ಗುರುವಾರ, ಡಿಸೆಂಬರ್ 9, 2010

ರಾತ್ರಿಯ ಕತ್ತಲಿನಲ್ಲಿ ಅಮ್ಮನ ಆಕ್ರಂದನ

ನಾನಾಗ ೮ನೇ ತರಗತಿಯಲ್ಲಿ ಓದುತ್ತಿದ್ದೆ, ನನ್ನ ಅಣ್ಣ ೧೦ನೇ ತರಗತಿ ಹಾಗು ನನ್ನ ಅಕ್ಕ ೯ನೇ ತರಗತಿಯಲ್ಲಿ ಇದ್ದರು.ನನ್ನ ಅಣ್ಣ ಓದಿನಲ್ಲಿ ಅಷ್ಟೇನೂ ಬುದ್ಧಿವಂತನಲ್ಲದಿದ್ದರೂ ಪೂರ್ತಿ ದಡ್ಡನಂತೂ ಆಗಿರಲಿಲ್ಲ. ಅವನಿಗೆ ಕಷ್ಟದ ವಿಷಯಗಳೆಂದರೆ ಗಣಿತ ಹಾಗು ಇಂಗ್ಲೀಷ್. ಕನ್ನಡದಲ್ಲಿ ವಾದ,ವಿತಂಡ ವಾದಗಳಲ್ಲಿ ಒಳ್ಳೆಯ ಜ್ಘ್ಯಾನವಿತೆಂಬುದು ನನ್ನ ಅಭಿಪ್ರಾಯ. ಅವನಿಗೆ ಮತ್ತೊಂದು ಇಷ್ಟವಾದುದೆಂದರೆ ಚೆನ್ನಾಗಿ ನಿದ್ದೆಮಾಡುವುದು. ಎಷ್ಟೇ ಸಮಯದಲ್ಲಿ ನಿದ್ದೆ ಮಾಡಬೇಕೆಂದರೂ ನಿದ್ದೆ ಮಾಡುವ ತಾಕತ್ತು ಅವನಿಗಿತ್ತು. ಅದು ಈಗಲೂ ಮುಂದುವರೆದಿದೆ. ಮೊದಲನೇ ಸಲವೇ ಪರೀಕ್ಷೆಯಲ್ಲಿ ಪಾಸಾಗಬೇಕೆಂಬುದು ಪ್ರತಿಯೊಬ್ಬ ವಿದ್ಯಾರ್ಥಿಯ ಕನಸಾಗಿರುತ್ತದೆ. ಅದೇ ರೀತಿ ನನ್ನ ತಂದೆ-ತಾಯಿಯ ಕನಸೂ ನನ್ನ ಅಣ್ಣ ಪರೀಕ್ಷೆಯಲ್ಲಿ ಪಾಸಾಗುವುದೇ ಆಗಿತ್ತು.ಅದಕ್ಕಾಗಿಯೇ ಮನೆಪಾಠಕ್ಕೆ ಹಾಕಲಾಗಿತ್ತು.ತಂದೆ-ತಾಯಿಯ ಪ್ರಯತ್ನ ಎಷ್ಟಾದರೂ ಅವನ ಪ್ರಯತ್ನವಂತೂ ಇರಲಿಲ್ಲ. ಅವನಿಗೆ ಪರೀಕ್ಷೆಯೆಂದರೆ ಭಯಲಿರಲಿಲ್ಲ ನಿಜ ಆದರೆ ಓದಿನ ಬಗ್ಗೆ ಗಮನವಿರಲಿಲ್ಲ. ಅದನ್ನು