ಗುರುವಾರ, ಅಕ್ಟೋಬರ್ 28, 2010

-ನಮ್ಮ ಏಳಿಗೆಗೆ ನಾವೇ ಶಿಲ್ಪಿಗಳು-

ಉದ್ಧರೇದಾತ್ಮನಾ ಆತ್ಮಾನಂ ನಾತ್ಮಾನಂ ಅವಸಾದಯೇತ್\
ಆತ್ಮೈವಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ\\
" ನಮ್ಮನ್ನು ನಾವೇ ಉದ್ಧರಿಸಿಕೊಳ್ಳಬೇಕು, ನಮ್ಮನ್ನು ನಾವೇ ಅವನತಿಗೀಡು ಮಾಡಿಕೊಳ್ಳಬಾರದು.
ನಮ್ಮ ಉದ್ಧಾರವಾಗಲಿ,ಅವನತಿಯಾಗಲೀ ಇರುವುದು ನಮ್ಮ ಕೈಯಲ್ಲೇ. ನಮ್ಮ ಒಳಿತಿಗೋ,ಕೆಡುಕಿಗೋ
ಕಾರಣರಾಗಿ ನಾವೇ ನಮ್ಮ ಮಿತ್ರರೂ,ಶತೃಗಳೂ ಆಗಬಲ್ಲೆವು"
ವ್ಯಕ್ತಿ ವಿಕಸನದ ಸಾಧನೆಯ ಈ ಮೊಲ ತತ್ವವನ್ನು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಜಗತ್ತಿಗೆ ಸಾರಿದ್ದಾನೆ.
ಜಗತ್ತಿನ ಪ್ರತಿಯೊಬ್ಬರೂ "ಅಮೃತ ಪುತ್ರ"ರು ಎಂದು ವೇದ ಹೇಳುತ್ತದೆ. ಹಾಗೆಯೇ ಪ್ರತಿಯೊಬ್ಬರ ಆಂತರ್ಯದಲ್ಲೂ ಅಪಾರವಾದ ಶಕ್ತಿ ಸುಪ್ತವಾಗಿದೆ. ಆ ಸುಪ್ತಶಕ್ತಿಯನ್ನು ಪ್ರಯತ್ನಶೀಲತೆಯಿಂದ ಚಾಲನೆಗೆ ತರಬೇಕಾಗಿದೆ. ಆ ಪ್ರಯತ್ನದಲ್ಲಿ ಸೋಲಾದಾಗ ಅಥವಾ ಪ್ರಯತ್ನಶೀಲರಾಗದೇ ಹೋದಲ್ಲಿ ಆ ಅಪಾರವಾದ ಶಕ್ತಿ ಉಪಯೋಗಕ್ಕೆ ಬಾರದೇ ನಂದಿ ಹೋಗುತ್ತದೆ.ದೊಡ್ಡ ಹೆಸರಾಂತ ಸಂಸ್ಥೆಯಲ್ಲಿ ನೂರಾರು-ಸಾವಿರಾರು ಕೆಲಸಗಾರರು ಕೆಲಸ ಮಾಡುತ್ತಾರೆ, ಆದರೆ ಎಷ್ಟು ಜನ ತಮ್ಮ ಪಾಲಿನ ಕೆಲಸವನ್ನು ಮಹೋನ್ನತವಾಗಿ ಮಾಡುತ್ತಾರೆ? ಅಸಡ್ಡೆ, ಅನಾಸಕ್ತಿಯಿಂದ ಮಾಡುವ ಕೆಲಸದಿಂದ ಅಭಿವೃದ್ಧಿ ಸಾಧಿಸುವುದಾದರೂ ಹೇಗೆ? ಪ್ರಖ್ಯಾತ ಅಂತಾರಾಷ್ಟ್ರೀಯ ತರಭೇತುದಾರನಿಂದ ನಾನು ತರಭೇತಿ ಪಡೆದು ನಾನು ವಿಫಲನಾದರೆ ಅದಕ್ಕೆ ಕಾರಣ ನಾನೇ ಹೊರತು ನನ್ನ ತರಭೇತುದಾರನಲ್ಲ ಅಲ್ಲವೇ!. ಅಂದರೆ ನಮ್ಮ ಪ್ರಯತ್ನ ಹೇಗೋ ಹಾಗೇ ನಮ್ಮ ಅಭಿವೃದ್ಧಿಯೊ ಹಾಗೇ ಇರುತ್ತದೆ. ಗುರಿ ಸಾಧಿಸುವುದಕ್ಕೆ ಅಚಲ ಶ್ರದ್ಧೆಯ ಅವಶ್ಯಕತೆ ಬೇಕೇ ಬೇಕು. ನಮ್ಮ ಮನಸ್ಸು ಎಷ್ಟು ನಿರ್ಮಲವಾಗಿರುತ್ತದೋ ನಮ್ಮ ಕೆಲಸ ಕಾರ್ಯಗಳೂ ಅಷ್ಟೇ ಗಟ್ಟಿಯಾಗಿರುತ್ತದೆ. ನಕಾರಾತ್ಮಕ ಧೋರಣೆ ಮನದಲ್ಲಿ ಸುಳಿಯಿತೆಂದರೆ, ನಮ್ಮ ಅಧಃಪತನ ಆರಂಭವಾದಂತೆಯೇ ಸರಿ. ಹಾಗೆ ನಮ್ಮ ಮನವನ್ನು ಸಕಾರಾತ್ಮಕ ಧೋರಣೆಯ ಚೌಕಟ್ಟಿನಲ್ಲಿ ವ್ಯವಸ್ಥಿತವಾಗಿಡುವ ಜವಾಬ್ದಾರಿ ವ್ಯಕ್ತಿಗತವಾದದ್ದೇ ಅಲ್ಲವೇ?. ಒಂದು ಮೊಟ್ಟೆಗೆ ನಾವು ಹೊರಗಿನಿಂದ ಶಕ್ತಿ ಪ್ರಯೋಗಿಸಿದರೆ ಅದರ ಸರ್ವನಾಶ ಶತಸಿದ್ಧ, ಅದೇ ಒಳಗಿನಿಂದ ಉಂಟಾಗುವ ಘರ್ಷಣೆಯ ಒತ್ತಡದ ಶಕ್ತಿ ಒಂದು ಜೀವದ ಹುಟ್ಟಿಗೆ ಕಾರಣವಾಗುತ್ತದೆ.ಅಂದರೆ ನಮ್ಮಲ್ಲಿ ಆವಿರ್ಭವಿಸುವ ಅಂತರಾತ್ಮದ ಶಕ್ತಿ ಅಪಾರವಾದುದು ಅದರಿಂದ ಲೋಕ ಉದ್ಧಾರವಾಗುತ್ತದೆ. ಅಂತಹ ಶಕ್ತಿ ಪ್ರತಿಯೊಬ್ಬರಲ್ಲಿಯೊ ಇದೆ. ಆದರೆ ಅದನ್ನು ಹೊರತೆಗೆಯಲು ನಮ್ಮ ಪ್ರಯತ್ನ ಪ್ರಾಮಾಣಿಕವಾಗಿರಬೇಕಷ್ಟೆ.
