ಗುರುವಾರ, ನವೆಂಬರ್ 8, 2012

ಸಂತಸ ಹಾಗು ಸುರಕ್ಷಿತ ದೀಪಾವಳಿ

 ಕತ್ತಲ ಭೇದಿಸಿ ಆಕಾಶದಲ್ಲಿ ಬಣ್ಣ ಬಣ್ಣಗಳ ಬೆಳಕಿನ ಕಿರಣಗಳು ಅರಳುವುದು ಯಾರಿಗೆ ತಾನೆ ಸಂತಸತಾರದು ಹೇಳಿ? ಹೌದು ದೀಪಾವಳಿ ಬರುತ್ತಿದೆ ಎನ್ನುವ ಸೂಚನೆ ಈಗಾಗಲೇ ಅಂಗಡಿ-ಮುಂಗಟ್ಟುಗಳಲ್ಲಿ,ದೂರದರ್ಶನ,ವೃತ್ತಪತ್ರಿಕೆಗಳ ಜಾಹೀರಾತುಗಳಲ್ಲಿ ದೊರೆತಿದೆ. ಕೊಳ್ಳುವಿಕೆ,ರಿಯಾಯಿತಿ,ಬಹುಮಾನ,ಉಡುಗೊರೆಗಳ ಮಾತುಗಳು ಒಂದು ಕಡೆಯಾದರೆ ಶಬ್ದ,ವಾಯುಮಾಲಿನ್ಯ,ಅಪಘಾತ,ಅಂಗಹೀನತೆ ಮುಂತಾದ ಸಾಮಾಜಿಕ ಸಮಸ್ಯೆಗಳು ಮತ್ತೊಂದು ಕಡೆ. ಎರಡೂ ಒಂದೇ ನಾಣ್ಯದ ಎರಡು ಮುಖ ಎಂಬುದು ನಮಗೆಲ್ಲಾ ತಿಳಿದಿದೆ. ಆದರೂ ಕ್ಷಣದ ಅಜಾಗರೂಕತೆ ಜೀವನವನ್ನು ಕತ್ತಲಾಗಿಸುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ. ಬರುತ್ತಿರುವ ದೀಪಾವಳಿಗೆ ಖರೀದಿಗೆ ಎಲ್ಲರೂ ಸಿದ್ಧರಾಗಿರುವ ಜೊತೆಗೆ ಚರ್ಮದ ಮುಲಾಮು,ಕತ್ತರಿ.ಬ್ಯಾಂಡೇಜ್ ಗಳನ್ನೂ ಸಿದ್ಧಪಡಿಸಿಟ್ಟುಕೊಳ್ಳುವುದು ಅತ್ಯವಶ್ಯವಾಗಿದೆ. ಖರೀದಿಯ ಸಿದ್ಧತೆಗಿಂತ ಎರಡನೆಯ ಸಿದ್ಧತೆಗೆ ಪ್ರಾಮುಖ್ಯತೆ ಯಾರು ತಾನೆ ಕೊಡುತ್ತಾರೆ? ಅಪಘಾತಗಳಾಗದಂತೆ ಮುಂಜಾಗರೂಕತೆ ವಹಿಸುವುದೇ ಜಾಣ್ಮೆ. ಈ ದೀಪಾವಳಿಗೆ ವೈದ್ಯರ ಸಲಹೆ-ಸೂಚನೆಗಳತ್ತ ಗಮನಹರಿಸಿ ಪಾಲಿಸಿದರೆ ಅವಘಡ ಹಾಗು ಅವಘಡಗಳಿಂದಾಗುವ ಪರಿಣಾಮಗಳನ್ನು ಕಡಿಮೆ ಮಾಡಬಹುದು.
ಈ ದೀಪಾವಳಿಗೆ ಪಟಾಕಿ,ಮತಾಪುಗಳನ್ನು ಬಳಸುವಾಗ ಕೆಳಗಿನ ಸಲಹೆಗಳನ್ನು ಅನುಸರಿಸಿ ಸಂತೋಷ ಇಮ್ಮಡಿಗೊಳಿಸಿಕೊಳ್ಳಬಹುದು.