ಮನದಟ್ಟು ಮಾಡಿಸುವ ಗುರು ತಾನೆ ಎಲ್ಲರೂ ಹುಡುಕುವುದು! ಆ ಸಮಯದಲ್ಲಿ ಅಂತಹ ಗುರು ಅವನಿಗೆ ಸಿಗಲೇಯಿಲ್ಲ. ಹೀಗಾಗಿ ಅವನಿಗೆ ಏನು ತೊಂದರೆಯಾಗುತ್ತಿದೆ ಅನ್ನುವುದು ಯಾರಿಗೂ ತಿಳಿಯಲಿಲ್ಲ ಅಥವಾ ಅರ್ಥ ಮಾಡಿಕೊಳ್ಳುವ ಮನಸ್ಸುಗಳು ಯಾವುದೂ ಇರಲಿಲ್ಲವೆನ್ನಬೇಕು. ಹಾಗೆ ಅಜ್ಜ್ಯಾನದಿಂದ ಅವನ ಚರ್ಯೆಯಿಂದ ತಿಳಿಯುವ ವ್ಯವಧಾನವೂ ಯಾರಿಗೂ ಇರಲಿಲ್ಲವೋ ಏನೋ? ನನಗೆ ಅಷ್ಟಾಗಿ ಗೊತ್ತಿಲ್ಲ, ಆ ವಯಸಿನಲ್ಲಿ ಅದನ್ನು ಯೋಚಿಸುವ ಬುದ್ಧಿಯೊ ನನ್ನದಾಗಿರಲಿಲ್ಲ. ಆ ವಯಸ್ಸಿನಲ್ಲಿ ನಮ್ಮ ಬಗ್ಗೆ ಇರುವ ಖಾಳಜಿ ಬೇರೆಯವರ ಬಗ್ಗೆ ಇರೋದಿಲ್ಲ ಅಲ್ಲವೇ!. ಅವನು ಯಾರೊಂದಿಗೂ ಅಷ್ಟಾಗಿ ಬೆರೆಯುತ್ತಿರಲಿಲ್ಲ, ಮನೆಯಿಂದ ಯಾವಾಗಲೂ ಹೊರಗೇ ಇರುತ್ತಿದ್ದ. ಅವನು ಯಾವಾಗ ಓದುತ್ತಿದ್ದ,ಬರೆಯುತ್ತಿದ್ದ ಅನ್ನೋದೇ ನನಗೆ ಗೊತ್ತೇ ಆಗ್ತಾ ಇರ್ಲಿಲ್ಲ.
ಪರೀಕ್ಷೆಯ ದಿನ ಬಂದೇ ಬಂತು, ಅವನಿಗಿಂತ ನನ್ನ ಅಮ್ಮನಿಗೇ ಆತಂಕ ಹೆಚ್ಚಾಗಿತ್ತು. ನನ್ನ ತಂದೆಗೆ ಪರೀಕ್ಷೆಯಲ್ಲಿ ಏನಾಗಬಹುದೆಂದು ಮೊದಲೇ ತಿಳಿದಿತ್ತು. ಪರೀಕ್ಷೆಯೆಲ್ಲಾ ಮುಗಿದ ಮೇಲೆ ಎಲ್ಲರಿಗೂ ಒಂದು ರಿತಿ ನಿರಾಳ. ಆದರೆ ಮುಂದೆ ಆಗಬಹುದಾದ್ದನ್ನು ಯಾರೂ ನಿರೀಕ್ಷಿಸಿರಲಿಲ್ಲ.
