ.  ಮನದಲ್ಲಿ ಸಂತೋಷದ ಚಿಲುಮೆ ಚಿಮ್ಮಿತ್ತು.

ಹಾಸ್ಯದ ಹಬ್ಬ

ಸಂಜೆಯ ಚಹಾ ನಂತರ, 50ನೇ ಹುಟ್ಟುಹಬ್ಬದ ಕೇಕ್ ಕಟಿಂಗ್. ನಂತರ ಕ್ಯಾಂಪ್ಫೈರ್ಚುಮುಚುಮು ಚಳಿಯಲ್ಲಿ, ಬೆಂಕಿಯ ಹಿತವಾದ ಬಿಸಿಯಲ್ಲಿ ಸ್ನೇಹದ ದೀವಿಗೆಯಂತೆ ಹೊತ್ತಿ ಉರಿಯಿತು.

ಸುರೇಶ್ನಮ್ಮ ದೊಡ್ಡ ಮನರಂಜಕಛಳಿಯ ತಂಗಾಳಿಯ ಜೊತೆಗೆ ಸುರೇಶನ ಹಾಸ್ಯದ ಹೊನಲು ಬೆಳದಿಂಗಳ ರಾತ್ರಿಯಲ್ಲಿ ತೆರೆದುಕೊಂಡಿತು. ನಾವೆಲ್ಲರೂ ನಗುವಿನ ಕಡಲಿನಲ್ಲಿ ತೇಲಿದೆವು. ಹಾಸ್ಯ ಚಕ್ರವರ್ತಿ ಸುರೇಶನಿಗೆ ಪ್ರಣಾಮಗಳು. ಬೆಳದಿಂಗಳ ರಾತ್ರಿಯಲ್ಲಿ ಹಾಸ್ಯದ ಹೊಸ ಲೋಕವೊಂದು ಸೃಷ್ಟಿಯಾಯಿತು. ಸುರೇಶ ಹಾಸ್ಯದ ಮಾಯೆಯಿಂದ ನಮ್ಮೆಲ್ಲರನ್ನೂ ಮಂತ್ರಮುಗ್ದರನ್ನಾಗಿಸಿದ.   ಹಾಸ್ಯದ ಹಂದರದಲ್ಲಿ ನಮ್ಮನ್ನೆಲ್ಲಾ ತೇಲಿಸಿದ. ಕಾಮಿಡಿ ಊಟದ ನಂತರವೂ ಮುಂದುವರಿದು, ರಾತ್ರಿ ಪೂರ್ತಿ ನಗುವಿನ ಹಬ್ಬವಾಯಿತು. ಅದು ಕೇವಲ ಹಾಸ್ಯವಲ್ಲ, ನಮ್ಮ ಆತ್ಮಗಳಿಗೆ ಔಷಧ, ರಸದೌತಣ. ವರುಷ ಪೂರ್ತಿ ಹಾಸ್ಯದ ಹಸಿವಿನಿಂದ ಬಳಲಿದ್ದ ನಮಗೆ ನಗೆಯ ಅಮೃತವ ಬಡಿಸಿದ್ದ.

ಬೆಳಗಿನ ಕಿರಣ

ಮುಂದಿನ ದಿನ ಬೆಳಿಗ್ಗೆ ವಾಚ್ ಟವರ್ನಿಂದ ಸೂರ್ಯೋದಯ. ಬೆಟ್ಟದ ಹಿಂದೆ ಚಿನ್ನದ ಕಿರಣಗಳುಸ್ನೇಹದ ಬೆಳಕಿನಂತೆ. ಮಂಜಿನ ಮಾಯೆಗೆ ಸೂರ್ಯ ಕಣ್ಣಾಮುಚ್ಚಾಲೆಯಾಡುತ್ತ ನಮ್ಮ ತವಕವನ್ನು ಹೆಚ್ಚಿಸಿದ್ದ. ಬಳಲಿ ಬಾಯಾರಿದ್ದ ನಮಗೆ ಕೊನೆಗೂ ಸೂರ್ಯೋದಯದ ಅಮೃತವ  ಉಣ್ಣಿಸಿದ.