ಪಟಾಕಿಗಳನ್ನು ಸಿಡಿಸಲು ಮೈದಾನವನ್ನು ಆರಿಸಿಕೊಳ್ಳಿ.
ತುಂಬಾ ಶಬ್ದ ಹಾಗು ವಾಯುಮಾಲಿನ್ಯಗೊಳಿಸುವ ಸಿಡಿಮದ್ದುಗಳ ಬಳಸುವುದನ್ನು ಕಡಿಮೆಮಾಡಿ.
ಉದ್ದದ ಕಡ್ಡಿಗಳನ್ನು ಬಳಸಿ ಪಟಾಕಿ,ಮತಾಪುಗಳನ್ನು ಹೊತ್ತಿಸಿ.
ಪಟಾಕಿಗಳನ್ನು ಸ್ವಚ್ಛ ಹಾಗು ತಣ್ಣನೆಯ ಜಾಗದಲ್ಲಿ ಶೇಖರಿಸಿಡಿ.
ಚಿಕ್ಕ ಮಕ್ಕಳ ಕೈಗೆ ಪಟಾಕಿ,ಮತಾಪುಗಳು ಸಿಗದಂತೆ ಎಚ್ಚರವಹಿಸಿ.
ಹೂವಿನ ಕುಂಡಗಳಿಂದಲೇ ಹೆಚ್ಚಾಗಿ ಅಪಘಾತಗಳು ಸಂಭವಸಾಧ್ಯತೆ ಇರುವುದರಿಂದ ಮಕ್ಕಳ ಅವುಗಳನ್ನು ಬಳಸುವಾಗ ದೊಡ್ಡವರು ಮಕ್ಕಳ ನೆರವಿಗೆ ಬರುವುದು ಒಳಿತು.
ಪಟಾಕಿಗಳನ್ನು ಹೊತ್ತಿಸಿದ ನಂತರ ಹಲವು ಬಾರಿ ಅವು ಸಿಡಿಯಲು ಸಮಯ ತೆಗೆದುಕೊಳ್ಳುತ್ತದೆ ಅವು ಸಿಡಿಯುವ ಮೊದಲೇ ಮಕ್ಕಳು ಅದನ್ನು ಕೈಯಲ್ಲಿ ಹಿಡಿಯುವ ಆತುರ ತೋರುತ್ತಾರೆ ಅಂತಹ ಸಂದರ್ಭಗಳಲ್ಲಿಯೇ ಹೆಚ್ಚಿನ ಅಪಾಯವಾಗುವ ಸಾಧ್ಯತೆಯಿದೆ.
ಮಕ್ಕಳಿಗೆ ಸುರಕ್ಷತೆಯ ಬಗ್ಗೆ ಮಕ್ಕಳಿಗೆ ತಿಳುವಳಿಕೆ ಕೊಡಿ.
ಶಾಲಾ-ಕಾಲೇಜುಗಳಲ್ಲಿ ಪ್ರಥಮ ಚಿಕಿತ್ಸೆಯ ಬಗ್ಗೆ ಅರಿವು ಮೂಡಿಸುವುದು ಒಳ್ಳೆಯದು.
ಮನೆಯ ಒಳಗೆ ಪಟಾಕಿ,ಮತಾಪುಗಳನ್ನು ಸಿಡಿಸಬೇಡಿ.ಶುದ್ಧ ಗಾಳಿಯು ಸಿಗದೆ ಉಸಿರಾಟದ ತೊಂದರೆಯುಂಟಾಗಬಹುದು.
ಪಟಾಕಿ,ಮತಾಪುಗಳನ್ನು ಸಿಡಿಸುವ ವೇಳೆಯಲ್ಲಿ ಚಪ್ಪಲಿ ಧರಿಸುವ ಬದಲು ಶೂಗಳನ್ನು ಧರಿಸುವುದು ಒಳ್ಳೆಯದು.
ಮಕ್ಕಳು ಹುಡುಕಾಟಕ್ಕಾಗಿ ಕೈಯಲ್ಲೇ ಪಟಾಕಿ,ಮತಾಪುಗಳನ್ನು ಸಿಡಿಸುವುದನ್ನು ಧೈರ್ಯ ಹಾಗು ಪ್ರತಿಷ್ಟೆಯೆಂದು ಭಾವಿಸಿರುತ್ತಾರೆ. ಅವರಿಗೆ ತಿಳುವಳಿಕೆ ಕೊಟ್ಟು ನಡುವಳಿಕೆಯನ್ನು ತಿದ್ದುವುದರಿಂದ ಅಪಘಾತಗಳನ್ನು ತಡೆಯಬಹುದು.
ಪಟಾಕಿ ಸಿಡಿಸುವಾಗ ನಾವು ಧರಿಸುವ ಉಡುಪುಗಳನ್ನು ಜೋಪಾನವಾಗಿ ಆಯ್ಕೆಮಾಡಿಕೊಳ್ಳುವುದರಲ್ಲಿ ನಮ್ಮ ಜಾಣ್ಮೆ ಅಡಗಿದೆ. ಸೀರೆ,ದೊಗಲೆ ಉಡುಪುಗಳನ್ನು ಧರಿಸಿ ಪಟಾಕಿ,ಮತಾಪುಗಳನ್ನು ಸಿಡಿಸಬೇಡಿ.
ಬೆಂಕಿಯಿಂದ ಗಾಯಗಳು ಸಂಭವಿಸಿದಲ್ಲಿ ಹರಿಯುವ ನೀರಿನಿಂದ ಗಾಯವನ್ನು ಸ್ವಚ್ಛಗೊಳಿಸಿ ನಂತರ ವೈದ್ಯಕೀಯ ಚಿಕಿತ್ಸೆಗೆ ಕರೆದೊಯ್ಯುವುದು ಉಚಿತ.
ಅಪಘಾತವೆನಾದರೂ ಸಂಭವಿಸಿದಲ್ಲಿ ಗಾಬರಿಗೊಳ್ಳದೆ ತಾಳ್ಮೆಯಿಂದ ವರ್ತಿಸಿ.
ರೋಗಿಗಳ,ಮಕ್ಕಳ,ವಯೋವೃದ್ಧರನ್ನು ಶಬ್ದ ಹಾಗೂ ವಾಯುಮಾಲಿನ್ಯದಿಂದ ದೂರವಿರಿಸಿ.