ಕೃಷ್ಣ ಬಯಸುತ್ತಾನೆ ನಾವು ಆತ್ಮಶಕ್ತಿಯ ಸಾಗರವಾಗಬೇಕು,ಅಂತಹ ಆತ್ಮಶಕ್ತಿಯಿಂದ ನಾವು ಏನನ್ನಾದರೂ ಸಾಧಿಸಬಹುದು ಅಥವಾ ಅದೇ ಆತ್ಮಶಕ್ತಿ ನಕಾರಾತ್ಮಕವಾಗಿದ್ದರೆ ಅದೇ ನಮ್ಮ ಕೆಡುಕಿಗೆ ದಾರಿಮಾಡಿಕೊಡುತ್ತದೆ. ಮಹಾಭಾರತದ ಪಾತ್ರಗಳಾದ ದುರ್ಯೋಧನ,ದುಶ್ಯಾಸನ ಹಾಗು ಕರ್ಣಗಳ ಪಾತ್ರಗಳಿಂದ ಕಲಿಯಬೇಕಾದಂತಹ ಪಾಠವೂ ಅದೇ ಅಲ್ಲವೇ?
ನಮ್ಮ ನಡೆ ಹೇಗಿದೆ? ಅದೇ ನಾವು ಪಯಣಿಸುವ ದಾರಿಯನ್ನು ತೋರಿಸುತ್ತದೆ. ಇದನ್ನೇ ಕೃಷ್ಣ ’ನಿನ್ನ ಉದ್ಧಾರವನ್ನು ನೀನೇ ಮಾಡಿಕೋ" ಎಂದು ಹೇಳಿರುವುದು. ನಮ್ಮ ಏಳಿಗೆಗೆ ನಾವೇ ಶಿಲ್ಪಿಗಳೇ ಹೊರತು ಬೇರೆಯವರು ಖಂಡಿತ ಅಲ್ಲ. ನಮ್ಮ ಏಳಿಗೆಗೆ ಬೇರೆಯವರನ್ನು ಹೊಣೆಗಾರರನ್ನಾಗಿಸುವವರು ಹೇಡಿಗಳಲ್ಲದೇ ಮಾತೇನು ಆಗಿರಲು ಸಾಧ್ಯ. ಹೀಗಾಗಿ ನಾವು ನಡೆಯುತ್ತಿರುವ ದಾರಿಯನ್ನು ಅರಿಯೋಣ, ಅರಿವಿನ ದಾರಿದೀಪದಲ್ಲಿ ನಮ್ಮ ಏಳಿಗೆಯೊ ಅಡಗಿದೆ. ಬನ್ನಿ ನಮ್ಮ ನಾವು ಅರಿಯೋಣ, ನಮ್ಮ ಜೀವನದ ಶಿಲ್ಪಿಗಳು ನಾವೇ ಆಗೋಣ.