ಕಾಫಿ ನಂತರ, ಹೋಮ್ ಸ್ಟೇ ತೋಟ ಹಾಗೂ ಹತ್ತಿರದ ಹೊಲಗಳಲ್ಲಿ ನಡೆದಾಡಿದೆವು. ರಾಗಿ, ಪಾಮ್ ಆಯಿಲ್, ಶುಂಠಿ, ಹೊಗೆ ಸೊಪ್ಪು ಬೆಳೆಗಳನ್ನು ಗುರುತಿಸಿದೆವು. ಎರಡು ಗಂಟೆಗಳಷ್ಟು ನಡೆದಾಡಿದಾಗ, ಜೀವನದ ಸರಳತೆ ನಮಗೆ ಪಾಠ ಕಲಿಸಿತು.

ದೇವಾಲಯಗಳ ದಾರಿ

ಬೆಳಗಿನ ಉಪಹಾರ ನಂತರ, 11 ಗಂಟೆಗೆ ಹೋಮ್ ಸ್ಟೇ ಖಾಲಿ ಮಾಡಿ ಅನ್ನಪೂರ್ಣ ರೆಸ್ಟಾರಂಟ್ನಲ್ಲಿ ಊಟ. ನಂತರ ವೇಣು ಗೋಪಾಲ ಸ್ವಾಮಿ ದೇವಾಲಯ (KRS ಬ್ಯಾಕ್ವಾಟರ್ ಹತ್ತಿರ), ಶ್ರೀ ಹರಿಖೋಡ ಪುನರ್ನಿರ್ಮಿಸಿದ ಸೌಂದರ್ಯಸವಿದೆವು.

ನಂತರ ಕಲ್ಲಹಳ್ಳಿಯ ಭುವರಾಹ ಸ್ವಾಮಿ ದೇವಾಲಯ ಸಂಜೆ 4:30ಕ್ಕೆ. ನಂತರ ಬೆಂಗಳೂರಿನತ್ತ ಪ್ರಯಾಣ. ರಾತ್ರಿ 11:30ರಿಂದ 1:05ರವರೆಗೆ ಎಲ್ಲರೂ ಮನೆ ತಲುಪಿದರುದೇಹ ದಣಿದರೂ, ಹೃದಯ ತುಂಬಿತ್ತು.

ನೆನಪಿನ ಸಾರ

ಪ್ರವಾಸ ಕೇವಲ ಸ್ಥಳಗಳ ಬಗ್ಗೆ ಅಲ್ಲ, ಅದು ಜನರ ಬಗ್ಗೆ. ಸ್ನೇಹದ ಬಗ್ಗೆ.
ಮತ್ತೆ ಮಕ್ಕಳಂತೆ ಬದುಕುವುದು, ಮೈಲಿಗಲ್ಲುಗಳನ್ನು ಆಚರಿಸುವುದು,
ಮತ್ತು ಜೀವನ ಎಷ್ಟು ದೂರ ಕರೆದೊಯ್ದರೂ,
ಸ್ನೇಹ ಮತ್ತೆ ನಮ್ಮನ್ನು ಸೇರಿಸುವುದು.

ಮನೆ ತಲುಪಿದಾಗ ದೇಹ ದಣಿದರೂ,
ಮನಸ್ಸು ತುಂಬಿತ್ತು
ಹಾಸ್ಯದ ನಗು, ಹೃದಯದ ಸಂತೋಷ,
ಮತ್ತೆ ಭೇಟಿಯಾಗುವ ನಿರೀಕ್ಷೆ.

ನಾಳೆಗಳಿಗೆ ಹೊಸ ಭರವಸೆಯ ಹಾದಿಯ ತೆರೆದಿದೆ.

ನಮ್ಮ ಗುಂಪಿನ ದುಂಬಿಗಳು

·         ಅರವಿಂದ, ಮಾಧುರಿ, ಸತ್ಯ, ಸುರೇಶ್, ರಾಜನ್, ಶೋಭಾ, ಶುಭಾ, ಶಶಿಕಲಾ, ಬೃಂದಾ, ರವಿ, 

ಡಾ. ಪ್ರಕಾಶ್, ವಿಶ್ವ, ರೂಪಾ, ಮತ್ತು ನಾಗೇಂದ್ರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