ಒಟ್ಟಾರೆ ಹಬ್ಬಗಳು ಸಂತಸವನ್ನು ಇಮ್ಮಡಿಗೊಳಿಸಬೇಕಾದರೆ ಅಪಘಾತಗಳು ಸಂಭವಿಸದಂತೆ ಮುಂಜಾಗರೂಕತೆಯಿಂದ ಅವುಗಳನ್ನು ತಡೆಗಟ್ಟುವುದೇ ಆಗಿದೆ.
ಎಲ್ಲರಿಗೂ ಸಂತಸ ಹಾಗು ಸುರಕ್ಷಿತ ದೀಪಾವಳಿಯ ಶುಭಾಷಯಗಳು.
Happay & Safe Deepavali.


ಮಂಗಳವಾರ, ನವೆಂಬರ್ 6, 2012

ಕವಿ ಮನೋವ್ಯಾಪಾರ


ಕವಿಯ ಮನೋವ್ಯಾಪಾರ ಹೀಗೇ ಎಂದು ಹೇಳಲು ಬಾರದು. ಎಲ್ಲರದೂ ಒಂದು ದಿಕ್ಕಾದರೆ ಕವಿಯದೇ ಬೇರೊಂದು ದಿಕ್ಕು. ಅದೇ ಸಾಮಾನ್ಯರಿಗೂ ಹಾಗು ಕವಿ ಹೃದಯಕ್ಕೂ ಇರುವ ವ್ಯತ್ಯಾಸ. ಒಂದೇ ಗಾಳಿ,ನೀರು,ಭೂಮಿ,ರಕ್ತದ ಬಣ್ಣವೊಂದೇ ಆದರೂ ಮನಸ್ಸಿನ ವ್ಯಾಪಾರ ಮಾತ್ರ ಬೇರೆಬೇರೆ.ಅದನ್ನು ಪ್ರತಿಭೆ ಎನ್ನುವುದೋ ಅಥವಾ ಮತ್ತೇನೆನ್ನುವುದೋ ಹೇಳಲು ಬಾರದು. ಎಲ್ಲರೂ ನೋಡುವುದು ತಮ್ಮ ಮೂಗಿನ ನೇರಕ್ಕೇ ಆದರೂ ನೋಡುಗನ ಗಮನ ಎಲ್ಲಿ ಕೇಂದ್ರಿತವಾಗಿದೆ ಎನ್ನುವುದೇ ಮುಖ್ಯ. ಕವಿ ಹೇಳುತ್ತಾನೆ.