ಪರೀಕ್ಷೆಯಾದ ಮೇಲೆ ಫಲಿತಾಂಹದ ಬಗ್ಗೆ ಎಲ್ಲರಿಗೂ ಕುತೂಹಲ ಇದ್ದೇ ಇರುತ್ತದೆ ಹಾಗೇ ನನ್ನ ಮನೆಯಲ್ಲೂ ಅಣ್ಣನ ಫಲಿತಾಂಶದ ಬಗ್ಗೆ ಎಲ್ಲರಿಗೂ ಕುತೂಹಲ ಇತ್ತು. ಅಂದು ಪರೀಕ್ಷೆಯ ಫಲಿತಾಂಶ ಪ್ರಕಟವಾಗಿತ್ತು. ಬೆಳಿಗ್ಗೆ ಅಣ್ಣನ ಮುಖ ನೋಡಿದ ನೆನಪು ನನಗಿಲ್ಲ, ಮಧ್ಯಾಹ್ನದವರೆಗೂ ಅವನ ಸುಳಿವು ಯಾರಿಗೂ ಇರಲಿಲ್ಲ. ನನ್ನ ತಂದೆ ಆಫೀಸಿನಿಂದ ಬೇಗನೆ ಅವನ ಫಲಿತಾಂಶದ ನಿರೀಕ್ಷೆಯಲ್ಲಿ ಕುತೂಹಲದಿಂದಲೇ ಬಂದಿದ್ದರು. ಅವನು ಪರೀಕ್ಷೆಯಲ್ಲಿ ನಿರೀಕ್ಷೆಯಂತೆ ಗಣಿತ ಹಾಗು ಇಂಗ್ಲೀಷ್ ವಿಷಯದಲ್ಲಿ ನಪಾಸಾಗಿದ್ದ. ನಮಗೆಲ್ಲಾ ಅವನು ನಪಾಸಾಗಿದ್ದು ಒಂದು ದುಃಖದ ವಿಷಯವಾದರೆ, ಅವನು ಮನೆಗೆ ಬಾರದೇ ಇದ್ದದ್ದು ಮತ್ತೊಂದು ಅಘಾತಕರ ವಿಷಯವೂ ಆಗಿತ್ತು. ಅವನು ತಂದೆ-ತಾಯಿಯಿಂದ ಬೈಗಳನ್ನು ತಪ್ಪಿಸಿಕೊಳ್ಳಲು ಮನೆ~ಊರನ್ನು ಬಿಟ್ಟು ಎಲ್ಲೋ ಹೋಗಿಬಿಟ್ಟಿದ್ದ. ತಂದೆ-ತಾಯಿಗಂತೂ ಯೋಚನೆ ಹತ್ತಿತು. ಎಲ್ಲಿ ಹೋದನೋ? ಎಲ್ಲಿ ಊಟ ಮಾಡ್ತಾನೋ? ಎಲ್ಲಿ ಮಲಗುವನೋ? ಎಂದು. ಜೊತೆಗೆ ಹುಡುಕುವ ಪ್ರಯತ್ನವನ್ನೂ ಮಾಡಬೇಕು.ಸುಳಿವು ಸಿಕ್ಕರೆ ಹುಡುಕುವುದು ಸುಲಭವಾಗುತ್ತಿತ್ತೇನೋ? ಅವನ ಗೆಳೆಯರಿಗೂ ಯಾವುದೇ ಸುಳಿವು ಇಲ್ಲದೇಯಿದ್ದದ್ದು ಹುಡುಕುವುದಕ್ಕೆ ಮತ್ತಷ್ಟು ಕಷ್ಟವಾಯಿತು.
೧೫ ದಿನಗಳು ಕಳೆದರೂ ಅವನ ಯಾವುದೇ ಸುಳಿವು ಇರಲಿಲ್ಲ. ಮನೆಯಲ್ಲಿ ತಂದೆ-ತಾಯಿ ಗೆ ಮನಸ್ಸಿಗೆ ನೆಮ್ಮದಿಯಿಲ್ಲದೇ ಕೊರಗಿ ಕೊರಗಿ ಸಣ್ಣಗಾಗಿದ್ದರು. ತಂದೆಯಂತೂ ಆಫೀಸಿನ ಕೆಲಸದ ಜೊತೆಗೆ ಅವನ ಹುಡುಕುವ ಪ್ರಯತ್ನವನ್ನೂ ಮಾಡುತ್ತಿದ್ದರು. ತಾಯಿಗಂತೂ ಯಾವಾಗಲೂ ಅವನದೇ ಚಿಂತೆ, ಊಟ,ನಿದ್ದೆ ಎಲ್ಲವೂ ಅವರಿಂದ ಮಾಯವಾಗಿತ್ತು. ಸದಾ ಅವನದೇ ಚಿಂತೆ, ರಾತ್ರಿ ಕತ್ತಲಿಲಲ್ಲಿ ಅವರ ನೋವು ಅಳುವಾಗಿ ಹೊರಬರುತ್ತಿತ್ತು. ಅಮ್ಮನ ಆ ಕನವರಿಕೆ, ಆಕ್ರಂದನ ಈಗಲೂ ನನಗೆ ಕಣ್ಣೀರು ತರಿಸುತ್ತದೆ. ಆ ಕತ್ತಲ ರಾತ್ರಿಯಲ್ಲಿ ನನಗೂ ನಿದ್ದೆ ಬಾರದೆ ದೇವರಲ್ಲಿ ಪ್ರಾರ್ಥಿಸಿತ್ತಿದ್ದೆ " ಓ! ದೇವರೆ, ನನ್ನ ಅಮ್ಮನ ನೋವನ್ನು ಪರಿಹರಿಸು. ಆ ನೋವನ್ನೆಲ್ಲಾ ನನಗೇ ಕೊಡು" ಎಂದು ಮತ್ತು ಹಾಗೇ ನಾನು ನಿರ್ದರಿಸಿದ್ದೆ ನನ್ನಿಂದ ಯಾವುದೇ ಕಾರಣಕ್ಕೂ ಅಮ್ಮನ ಕಣ್ಣಲ್ಲಿ ನೀರು ಬರುವುದಿಲ್ಲ, ಅಮ್ಮನನ್ನು ಸಂತೋಷದಿಂದ ನೋಡಿಕೊಳ್ಳುತ್ತೇನೆಂದು. ಆ ನಿಟ್ಟಿನಲ್ಲಿ ಈಗಲೂ ನನ್ನ ಪ್ರಯತ್ನ ಮುಂದುವರೆದಿದೆ.
ಕೊನೆಗೂ ಅವನ ಸುಳಿವು ಸಿಕ್ಕು ಅವನು ಮತ್ತೆ ಮನೆಗೆ ಬಂದ.ಅಮ್ಮ ಅಂದೇ ನಿರ್ಧರಿಸಿದ್ದರು ಪರೀಕ್ಷೆಯಲ್ಲಿ ತಾನೇ ಗುರುವಾಗಿ ದಡಮುಟ್ಟಿಸುವೆನೆಂದು. ಅದರಂತೆಯೇ ದಿನವೂ ಮನೆಯಲ್ಲೇ ಪಾಠ ಹೇಳಿದರು. ಅದೇ ವರ್ಷದಲ್ಲಿ ನನ್ನಣ್ಣ ಮತ್ತೆ ಪರೀಕ್ಷೆ ಬರೆದ. ಫಲಿತಾಂಶದ ದಿನಕ್ಕೆ ಒಂದೆರಡು ದಿನಗಳು ಮುಂಚೆಯೇ ಎಚ್ಚರಿಕೆ ವಹಿಸಿ ಅಣ್ಣನನ್ನು ಮನೆಯಿಂದ ಎಲ್ಲೂ ಹೊರಗೆ ಬಿಡುತ್ತಿರಲಿಲ್ಲ. ಫಲಿತಾಂಶದ ದಿನವಂತೂ ಅವನು ಅಕ್ಷರಹ ರೂಮಿನಲ್ಲಿ ಬಂಧಿಯಾಗಿದ್ದ. ಫಲಿತಾಂಶ " ಪಾಸಾಗಿದ್ದಾನೆ" ಎಂದು ತಿಳಿದಾಗ ಅಮ್ಮನ ಕಣ್ಣಲಿ ಆನಂದ ಭಾಷ್ಪ ಹರಿಯಿತು.