ಭಾನುವಾರ, ಅಕ್ಟೋಬರ್ 17, 2010

ಒಂದು ರೂಪಾಯಿ ಹೆಚ್ಚಿಗೆ ಸಂಪಾದಿಸಲು ಸಲಹೆ ಕೊಡಿ

ಇತ್ತೀಚೆಗೆ ಕಾರ್ಖಾನೆಯ ಕೆಲಸಗಳಲ್ಲಿ ಆಸಕ್ತಿ ಕಡಿಮೆಯಾಗತೊಡಗಿತು. ಒಂದು ನಮ್ಮ ಪ್ರಾಮಾಣಿಕ ಕೆಲಸಕ್ಕೆ ಸಂದಾಯವಾಗಬೇಕಾದ ಗೌರವ ಸಿಗದೇಯಿದ್ದರೆ ಯಾರಿಗೇ ಆಗಲಿ ನೋವು ಆಗುತ್ತೆ. ಅದರರ್ಥ ನಾವು ಮಾಡುತ್ತಿರುವ ಕೆಲಸ ಅಪ್ರಯೋಜಕವಾದುದು ಎನಿಸದೇಯಿರದು. ಅದರ ಜೊತೆಗೆ ಕಾರ್ಮಿಕ ಸಂಘಟನೆಯ ಅನೈತಿಕ ಕೆಲಸಗಳು ತಲೆಯಲ್ಲಿ ನೂರು ಚಿಂತೆಯನ್ನು ಬಿತ್ತಿ ನೆಮ್ಮದಿಯನ್ನು ಕೆಡಿಸಿತ್ತು. ನಮ್ಮ ಸಂಸ್ಥೆಯಲ್ಲಿ ಕಾರ್ಮಿಕ ಸಂಘಟನೆ ಅಸ್ಥಿತ್ವಕ್ಕೆ ಬಂದ ನಂತರ ಸಂಸ್ಥೆಯ ಉತ್ಪಾದಕತೆಯಲ್ಲಿ, ಕೆಲಸದ ನೈತಿಕತೆ,ಹಿರಿಯ ಅಧಿಕಾರಿಗಳ ಮೇಲಿನ ಗೌರವ,ಸಹೋಧ್ಯೊಗಿಗಳ ಗೌರವ ಪಾತಾಳಕ್ಕೆ ಇಳಿದಿತ್ತು. "ಕೆಲಸ ಮಾಡಿ" ಎಂದು ಹೇಳುವುದು ಅಪರಾಧವೇ ಆಗಿ ಹೋಗಿದೆ. ಈಗಂತೂ ಕೆಲಸ ಮಾಡಿ ಎಂದು ಹೇಳುವುದು ಕಷ್ಟದ ಕೆಲಸವೇ ಆಗಿದೆ." ಮಾಡೋದಿಲ್ಲ ಯಾರಿಗೆ ಹೇಳುಕೊಳ್ಳುವಿರೋ ಹೇಳಿಕೋ ಹೋಗಿ"ಎಂಬ ಪ್ರತ್ಯುತ್ತರ ಸಿದ್ಧವಾಗೇಯಿರುತ್ತೆ. ಇಂತಹ ನಕಾರಾತ್ಮಕ ವಾತಾವರಣದಲ್ಲಿ ಹೇಗೆ ಕೆಲಸ ಮಾಡುವುದು ನೀವೇ ಹೇಳಿ ಹಾಗು ಎಂತಹವರನ್ನೂ ದೃತಿಕೆಡಿಸುತ್ತದೆ.ಬೇರೆ ಕಡೆ ಕೆಲಸ ಹುಡುಕೋಣವೆಂದರೆ ಆರ್ಥಿಕ ಹಿಂಜರಿತದಿಂದ ಕೆಲಸದ ಅವಕಾಶಗಳು ಕಡಿಮೆಯಾಗಿದೆ.’ನಿಂತಲ್ಲಿ ನಿಲ್ಲಲಾಗುತ್ತಿಲ್ಲ,ಬೇರೆಡೆ ಜಾಗ ಸಿಗುತ್ತಿಲ್ಲ’ ಪರಿಸ್ಥಿತಿ ಹೀಗಿರುವಾಗ ಏನು ಮಾಡಬೇಕೆಂದು ತೋಚದೆ ಕಂಗಾಲಾಗಿದ್ದೆ. ದೇವರು ನನಗೊಂದು ಶಕ್ತಿ ಕೊಟ್ಟಿದಾನೆ ಅದೇನೆಂದರೆ ಕಾರ್ಖಾನೆಯ ಗೇಟು ದಾಟಿದ ನಂತರ ಅಲ್ಲಿನದ್ದೇನೂ ಮನಸ್ಸಿಗೆ ಬರೀದೇ ಇಲ್ಲ. ಅದೇನೇ ಇದ್ದರೂ ಮುಂದೆ ಏನು? ಎಂಬ ಪ್ರಶ್ನೆ ಮನಸ್ಸಿನಲ್ಲಿ ಹಸಿರಾಗೇ ಇರುತಿತ್ತು. ಕಾರ್ಮಿಕರೋ ಅವರ ಕೆಲಸದ ಬಗ್ಗೆ ಏನೂ ಕೇಳಬೇಡಿ ಆದರೆ ಅವರ ಬೇಡಿಕೆಗಳೇನೂ ಕಡಿಮೆಯಂತೂ ಇರಲಿಲ್ಲ ಹಿಮಾಲಯದೆತ್ತರಕ್ಕೆ ಅವು ಬೆಳೆದಿತ್ತು. ಎಲ್ಲರಿಗೂ ಕೆಲಸ ಮಾಡುವುದು ಬೇಕಿರಲಿಲ್ಲ ಆದರೆ ಕೈ ತುಂಬಾ ಹಣ ಮಾತ್ರ ಅಭಾದಿತವಾಗಿ ಬರಬೇಕೆಂದು ಬಯಸುತ್ತಿದ್ದಾರೆ. ಯಾರೋ ಹೀಗೆ ಮಾತನಾಡುತ್ತಾ ಹೇಳಿದ ಮಾತು " ಕಾರ್ಖಾನೆ ಬಾಗಿಲು ಹಾಕಿದರೆ ಸಂಸ್ಥೆಯವರು ಕಾರ್ಮಿಕರಿಗೆ ೧೫ ಲಕ್ಷ ಕೊಟ್ಟು ಕಳುಹಿಸುತ್ತಾರೆ" ಎಂದು. ಹರಿಹರ ದ ಕಿರ್ಲೋಸ್ಕರ್ ಸಂಸ್ಥೆ ಬಾಗಿಲುಹಾಕಿ ಹಲವು ವರುಷಗಳೇ ಕಳೆದಿದೆ, ಪರಿಹಾರ ಅನ್ನೋದು ಮಾತ್ರ ಮರೀಚಿಕೆ ಆಗಿರೋವಾಗ ನಮ್ಮ ಸಂಸ್ಥೆಯ ಕಾರ್ಮಿಕರ ಕನಸು ಹಗಲು ಕನಸೇ ಸರಿ ಎನಿಸಿತು.ಕೆಲವೇ ವರ್ಷಗಳ ಹಿಂದೆ ಕೆಲಸ ಕೊಟ್ಟರೆ ಸಾಕು ಅನ್ನೋ ಸ್ಥಿತಿಯಲ್ಲಿದ್ದವರು, ಪ್ರಾಮಾಣಿಕತೆಗೆ ಇವರೇ ದತ್ತುಪುತ್ರರೆನ್ನುವಂತೆ ಇದ್ದವರು ಇಂದು ’ಜಾಬ್ ಸೆಕ್ಯೋರಿಟಿ" ಅನ್ನೋದು ಬಂದ ಮೇಲೆ ಅಹಂಕಾರ, ದರ್ಪದಿಂದ ಹೊಟ್ಟೆಗೆ ಊಟ ಹಾಕಿ ಸಲಹಿದ ಸಂಸ್ಥೆಗೆ ಚೂರಿಹಾಕಲು ಸಿದ್ಧರಾಗಿದ್ದಾರೆ ಅನಿಸುತ್ತಿತ್ತು.