                                ಯಾವಾಗಲೂ ಅಷ್ಟೇ ಗುರುವೇ! ನಮ್ಮ ಮೂಗಿನ ನೇರಕ್ಕೇ
                                ನಾವು ಹೆರವರನ್ನೋದುವುದು.
                                ತಕ ಪಕ ಕುಣಿದ ನವಿಲ ನೋಡೀ ನೋಡಿ ನಿಶ್ಚಿತ ಗಟ್ಟಿ
   ದನಿಯಲ್ಲಿ ಹದ್ದೇ ಎನ್ನುವುದು||
                                                                      -ಎಚ್ಚೆಸ್ವಿ  ’ಪ್ರಾಪ್ತಿ’- ವೈದೇಹಿ ಮತ್ತು ಇತರ ಕವಿತೆಗಳು.

ಮನದಲ್ಲಿ ಅನೇಕಾನೇಕ ವಿಚಾರ ವಿನಿಮಯ,ಮಂಥನ ಎಲ್ಲರಲ್ಲಿಯೂ ನಡೆಯುವುದು ಸರ್ವೇಸಾಮಾನ್ಯ. ಸಾಮಾನ್ಯ ವಿಚಾರಗಳೂ ಕವಿ ಮನದಲ್ಲಿ ಹೆಚ್ಚು ಪ್ರಶ್ನೆಗಳ ಬಿರುಗಾಳಿ ಬೀಸಿ ಅದು ಚಂಡಮಾರುತವಾಗಿ ಮಳೆ ಧರೆಗಿಳಿಯುವಂತೆ ಭಾವನೆಗಳ ಘರ್ಷಣೆಯಿಂದ ಕವಿತೆಗಳ ಸೃಷ್ಟಿ ಕವಿ ಹೃದಯದಲ್ಲಿ ಆಗುವುದು. ಅದೇ ಜನ ಸಾಮಾನ್ಯರಲ್ಲಿ ಕಾಡು ಹರಟೆಗೆ ದಾರಿ ಮಾಡಿಕೊಡುತ್ತದೆ ಅಷ್ಟೇ!.
ಕವಿ ತನ್ನೊಳಗಿನ ಆ ಮನೋವ್ಯಾಪಾರವನ್ನೇ ಪ್ರಶ್ನಿಸಿಕೊಳ್ಳುತ್ತಾನೆ, ಆದರೆ ಜನಸಾಮಾನ್ಯರು ಹಾಗೇ ಮಾಡಿಯಾರೇ?

                                 ಹೇಗೆ ಬರುವುದೀ ಮನಕೆ
   ಒಂದು ವಿಚಾರ ಕಲ್ಪನೆ ಪ್ರೇರಣೆ?
   ಯಾರು ಕಳಿಸುವರು ಅದನು-ಅದಕ್ಕೆ
   ಕಾರಣ ನ್ಯಾಯ ಏನಿದೆ?

ಕವಿ ಮುಂದೆ ಅದನ್ನೇ ಹೇಳುತ್ತಾ

                                ಕಪಿಯೋ ಕುದುರೆಯೋ ಜಿಂಕೆಯೋ ಮನದೊಳು
                               ನುಗ್ಗುವ ಅತಿಥಿ ಅದಾರೋ!
 ಬಂತೋ ಒಳಗೆ ಅದೇ ಸಾರಥಿ
                               ಎಲ್ಲಿಗೊಯ್ಯುವುದೋ ಏನೋ?
                              -ಎಲ್ ಎಸ್ ಎಲ್ ’ಹೇಗೆ ಬರುವುದೀ ಮನಕೆ?’-ಸಂವೇದನೆ