ಇವೆಲ್ಲಾ ನಡೆದು ಸುಮಾರು ೨೨ ವರ್ಷಗಳೆ ಕಳೆದರೂ ನನ್ನ ಮನದಲ್ಲಿ ಅಂದಿನ ಪ್ರತಿಯೊಂದು ಕ್ಷಣವೂ ಹಸಿರಾಗೇ ಇದೆ.ರಾತ್ರಿಯ ಕತ್ತಲಿನಲ್ಲಿ ಅಮ್ಮನ ಅಳು, ಆಕ್ರಂದನ ಇಂದಿಗೂ ನನ್ನನ್ನು ಹಿಂಸಿಸುತ್ತದೆ ,ಅಮ್ಮನಿಗಾಗಿ ಹಂಬಲಿಸುತ್ತದೆ.

ಶುಕ್ರವಾರ, ಡಿಸೆಂಬರ್ 3, 2010

ಗೆಳತಿಗೊಂದು ಪತ್ರ

ಗೆಳತಿ ಹೇಗಿದ್ದೀಯ? ಎಷ್ಟು ವರುಷಗಳಾಗಿ ಹೋಯಿತಲ್ಲವೇ ಭೇಟಿಯಾಗಿ?ಜೀವನದ ಒಂದೊಂದೇ ಮಜಲುಗಳನ್ನು ದಾಟಿದ್ದೇವೆ. ಜೀವನ ಎನ್ನುವ ಪಾಠಶಾಲೆಯಲ್ಲಿ ಹದವಾಗುತ್ತಿದ್ದೇವೆ ಎನಿಸುವುದಿಲ್ಲವೇ? ಮನಸ್ಸು ಅರಳಿ ಕಂಪನ್ನು ಬೀರುವ ಸಮಯ ಇದೇ ಅಲ್ಲವೇ!?. ಜೀವನದ ಜಂಜಡಗಳಲ್ಲಿ ಎಷ್ಟೋ ಮಧುರ ಕ್ಷಣಗಳು ನೆನಪಿಗೆ ಬಾರದೇ ಜಾರಿ ಹೋಗಿರುತ್ತದೆ, ಆ ನೆನಪೇ ಜೀವನದಲ್ಲಿ ಉಲ್ಲಾಸ ತರುತ್ತದೆ ಅನ್ನೋದು ನಿಜ ಹಾಗೂ ಸಹಜ ಕೂಡ. ಆ ಅನುಭವ ನಿನಗಾಗಿದೆಯೇ? ಸಂಸಾರದ ನಾಲ್ಕು ಗೋಡೆಗಳ ಮಧ್ಯೆ ಯಾಂತ್ರಿಕ ಬದುಕಿನಲ್ಲಿ ಕಳೆದುಹೋಗಬೇಡ. ಪ್ರಕೃತಿಯ ಸೌಂದರ್ಯವನ್ನು ಅನುಭವಿಸು. ಮನಸ್ಸು ಪೂರ್ಣಪ್ರಮಾಣದಲ್ಲಿ ಅರಳುವತ್ತ ನಿನ್ನ ಗಮನವಿರಲಿ. ನಿನ್ನ ಅನುಭವಗಳು ಹೊಸರೂಪ ಪಡೆಯಲಿ, ಅದು ನೊಂದವರ ಭಾಳಿನ ದಾರಿಧೀಪವಾಗುತ್ತೆ.ಇಷ್ಟೋಂದೆಲ್ಲಾ ನಿನಗೂ ತಿಳಿದಿದೆ ಆದರೆ ಚಿಪ್ಪಿನಿಂದ ಹೊರಬರದೆ ಇರೋ ಮುತ್ತಿನಂತೆ ನೀನೂ ಕೂಡ. ಆ ಸಂಕೋಲೆ ಅನ್ನುವಂತಹ ಪರಿಧಿಯನ್ನು ದಾಟಬೇಕು. ವಿಶಾಲವಾದ ಪ್ರಪಂಚ ನಿನಗಾಗಿ ಕಾದಿದೆ ಕಣ್ತೆರೆದು ನೋಡು ಬಾ ಗೆಳತಿ. ಏನೋ ಉದ್ದುದ್ದ ಬರೆಯುತ್ತಾನೆ, ಹೇಳೋ ಅಷ್ಟು ಜೀವನ ಸುಲಭವಲ್ಲ ಅಂತ ನನ್ನ ಮಾತುಗಳನ್ನು ನಿರ್ಲಕ್ಷಿಸಬೇಡ. ನಿನ್ನ ಮಾತುಗಳು ನಿಜವಾದರೂ ಪ್ರಾಣಿಗಳಂತೆ ಬಂದು ಹೋಗುವುದಕ್ಕಂತೂ ನಾವು ಮನುಷ್ಯರು ಇಲ್ಲಿಗೆ ಬಂದಿಲ್ಲ ಅಲ್ಲವೇ? ನಮ್ಮ ಹುಟ್ಟಿಗೆ ಕಾರಣ ಬಹಳಷ್ಟು ಇರಬಹುದು ಅದನ್ನು ತಿಳಿದು ನಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆಯೇ ಹೊರತು ಬೇರೆಯವರು ನಮ್ಮನ್ನು ಉದ್ಧಾರ ಮಾಡುತ್ತಾರೆ ಅಂತ ಅವರಿಗಾಗಿ ಕಾಯುವುದು ಎಷ್ಟು ಸಮಂಜಸ ನೀನೇ ಹೇಳು ಗೆಳತಿ. ನನಗಾಗಿ ನೀನು ಕಾಯುವಂತೆ, ನಿನಗಾಗಿ ನಾನು ಕಾಯುವಂತೆ ಸಾರ್ಥಕತೆಗೆ ನಾವು ಕಾಯಬಾರದಲ್ಲವೇ? ನಮ್ಮ ಪ್ರಯತ್ನ ಮಾತ್ರ ನಿರಂತರವಾಗಿ ಸಾಗುತ್ತಲ್ಲೇ ಇರಬೇಕಲ್ಲವೇ? ನಿನ್ನ ನೆನೆಪೊಂದೇ ಸಾಕೆನಗೆ ನಗುನಗುತ್ತಾ ಈ ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸಲು ಆದರೆ ನೀನೇ ಹೀಗೆ ಕೈಕಟ್ಟಿ ಕುಳಿತು ಚಿಂತೆಗೆ ಬಿದ್ದರೆ ನನ್ನ ಸ್ಥಿತಿ ಏನಾಗಬೇಡ ನೀನೇ ಹೇಳು. ನೀನೆಷ್ಟು ಖುಷಿಯಾಗುದ್ದರೆ ಅದರ ಎರಡು ಪಟ್ಟು ಖುಷಿ ನನಗಿಲ್ಲಿ ಆಗುತ್ತೆ. ಆಕಾಶದಲ್ಲಿ ಚಂದ್ರ ನಕ್ಕರೆ ಹೇಗೆ ತಾವರೆಗಳು ನಕ್ಕು ಪರಿಮಳ ಸೂಸುವುದೋ ಹಾಗೇ ನೀನು ನನ್ನ ಚಂದ್ರಿಕೆ. ನಿನ್ನ ತುಟಿಯಂಚಿನ ನಗುವು ಎಂದೆಂದಿಗೂ ನನ್ನದೇ ಅಲ್ಲವೇ! ಅಮಾವಾಸ್ಯೆ ಎಂದೂ ಶಾಶ್ವತವಲ್ಲ, ಆ ಕತ್ತಲೇ ಕ್ಷಣಿಕ, ಕತ್ತಲು ಕಳೆದ ಮೇಲೆ ಬೆಳಕು ಚಿಗುರಲೇ ಬೇಕು. ನಿನ್ನ ಕತ್ತಲಿನಿಂದ ಹೊರಗೆ ಬಾ.. ನಿನಗಾಗಿ ಈ ಪ್ರಪಂಚ ಕಾಯುತ್ತಿದೆ, ಯಾರು ನಿನ್ನನ್ನು ಗುರುತಿಸದೇಯಿದ್ದರೂ ಚಿಂತೆಯಿಲ್ಲ ನಾನು ನಿನ್ನೊಂದಿಗೆ ಇದ್ದೇನೆ. ನಿನ್ನ ಏಳಿಗೆಯನ್ನು ನೋಡಿ ಸಂತೋಷಪಡುವವರಲ್ಲಿ ನಾನೇ ಮೊದಲಿಗ. ಬಾ ಗೆಳತಿ ಬಾ ನಿನಗಾಗಿ ಕಾಯುತ್ತಿರುವೆ.