ತ್ರಿಶಂಕು ಸ್ಥಿತಿಯಲ್ಲಿರೋ ನನ್ನಂತಹ ಇಂಜನಿಯರುಗಳಿಗೆ ಇಂತಹ ವಾತಾವರಣ ಹೇಸಿಗೆ ತರಿಸುತ್ತದೆ. ಏಕೆಂದರೆ ಮೇಲಿನವರು ನಮ್ಮನ್ನೇ ಕೇಳುವುದು " ಕೆಲಸ ಏಕೆ ಆಗಿಲ್ಲ" ಅಂತ. ಆಡಳಿತ ವರ್ಗ ಹಾಗು ಕಾರ್ಮಿಕರ ನಡುವೆ ನಾವು ’ಸೇತುವೆ’ ಇದ್ದ ಹಾಗೆ. ಎರಡೂ ಕಡೆಯಿಂದ ತುಳಿಯಲ್ಪಡುವವರೂ ನಾವೇ!. ಆರಕ್ಕೇರಲಾಗದೆ ಮೊರಕ್ಕಿಳಿಯಲಾಗದೆ ತ್ರಿಶಂಕು ಸ್ಥಿತಿಯಲ್ಲಿ ಇರುವವರು ನಾವು. ಮೇಲಿನವರು ತಮ್ಮ ಅನುಕೂಲಗಳನ್ನು ತಾವು ನೋಡಿಕೊಳ್ಳುತ್ತಾರೆ. ಕೆಳಗಿನವರು ತಮಗೆ ಬೇಕಾಗಿರುವುದನ್ನು ’ಡಿಮ್ಯಾಂಡ್’ ಮಾಡಿ ಪಡೆದುಕೊಳ್ಳುತ್ತಾರೆ, ನಾವು ಮಧ್ಯದಲ್ಲಿರುವವರು ಮೇಲಿನವರ ಮರ್ಜಿಗಾಗಿ ಕೈಕಟ್ಟಿ ಕುಳಿತಿರಬೇಕು. ಅವರು ’ಕೊ’ ಅಂದಾಗ ಕೈ ಚಾಚಬೇಕು ಇಲ್ಲವೆಂದರೆ ಅದಕ್ಕಾಗಿ ಕಾಯಬೇಕು. ಮೇಲಿನವರು ಕೊಡುವ ಬಿಕ್ಷೆಗಾಗಿ ನಾವು ಕೈ ಚಾಚಬೇಕಾದಂತಹ ಹೀನಾಯ ಸ್ಥಿತಿ ನಮ್ಮದು. ಎಷ್ಟೋ ಬಾರಿ ನನಗೇ ಅನಿಸಿದೆ ನಾನೇ ಸರಿಯಿಲ್ಲವೋ?, ಇಲ್ಲ ನಾನು ಹೆಜ್ಜೆಯಿಡುವ ಕಡೆಯೇ ಸರಿಯಿಲ್ಲವೋ? ಎಂಬ ಅನುಮಾನ ಮನದಲ್ಲಿ ನೂರೆಂಟು ಬಾರಿ ಬಂದು ಹೋಗಿದೆ.
ಇಂತಹ ಪರಿಸ್ಥಿಯಲ್ಲೇ ಒಂದು ದಿನ ಮೊದಲನೇ ಪಾಳಿ ಮುಗಿಸಿ ಕಾರ್ಖಾನೆಯ ಬಸ್ಸಿನಲ್ಲಿ ೨-೪೦ ಕ್ಕೆ ಹೊರಟು ತಂಪಾಗಿ ಕಣ್ಣು ತುಂಬಾ ನಿದ್ದೆ ಮಾಡಿ ೩-೪೫ಕ್ಕೆ ಕತ್ರಗುಪ್ಪೆಯ ’ಬಾಟ ಶೋ ರೂಂ’ ಬಳಿ ಇಳಿದೆ. ನಾಲ್ಕು ರಸ್ತೆಗಳು ಕೊಡುವ ಸ್ಥಳವದು. ಎತ್ತರಕ್ಕೆ ಬೆಳೆದು ನಿಂತಿರುವ ಕಟ್ಟಡಗಳು,ಅಂಗಡಿ ಮುಂಗಟ್ಟುಗಳು ನನ್ನ ಮನದಲ್ಲಿ ನೂರು ಪ್ರಶ್ನೆಗಳನ್ನು ಹುಟ್ಟುಹಾಕಿತು. ಈ ಅಂಗಡಿಗಳೆಲ್ಲಾ ನಮ್ಮ ಹಣ ಖರ್ಚುಮಾಡಿಸುತ್ತವೇ ಹೊರತು ಯಾವುದೇ ಅಂಗಡಿಯಲ್ಲಿ ನಮಗೆ ಹಣ ಗಳಿಸುವ ಮಾರ್ಗ ತೋರಿಸುವ ಒಂದೇ ಒಂದು ಅಂಗಡಿಯೊ ಅಲ್ಲಿರಲಿಲ್ಲ. ನಾಳೆ ನಮ್ಮ ಕಾರ್ಖಾನೆಗೆ ಏನಾದರೂ ಬೀಗ ಹಾಕಿದರೆ ಏನು ಗತಿ? ಬೇರೆ ಕೆಲಸ ಹುಡುಕಿಕೊಳ್ಳಬಹುದು ಅದು ಬೇರೇ ವಿಷಯ. ಆದರೂ ಕೆಲಸ ಸಿಗುವವರೆಗೂ ಏನು ಮಾಡುವುದು? ಇಲ್ಲಿರುವ ಪ್ರತಿ ಅಂಗಡಿಗಳಲ್ಲೂ ನಮ್ಮ ಜೇಬಿನಲ್ಲಿರುವ ಹಣದ ಮೇಲೆ ಕಣ್ಣು, ಇಲ್ಲಿ ಖರ್ಚುಮಾಡುವುದಕ್ಕೆ ನೂರು ದಾರಿಗಳು ಸ್ಪಷ್ಟವಾಗಿದೆ ಆದರೆ ಹಣ ಗಳಿಸುವ ಒಂದೇ ಒಂದು ದಾರಿಯೊ ಇಲ್ಲಿ ಗೋಚರಿಸುತ್ತಿಲ್ಲ,ಗೋಚರಿಸಲಿಲ್ಲ. ಜೇಬಿನಲ್ಲಿರುವ ಹಣ ಅಲ್ಲಿರಲಾಗದೆ ತಕ ತಕ ಕುಣಿಯುತ್ತಿದೆ ಬೇರೆಯವರ ಕೈ ಸೇರಲು, ಎಷ್ಟಾದರೂ ಲಕ್ಷ್ಮೀ ಚಂಚಲೆಯಲ್ಲವೇ!. ನನ್ನ ಸಂಸ್ಥೆ ಬಾಗಿಲು ಹಾಕಿದರೆ ಅಕ್ಷರಶಹ ನಾನು ಓದಿದ್ದರೂ ಬೀದಿಯಲ್ಲಿ, ನಡು ದಾರಿಯಲ್ಲಿ ಜೀವನ ಸಾಗಿಸಲು ಒದ್ದಾಡಬೇಕಾದಂತಹ ಪರಿಸ್ಥಿತಿ ಬಂದೊದಗುತ್ತದೆ. ಇಂತಹ ಸಂದರ್ಭದಲ್ಲಿ ನಾನೊಬ್ಬನೇ ಅಲ್ಲ ಯಾರಾದರೂ ಹಣಗಳಿಸಲು ಒದ್ದಾಡುತ್ತಾರೆ ಹೀಗಾಗಿ ನಾವು ಎಷ್ಟೇ ಓದಿದ್ದರೂ ಆಗ ನಾವು ಮಾರ್ಕೆಟ್ ನಲ್ಲಿ ಹೆಬ್ಬೆಟ್ಟೇ ಅಲ್ಲವೇ? ಪ್ರಾಮಾಣಿಕವಾಗಿ ಯೋಚಿಸಿದ್ದೇನೆ ಹಾಗು ಪ್ರಾಮಾಣಿಕವಾಗಿ ನನ್ನೆಲ್ಲಾ ಗೆಳೆಯರನ್ನು ಪ್ರಶ್ನಿಸಿದ್ದೇನೆ ’ಒಂದು ರೂಪಾಯಿ ಹೆಚ್ಚಿಗೆ ಸಂಪಾದಿಸಲು ನಿಮ್ಮಲ್ಲಿ ಯಾವುದಾದರೂ ಸಲಹೆ’ಇದೆಯಾ ಎಂದು. ಪ್ರಿಯ ಓದುಗರೇ ನಿಮಗೇನಾದರೂ ಅಂತಹ ಒಂದು ಸಲಹೆ ಸೂಚನೆಗಳು ಗೊತ್ತಿದ್ದರೆ ನೀವು ತಿಳಿಸುವಿರಾ!?

ಶನಿವಾರ, ಅಕ್ಟೋಬರ್ 16, 2010

ನವರಾತ್ರಿಯ ಆಯುಧಪೂಜೆಯೊ,ನಮ್ಮಲ್ಲಿರುವ ಕ್ರೂರತೆಯೊ!

ನಮ್ಮ ಕಾರ್ಖಾನೆಯಲ್ಲಿ ನವರಾತ್ರಿ ಬಂತೆಂದರೆ ಎಲ್ಲರಿಗೂ ಖುಷಿ. ಅದಕ್ಕೆ ಎರಡು ಕಾರಣಗಳಿವೆ,ಮೊದಲನೆಯದು ನಮ್ಮ ಜೇಬಿಗೆ ಬೋನಸ್ ಹಣ ಬಂದು ಬೀಳುತ್ತೆ, ಎರಡನೆಯದು ನಮಗೆಲ್ಲಾ ಸಂಭ್ರಮ ಕೊಡೋ ಆಯುಧಪೂಜೆ ಕಾರ್ಖಾನೆಯಲ್ಲಿ ಭವ್ಯವಾಗಿ ಆಚರಿಸುತ್ತೇವೆ ಅದಕ್ಕೆ. ವರ್ಷದ ಕೊಳೆಯೆಲ್ಲವನ್ನೂ ತೊಳೆದು ನಮಗಾಗಿ,ನಮ್ಮ ಏಳಿಗೆಗಾಗಿ ದಣಿವರಿಯದೇ ದುಡಿಯುವ ಯಂತ್ರಗಳನ್ನು ಪೊಜಿಸುವುದು,ಗೌರವಿಸುವುದು ನಮ್ಮ ಹಿಂದೂ ಸಂಸ್ಕೃತಿಯ ಸಂಪ್ರದಾಯ. ಅದರ ಹಿಂದಿರುವ ತತ್ವವೆಂದರೆ "ನಮಗಾಗಿ ದುಡಿಯುವ ನೇರಾವಾಗಿ ಅಥವಾ ಪರೋಕ್ಷವಾಗಿ ಕಾರಣವಾಗಿರುವವರನ್ನು ಪೂಜಿಸುವುದು, ಗೌರವದಿಂದ ಕಾಣುವುದು ಹಾಗು ಅವರ ತ್ಯಾಗವನ್ನು ನೆನೆಯುವುದೇ ಆಗಿದೆ". ಆದುದರಿಂದಲೇ ಹಿಂದೂಗಳಿಗೆ ಅನುಕೂಲ ಒದಗಿಸುವುದೆಲ್ಲವೂ ದೇವರೇ ಆಗಿವೆ. ಉದಾಹರಣೆಗೆ ನೀರು-ಗಂಗೆಯಾದರೆ,ಗಾಳಿ-ವಾಯುದೇವ,ಮಣ್ಣು-ಭೂಮಿತಾಯಿ ಹಾಗೆ ಕಲ್ಲು,ಮರ,ಪ್ರಾಣಿಗಳೂ ನಮಗೆ ದೇವರೇ ಆಗಿದೆ. ಪೂಜಿಸುವುದೆಂದರೆ ಗೌರವಿಸುವುದೊಂದೇ ಅಲ್ಲದೇ ಅದನ್ನು ಸಂರಕ್ಷಿಸಬೇಕೆನ್ನುವ ಕಾಳಜಿಯೊ ಅದರಲ್ಲಿದೆ. ಅದಕ್ಕಾಗಿಯೇ ಹಿಂದೂ ಸಮಾಜದಲ್ಲಿ ದೇವರುಗಳ ಸಂಖ್ಯೆ ಜಾಸ್ತಿ-ಮೊವ್ವತ್ತು ಮೊರು ಕೋಟಿ ದೇವತೆಗಳಿದ್ದಾರೆ ಎಂದು ಒಂದು ಅಂದಾಜು ಹೇಳುತ್ತದೆ.ನಾಗರೀಕತೆ,ವಿಜ್ಘ್ಯಾನ,ತಂತ್ರಜ್ಘ್ಯಾನ,ಬುದ್ಧಿವಂತಿಕೆ ಬೆಳೆದಂತೆಲ್ಲಾ ನಮ್ಮ ಆಚರಣೆಗಳ ನಿಜವಾದ ಅರ್ಥವನ್ನು ತಿಳಿದುಕೊಳ್ಳುವುದರಲ್ಲಿ ನಾವು ಎಡವಿದ್ದೇವೆ.ನಮ್ಮ ಸುತ್ತ-ಮುತ್ತಲಿನ ಪರಿಸರವನ್ನು ಹಾಳುಮಾಡಿಕೊಂಡಿದ್ದೇವೆ. ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವಗಾಧೆಯಂತೆ ಈಗ ನಮ್ಮ ಸರ್ಕಾರಗಳು,ಸಂಘ-ಸಂಸ್ಥೆಗಳು ಪರಿಸರ ರಕ್ಷಿಸಬೇಕು ಎಂದು ಜನ ಸಾಮಾನ್ಯರಲ್ಲಿ ಜಾಗೃತಿ ಮೊಡಿಸುವ ಪ್ರಯತ್ನಮಾಡುತ್ತಿದೆ.
ಹಬ್ಬ ಹದಿನೈದು ದಿನಗಳಿರುವಂತೆಯೇ ಕಾರ್ಖಾನೆಯಲ್ಲಿ ಬರೀ ಬೋನಸ್ ನದೇ ಸುದ್ಧಿ,ಬರೀ ಗಾಳಿ ಸುದ್ಧಿ. ಕಳೆದ ವರ್ಷ ಆರ್ಥಿಕ ಹಿಂಜರಿತವಿತ್ತಲ್ಲ ಅದಕ್ಕೆ ಸಂಸ್ಥೆಗೆ ಲಾಭವಾಗುವುದಕ್ಕಿಂತ ನಷ್ಟವೇ ಹೆಚ್ಚಾಗಿರುವುದರಿಂದ ಈ ಬಾರಿ ಬೋನಸ್ ಕೊಡೋದಿಲ್ಲವೆಂದು, ಈ ಬಾರಿ ಕೇವಲ ಐದು ಸಾವಿರ ಮಾತ್ರ ಬೋನಸ್ ಅಂತೆ, ಇಲ್ಲ ಈ ಬಾರಿ ಕೇವಲ ನಮ್ಮ ಸಂಬಳದಲ್ಲಿ ೨೦% ಮಾತ್ರ ಬೋನಸ್ ಕೊಡ್ತಾರಂತೆ ಎಂಬ ಅಂತೆ ಕಂತೆಗಳು ಕಾರ್ಖಾನೆಯ ಎಲ್ಲೆಡೆಯಲ್ಲೂ ಹರಡಿತ್ತು. ಯಾರಾದರೂ ಇಬ್ಬರು ಮಾತನಾಡುತ್ತಿದ್ದಾರೆಂದರೆ ಸುಲಭವಾಗಿ ಹೇಳಬಹುದು ಅವರು ಬೋನಸ್ ಬಗ್ಗೆಯೇ ಮಾತನಾಡ್ತಿರೋದು ಅಂತ. ಯಾರೇ ಸಿಕ್ಕರೂ ಅವರು ಕೇಳುವಂತಹ ಮೊದಲ ಪ್ರಶ್ನೆಯೆಂದರೆ ಏನು ಸುದ್ಧಿ? ಅಂತ. ಈ ಬಾರಿ ಅಷ್ಟು ಕೊಡ್ತಾರಂತೆ,ಇಷ್ಟು ಕೊಡ್ತಾರಂತೆ ಎನ್ನುವ ಮಾತುಗಳೇ!. ಕಾಯುವುದರಲ್ಲಿರುವ ಕುತೂಹಲ ಅದು ಕೈಗೂಡಿದಾಗ ಇರುವುದಿಲ್ಲ ಹಾಗೆಯೇ ಅಂತೆ ಕಂತೆಗಳಿಗೆ ದಿನಾಂಕ:೦೭.೧೦.೨೦೧೦ ರಂದು ತೆರೆಬಿದ್ದಿತು.ಅಂದು ಸಂಸ್ಥೆಯ ಸೂಚನಾ ಫಲಕದಲ್ಲಿ ಒಂದು ತಿಂಗಳ ಸಂಬಳದಷ್ಟು ಬೋನಸ್ ಎಂದು ಪ್ರಕಟವಾಗಿತ್ತು.ಎಲ್ಲರಲ್ಲಿಯೊ ಒಂದು ರೀತಿಯ ಸಮಾಧಾನ ತಂದಿತ್ತು.
ಬೋನಸ್ ಏನೋ ಕೈಗೆ ಬಂದಾಯಿತು ಇನ್ನು ಆಯುಧ ಪೂಜೆಯದೇ ಚಿಂತೆ ಏಕೆಂದರೆ ಆಡಳಿತ ವರ್ಗ ಹಾಗು ಕಾರ್ಮಿಕ ಸಂಘಟನೆಯ ನಡುವೆ ಒಮ್ಮತ ಏರ್ಪಡದೇ ಇದ್ದುದ್ದೇ ಕಾರಣವಾಗಿತ್ತು. ಕಾರ್ಮಿಕ ಸಂಘಟನೆಯ ಜೊತೆ ಮಾತುಕತೆ ಮಾಡದೇ ಆಯುಧ ಪೂಜೆಯ ವಿವರಗಳನ್ನು ಸಂಸ್ಥೆಯ ಸೂಚನಾ ಫಲಕದಲ್ಲಿ ಹಾಕಿದರು ಎನ್ನುವುದೇ ಅವರ ತಗಾಧೆಯಾಗಿತ್ತು ಹಾಗು ಈ ಬಾರಿ ಅವರೆಲ್ಲರೂ ಆಯುಧಪೂಜೆಯನ್ನು ಬಹಿಷ್ಕರಿಸಬೇಕೆನ್ನುವ ತೀರ್ಮಾನಕ್ಕೆ ಬಂದಿದ್ದರು ಎನ್ನುವ ಸುದ್ಧಿ ಎಲ್ಲೆಡೆಯಲ್ಲೂ ಕೇಳಿಬರುತ್ತಿತ್ತು. ಹಾಗು ಆಡಳಿತ ವರ್ಗದವರು ಕೊಡುವ ಆಯುಧಪೂಜೆಯ ಸಿಹಿಯನ್ನೂ ಸ್ವೀಕರಿಸುವುದಿಲ್ಲವೆಂದು ಸುದ್ಧಿ ಬಂದಿತ್ತು. ತೆಗೆದುಕೊಳ್ಳದೇಯಿದ್ದರೆ ಸಂಸ್ಥೆಗೇನೂ ನಷ್ಟವಿಲ್ಲವೆಂದು ಅವರಿಗೆ ತಿಳಿಯುವ ಕಾಲ ಬೇಗ ಬರಲಿ ಎಂಬ ಪ್ರಾರ್ಥನೆ ಮಾತ್ರ ನಮ್ಮದಾಗಿತ್ತು.
ಕೆಲಸವನ್ನು ಪ್ರೀತಿಸುವವರಾರೂ ಈ ರೀತಿ ಮಾಡುವುದಿಲ್ಲವೆಂಬ ಭಾವನೆ ನನ್ನದು. ಆಡಳಿತ ವರ್ಗ ಏನೇ ಹೇಳಿದರೂ ಅದಕ್ಕೆ ವಿರುದ್ಧವಾಗೇ ವರ್ತಿಸುವ ಕಾರ್ಮಿಕ ವರ್ಗ, ಆಡಳಿತ ವರ್ಗದವರು ಕೊಟ್ಟ ಬೋನಸ್ ಸ್ವೀಕರಿಸಿದ್ದೇಕೋ?. ಪ್ರತಿಯೊಂದು ಕಾರ್ಖಾನೆಯಲ್ಲಿ ಆಡಳಿತ ವರ್ಗ ಹಾಗು ಕಾರ್ಮಿಕ ವರ್ಗಗಳ ನಡುವೆ ಮನಸ್ತಾಪಗಳಿರುವುದು ಸರ್ವೇ ಸಾಮಾನ್ಯವಾದರೂ ಅದನ್ನು ಪರಿಹರಿಸಿಕೊಳ್ಳುವತ್ತ ನಮ್ಮ ಗಮನವಿರಬೇಕೇ ಹೊರತು ಬಹಿಷ್ಕಾರ,ಚಳುವಳಿ,ಉಪವಾಸ ಹಾಗು ಪ್ರತಿಭಟನೆಗಳಿಂದ ಸಾಧ್ಯವಿಲ್ಲ. ಬಹಿಷ್ಕಾರ,ಚಳುವಳಿ,ಉಪವಾಸ ಹಾಗು ಪ್ರತಿಭಟನೆಗಳಿಂದ ತಾತ್ಕಾಲಿಕವಾಗಿ ಪರಿಹಾರವನ್ನೇನೋ ನಿರೀಕ್ಷಿಸಬಹುದಾದರೂ ಶಾಶ್ವತ ಪರಿಹಾರವನ್ನು ನಿರೀಕ್ಷಿಸುವುದು ಸಾಧುವಾಗಲಾರದು.ಪರಿಹಾರ ಬೇಕಿದ್ದಲ್ಲಿ ಮನಸುಗಳನ್ನು ನಿರ್ಮಲವಾಗಿಟ್ಟುಕೊಂಡು ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಅಭಿವೃದ್ದಿಯ ಕಡೆ ಗಮನ ಹರಿಸಬೇಕು. ಆಡಳಿತ ಪಕ್ಷ ಹಾಗು ಪ್ರತಿಪಕ್ಷಗಳು ಜನ ಸಾಮಾನ್ಯರ ಕಡೆ ಗಮನಹರಿಸದೇ ತಗಾಧೆ ತೆಗೆಯುತ್ತಾರಲ್ಲ ತಮ್ಮ ಸ್ವಾರ್ಥಸಾಧನೆಗೆ ಹಾಗೇ ಕಾರ್ಮಿಕ ಸಂಘಟನೆಯ ನಡುವಳಿಕೆಯೊ ಹಾಗೇ ಇದೆ ಮತ್ತು ಅದನ್ನು ಮೀರುವ ಸಾಧ್ಯತೆಯೊ ಕಾಣುತ್ತಿದೆ."