ಪಕ್ಕದ ಮನೆಯಲ್ಲೋ ಅಥವಾ ಇನ್ನೆಲ್ಲೋ ಯಾರಾದಾರೂ ಅಳುವ ಸದ್ದು ನಿಮ್ಮ / ನಮ್ಮ ಕಿವಿಗೆ ಬಿದ್ದರೆ ತುಂಬಾ ಕಿರಿಕಿರಿಯಾಗುವುದು ಮನಕ್ಕೆ ಅದಕ್ಕೆ ಹೇಗೆ ಸ್ಪಂದಿಸ ಬೇಕು ಎಂದು ತಿಳಿಯಲಾರದೆ ಅಲ್ಲಿಂದ ತಪ್ಪಿಸಿಕೊಂಡು ಹೋಗುವುದಕ್ಕೆ ಮೊದಲ ಆಧ್ಯತೆ,ಮೊದಲ ಮಂತ್ರ ಅದಕ್ಕೆ ಹೂಡುವೆವು ಕಾರ್ಯತಂತ್ರ. ಆದರೆ ಕವಿಗೆ ಅದೇ ಒಳಗಿನ ಪ್ರೇರಣೆ ಒಂದು ಕವಿತೆಗೆ. ಕವಿಯ ಹೃದಯ ನೋವೋ! ನಲಿವೋ! ಎಲ್ಲಕ್ಕೂ ಸ್ಪಂದಿಸುವುದು ವಿಶೇಷವಾಗಿ ಹಾಗು ಅದಕ್ಕೆ ಸಂವಾದಿಯಾಗಿ ಮನವು ತೊಳಲಾಡಿ ಭಾವನೆಯೇ ಹೊರಹೊಮ್ಮಿ ಕವಿತೆಯಾಗಿ ಹೊರಬರುವುದು ಒಂದು ವಿಶೇಷ ಪ್ರಕ್ರಿಯೆ. ಆದರೆ ಜನಸಾಮಾನ್ಯರ ಮನೋವ್ಯಾಪಾರ ಇಂತಹ ಸನ್ನಿವೇಷಗಳಲ್ಲಿ ಹೀಗೆ ಎಂದು ಹೇಳಿಬಿಡಬಹುದು. ಒಂದೋ ಅಲ್ಲಿಂದ ಕಾಲುಕೀಳುವುದು ಇಲ್ಲ ಹೆಂಗರುಳ್ಳುಳವರು ಕೊಂಚ ಸಮಾಧಾನದ ಮಾತುಗಳನಾಡಿ ಹೊರಡಬಹುದು. ಇವೆಲ್ಲಾ ಸಾಮಾನ್ಯರ ಗುಣಲಕ್ಷಣಗಳೇ ಆದರೆ ಕವಿಯ ಮನಸ್ಥಿತಿ ಆ ಕ್ಷಣದಲ್ಲಿ ಜನಸಾಮಾನ್ಯರಂತೆ ವರ್ತಿಸಿದರೂ ಆಂತರ್ಯದಲ್ಲಿ ಆಗುವ ಪ್ರಕ್ರಿಯೇ ಬೇರೆ ರೀತಿಯದು.ಕವಿಯ ಕವಿತೆಗಳ ಒಳಹೊಕ್ಕು ನೋಡಿದಾಗ ಅವರ ಮನೋವ್ಯಾಪಾರದ ವ್ಯಾಪ್ತಿಯ ಅರಿವಾಗುತ್ತದೆ.