ದೃಷ್ಟಿಕೋನ

ಒಮ್ಮೆ ಶ್ರೀಮಂತ ಕುಟುಂಬಕ್ಕೆ ಸೇರಿದ ತಂದೆ ತನ್ನ ಮಗನನ್ನು ಕರೆದುಕೊಂಡು ದೇಶದ ಹಳ್ಳಿ-ಹಳ್ಳಿಗಳನ್ನು ಸಂದರ್ಶಿಸಲು ಹೊರಟ. ಈ ದೇಶ ಸಂಚಾರದ ಮೊಲ ಉದ್ದೇಶ ಮಗನಿಗೆ ಬಡಜನರ ಸ್ಥಿತಿ-ಗತಿಗಳನ್ನು ಪರಿಚಯಿಸುವುದೇ ಆಗಿತ್ತು.

ತಂದೆ ಹಾಗು ಮಗ ಇಬ್ಬರೂ ಕೆಲವು ದಿನಗಳನ್ನು ಹಳ್ಳಿ-ಹಳ್ಳಿಗಳಲ್ಲಿ ಸಂಚರಿಸಿ ಬಡತನದ ಪ್ರತ್ಯಕ್ಷ ದರ್ಶನವನ್ನು ಪಡೆದರು. ದೇಶ ಸಂಚಾರದಿಂದ ಹಿಂತಿರುಗಿದ ಬಳಿಕ ತಂದೆ ಮಗನನ್ನು ಕುರಿತು " ಮಗು ದೇಶ ಸಂಚಾರ, ಬಡತನದ ದರ್ಶನ ಹೇಗಿತ್ತು?" ಮಗ ಉತ್ತರಿಸುತ್ತಾ "ತುಂಬಾ ಚೆನ್ನಾಗಿತ್ತು ತಂದೆಯೇ"ಎಂದ."ಬಡಜನರು ಹೇಗೆ ಜೀವಿಸುತ್ತಾರೆ ಎಂಬುದು ನಿನಗೆ ತಳಿಯಿತಲ್ಲವೇ?"ತಂದೆ ಮಗನನ್ನು ಮರು ಪ್ರಶ್ನಿಸಿದರು. " ಹೌದು" ಎಂದುತ್ತರಿಸಿದ ಮಗ. "ಮಗು ಹಾಗಾದರೆ ಈ ದೇಶ ಸಂಚಾರದಿಂದ ನಿನಗೆ ಏನು ಮನವರಿಕೆಯಾಯಿತು? ಹೇಳು" ತಂದೆ ಮಗನನ್ನು ಪ್ರಶ್ನಿಸಿದ. ಮಗ ಉತ್ತರವಾಗಿ " ತಂದೆಯೇ! ನಮ್ಮ ಬಳಿ ಒಂದೇ ಒಂದು ಸಾಕು ನಾಯಿಯಿದೆ ಆದರೆ ಅವರ ಬಳಿ ನಾಲ್ಕಕ್ಕಿಂತ ಹೆಚ್ಚು ನಾಯಿಗಳಿವೆ. ನಮ್ಮ ಬಳಿ ಆಮದಾದ ವಿದೇಶಿ ಕಂದೀಲುಗಳಿವೆ ಅದರೆ ಅವರ ಬಳಿ ಆಕಾಶದ ರಾತ್ರಿ ನಕ್ಷತ್ರಗಳು, ಹುಣ್ಣಿಮೆಯ ಚಂದ್ರನಿದ್ದಾನೆ. ನಮ್ಮ ಮನೆ ಹಾಗು ಉದ್ಯಾನವನಕ್ಕೆ ಸೀಮಿತವಾದ ತಡೆಗೋದೆಗಳಿವೆ ಆದರೆ ಅವರಿಗೆ ವಿಸ್ತಾರವಾದ ಭೂಮಿಯೇ ಇದೆ. ನಮ್ಮ ಬಳಿ ಚಿಕ್ಕದಾದ ಜಾಗವಿದೆ ವಾಸ್ತವ್ಯಕ್ಕೆ ಆದರೆ ಅವರ ಬಳಿ ಕಣ್ಣಿಗೆಟುಕದಷ್ಟು ಅಗಾಧವಾದ ಜಾಗವಿದೆ. ನಮ್ಮ ಬಳಿ ಅನೇಕ ಕೆಲಸಗಾರರು, ಸಹಾಯಕರಿದ್ದಾರೆ ಆದರೆ ಅವರೆಲ್ಲರೂ ಬೇರೆಯವರಿಗೆ ಸಹಾಯ ಮಾಡುತ್ತಾರೆ. ನಾವು ನಮ್ಮ ಆಹಾರ ಧಾನ್ಯಗಳನ್ನು ಹಣದಿಂದ ಕೊಂಡುಕೊಳ್ಳುತ್ತೇವೆ ಆದರೆ ಅವರು ತಮ್ಮ ಆಹಾರ ಧಾನ್ಯಗಳನ್ನು ಅವರೇ ಬೆಳೆದುಕೊಳ್ಳುತ್ತಾರೆ. ನಮ್ಮ ಆಸ್ತಿಯನ್ನು ರಕ್ಷಿಸಲು ದೊಡ್ಡ-ದೊಡ್ಡ ಗೋಡೆಗಳಿವೆ ಆದರೆ ಅವರಿಗೆ ಆತ್ಮೀಯ ಸ್ನೇಹಿತರಿದ್ದಾರೆ ರಕ್ಷಿಸಲು". ಮಗನ ಮಾತುಗಳನ್ನು ಆಲಿಸಿ ತಂದೆ ಸ್ತಂಭಿತನಾದ. ಮಗ ತನ್ನ ಮಾತುಗಳನ್ನು ಮುಂದುವರೆಸುತ್ತಾ " ತಂದೆಯೇ! ನಿನಗೆ ಧನ್ಯವಾದಗಳು ನನ್ನ ಕಣ್ಣುಗಳನ್ನು ತೆರೆಸಿದ್ದಕ್ಕೆ, ನಾವು ಎಷ್ಟು ಬಡವರೆಂದು ತೋರಿಸಿದ್ದಕ್ಕೆ" ಎಂದ.

ವಾವ್! ಎಂತಹ ಅದ್ಭುತ ದೃಷ್ಟಿಕೋನವಲ್ಲವೇ!. ನಮ್ಮ ಬಳಿಯಿರುವುದಕ್ಕೆ ನಾವು ಸಂತೋಷಪಡಬೇಕು, ಪರರ ಬಳಿ ಇರುವುದು ನಮ್ಮ ಬಳಿಯಿಲ್ಲವೆಂದು ದುಃಖಪಡುವುದು,ಕೊರಗುವುದು ಸಮಂಜಸವಲ್ಲ ಅಲ್ಲವೇ!