ಒಬ್ಬ ಹುಡುಗ ತನ್ನ ಜೀವನ ಸಂಗಾತಿಯನ್ನು ಹುಡುಕಲೋಸುಗ ತನ್ನ ಮನದಲ್ಲಿ ಮನದನ್ನೆಯ ಬಗ್ಗೆ ಅನೇಕಾನೇಕ ಲೆಕ್ಕಾಚಾರಗಳನ್ನು ಹಾಕಿಕೊಂಡಿರುತ್ತಾನೆ. ಹತ್ತು-ಹಲವು ಹುಡುಗಿಯರ ದರ್ಶನ ಪಡೆದ ನಂತರವೂ ತನ್ನ ಮನದಲ್ಲಿ ಭಾವನೆಗಳು ಗರಿಗೆದರಲಿಲ್ಲವೆಂದರೆ ಆ ಹುಡುಗಿ ತನ್ನ ಜೀವನ ಸಂಗಾತಿಯಾಗಲಾರಳು ಎಂಬ ನಿರ್ಧಾರಕ್ಕೆ ಅವನು ಬಂದಿರುತ್ತಾನೆ. ಮನಕೊಪ್ಪಿದರೆ ಮನದನ್ನೆಯನ್ನಾಗಿ ಸ್ವೀಕರಿಸಿ ದಾಂಪತ್ಯ ಜೀವನ ಸಡೆಸುತ್ತಾನೆ. ಪ್ರಥಮ ನೋಟದಲ್ಲಿ ಪ್ರೀತಿಯು ಅಂಕುರಿಸುತ್ತೆ ಅನ್ನುವ ನಂಬಿಕೆ ಕೆಲವರದು ಅದು ಎಷ್ಟು ನಿಜವೋ? ಅಥವಾ ಸುಳ್ಳೋ? ತಿಳಿದಿಲ್ಲ. ಆದರೆ ಕವಿಯ ಮನೋವ್ಯಾಪಾರ ಬೇರೆಯದೇ ರೀತಿಯಲ್ಲಿ ವ್ಯವಹರಿಸುತ್ತದೆ. ಕವಿಯು ತನ್ನ ಮನದನ್ನೆಯ ಪ್ರಥಮನೋಟದಲ್ಲಿ ಆದ ಮನೋಚಿಂತನೆಯನ್ನು ಹೀಗೆ ಚಿತ್ರಿಸಿದ್ದಾನೆ.

                             ಅಂದು ತನಕ ಬಂಧಿಸಿದ್ದ
ನನ್ನ ಮನದ ಬಾಗಿಲು
ಒಂದೇ ಸಲಕೆ ತೆರೆದುಹೋಯ್ತು
        ಅವಳು ಒಳಗೆ ಹೊಕ್ಕಳು||

ಎಷ್ಟು ಮಂದಿ ಕನ್ಯೆಯರನು
ಹಿಂದೆ ನೋಡಲಿಲ್ಲವು
ಇಷ್ಟು ಬೇಗ ನಿಲ್ಲಿ ಮನಸು
ಹಿತವನೆಂದು ಪಡೆಯಿತು?
      -ಪ್ರೊ.ತಿ.ನಂ.ಶ್ರಿ ’ ಪ್ರಥಮ ದರ್ಶನ’-ಒಲುಮೆ

ಮಿನುಗುವ ನಕ್ಷತ್ರ,ನಗುವ ಹೂ,ಚೆಲುವೆ,ಮಳೆ,ತೊರೆ,ನದಿ,ತಂಗಾಳಿ,ಬಿಸಿಲು,ನೋವು,ನಲಿವು,ಕಷ್ಟ,ನಷ್ಟ,ಚಿತ್ರ,ಶಿಲ್ಪ.......ಇತ್ಯಾದಿ. ಎಲ್ಲವೂ ಜೀವನ ವ್ಯಾಪಾರದ ವಸ್ತುಗಳೇ. ಸಾಮಾನ್ಯ ಜನರ ಮನೋವ್ಯಾಪಾರ ಒಂದು ರೀತಿಯದ್ದಾದರೆ ಕವಿಯ ಮನೋವ್ಯಾಪಾರವೇ ಒಂದು ವಿಭಿನ್ನ ರೀತಿ.

ಹೀಗೆ ಒಮ್ಮೆ ಚಿತ್ರಕಾರನ ವರ್ಣಚಿತ್ರ ಪ್ರದರ್ಶನ ನೋಡಲು ಹೋಗಿದ್ದೆ. ಅವರ ಕೃತಿಗಳೋ ಅದ್ಭುತ.ಅವು ಎಷ್ಟು ಅರ್ಥವಾಯಿತೋ ನನ್ನ ಮನಕ್ಕೆ ನಾನರಿಯೇ! ಜನ ಸಾಮಾನ್ಯರ ಸ್ಥಿತಿಯೇ ಹಾಗೆ. ಅದೊಂದು ಅದ್ಭುತ ವರ್ಣಚಿತ್ರ ಬರೆದವನು ಪ್ರಖ್ಯಾತ ಕಲಾವಿಧ ಲಿಯನಾರ್ಡೋ ಡ ವಿಂಚಿ. ಸ್ತ್ರೀಯೋರ್ವಳು ಕುರಿಮರಿಯನ್ನು ಎದೆಗೊತ್ತಿ ಹಿಡಿದು ಮತ್ತೆಲ್ಲೋ ನೋಡುತ್ತಿರುವ ವರ್ಣಚಿತ್ರವದು.ನಮ್ಮಂತಹ ಸಾಮಾನ್ಯರಿಗೆ ಅದು ಬಣ್ಣಗಳನ್ನು ತುಂಬಿದ ಒಂದು ಚಿತ್ರವಾದರೆ ಕವಿಗೆ ಅದೇ ಒಂದು ಕಾವ್ಯದ ವಸ್ತುವಾಗುತ್ತದೆ. ಕವಿ ಅದನ್ನು ಹೀಗೆ ಹೇಳುತ್ತಾನೆ.

ನೋಡುತ್ತಿದ್ದೇನೆ ಹೆಣ್ಣೇ ಕಣ್ಣಲ್ಲಿ ಕಣ್ಣಿಟ್ಟು ನಿನ್ನೇ.
ಎನ್ನುವಂತೆ ನಿನ್ನ ಹೊರತು ಜಗತ್ತೇ ಒಂದು ಸೊನ್ನೆ.
ನೀನೂ ಅಷ್ಟೆ ಎಷ್ಟು ಹಚ್ಚಿಕೊಂಡು ನೋಡು
  ತ್ತಿದ್ದೀ ನೋಡುತ್ತಿರೋದನ್ನ. ನೋಡುತ್ತಾ ಇದೆ ನಿನ್ನ

ಬೆಚ್ಚನೆ ಮೊಲೆಗೆ ಮೈ ಒತ್ತಿಕೊಂಡ ಮರಿಯೂ.
ನಿಮ್ಮನ್ನೇ ನೋಡುತ್ತಿರೋ ನನ್ನ ಪರಿವೆಯೇ ಇಲ್ಲ
ನಿಮಗೆ. ನೋಡುತ್ತಿರುವಿರಿ ನನ್ನನ್ನು ಕಃಪದಾರ್ಥ
ಮಾಡಿ ಮತ್ತೇನನ್ನೋ.......
-ಎಚ್ಚೆಸ್ವಿ
ಕವಿಯ ಮನಸ್ಸು ಹೀಗೇ ಎನ್ನಲು ಬಾರದು. ಮನೋವ್ಯಾಪಾರ ಎಲ್ಲರಲ್ಲಿಯೂ ನಡೆದರೂ ಕವಿ/ಕಲಾವಿಧರಲ್ಲಿಯ ಮನೋವ್ಯಾಪಾರ ಅನನ್ಯವಾದುದು. ಅದನ್ನೇ ’ರವಿ ಕಾಣದನ್ನು ಕವಿ ಕಂಡ’ ಎನ್ನುವುದು.
ಅಂತಹ ಅಂತಃದೃಷ್ಟಿ ನಮ್ಮಲ್ಲಿಯೂ ಬರಲಿ.ನಮ್ಮಲ್ಲಿ ನಡೆಯುವ ಮನೋವ್ಯಾಪಾರವೂ ಅನನ್ಯವಾಗಲಿ ಎಂಬ ಆಶಯದೊಂದಿಗೆ........ಕನ್ನಡ ರಾಜ್ಯೋತ್ಸವವನ್ನು ಒಂದು ವಿಭಿನ್ನ ದೃಷ್ಟಿಕೋನದಿಂದ ಆಚರಿಸೋಣ.
                   -ಕನ್ನಡ ರಾಜ್ಯೋತ್ಸವದ ಶುಭಾಷಯಗಳು-.


ಸೂಚನೆ: ಈ ಲೇಖನ ’ಕಹಳೆ’ಕನ್ನಡ ಬ್ಲಾಗ್ ಗೆ ಬರೆದದ್ದು
www.kahale.gen.in