ನನ್ನ ಕೋಳಿಯಿಂದಲೇ ಬೆಳಗಾಗುವುದು"ಎಂದು ಕಾರ್ಮಿಕ ವರ್ಗದವರು ತಿಳಿದಿದ್ದರೆ ಅದು ಅವರ ತಪ್ಪು ತಿಳುವಳಿಕೆ.ಕಾಲ ಯಾರ ಅಧೀನವೂ ಅಲ್ಲ,ಯಾವುದು ಯಾವಾಗ ಆಗಬೇಕೋ ಆಗ ತನ್ನ ಪಾಡಿಗೆ ಆಗುತ್ತೆ ನಾವು ನಿಮ್ಮಿಥ ಮಾತ್ರ ಎಂದು ನಾವುಗಳು ಅರ್ಥಮಾಡಿಕೊಳ್ಳಬೇಕಿದೆ. ಅದಕ್ಕೆ ಒಂದು ಉದಾಹರಣೆ ಕೊಡುವುದಾದರೆ , ಭಾರತಕ್ಕೆ ಸ್ವಾತಂತ್ರ ಬಂದ ಮೇಲೆ ಜವಹರಲಾಲ್ ನೆಹರು ನಮ್ಮ ಪ್ರಧಾನ ಮಂತ್ರಿಗಳಾದರು ಅವರು ತೀರಿಕೊಂಡ ಮೇಲೆ ಕಾಂಗ್ರೆಸ್ಸಿಗರು ಮುಂದೇನು ಮುಂದೆ ಯಾರು ಪ್ರಧಾನ ಮಂತ್ರಿಯಾಗುತ್ತಾರೆ ಅಂತ ಕನವರಿಸುತ್ತಿದ್ದರು ಆಗ ಭಾರತವನ್ನು ಮುನ್ನಡೆಸಿದವರು ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಅವರು ತೀರಿಕೊಂಡ ಬಳಿಕ ಇಂದಿರಾಗಾಂಧಿಯವರು ಪ್ರಧಾನ ಮಂತ್ರಿಗಳಾದರು. ಅವರೂ ಕೊಲೆಯಾದ ಮೇಲೆ ಮುಂದೆ ಭಾರತವನ್ನು ನಡೆಸುವರಾರು?ಎಂಬ ಪ್ರಶ್ನೆ ಸಹಜಾವಾಗೇ ಮೊಡಿತ್ತು. ಕಾಂಗ್ರೆಸ್ಸಿನಿಂದಲೇ ಭಾರತ ಅನ್ನೋದನ್ನು ಸುಳ್ಳುಮಾಡಿದವರು ಅಟಲ್ ಬಿಹಾರಿ ವಾಜಪೇಯಿ. ಹೀಗೆ ಕಾಲ ಯಾರಿಗೂ ಕಾಯುವುದಿಲ್ಲ ಸಮಯ ಬಂದಾಗ ಯಾರ ಕೈಯಲ್ಲಿ ಕೆಲಸವಾಗಬೇಕೋ ಅವರ ಕೈಯಲ್ಲಿ ಕೆಲಸವಾಗುವುದರಲ್ಲಿ ಸಂದೇಹವಿಲ್ಲ.
ಆಯುಧಪೂಜೆ ನಮ್ಮ ನಿರೀಕ್ಷೆಗೂ ಮೀರಿ ಚೆನ್ನಾಗಿ ನಡೆಯಿತು.ನವರಾತ್ರಿಯ ಈ ಶುಭಸಂದರ್ಭದಲ್ಲಿ ನಮ್ಮ ಮನದ ಕತ್ತಲನ್ನೂ,ನಮ್ಮ ಸ್ವಾರ್ಥದ ಕ್ರೂರತೆಯನ್ನು ತೊಳೆದುಕೊಳ್ಳುವ ಶಕ್ತಿ ಆ ದೇವಿ ನಮಗೆಲ್ಲಾ ನೀಡಲಿ,ನಮ್ಮಲ್ಲಿ ಹೊಸ ಚೈತನ್ಯ ಹರಿಯಲಿ.

ಶನಿವಾರ, ಅಕ್ಟೋಬರ್ 9, 2010

ನನ್ನ ಕಾರ್ಖಾನೆಯ ಪರಿಸ್ಥಿತಿ

ನಾನು ಈಗ ಕೆಲಸ ಮಾಡುವ ಸಂಸ್ಠೆಗೆ ಸೇರಿ ಏಳು ವರ್ಷಗಳು ಕಳೆಯಿತು. ಹಿಂತಿರುಗಿ ನೋಡಿದಾಗ ಎಷ್ಟೋಂದು ಬದಲಾವಣೆಗಳು ಮನಸ್ಸಿಗೆ ಗೋಚರಿಸುತ್ತದೆ. ಅವಾಗಿನ ವಾತಾವರಣಕ್ಕೂ,ಈಗಿನ ವಾತಾವರಣಕ್ಕೂ ಅಜಗಜಾಂತರ ವ್ಯತ್ಯಾಸ!. ಅದೇ ಜಾಗ,ಅದೇ ಯಂತ್ರಗಳು,ಅದೇ ಅಧಿಕಾರಿಗಳು,ಅದೇ ಭಾಸ್,ಅದೇ ಜನಗಳು, ಹಾಗಾದರೆ ಬದಲಾದದ್ದು ಏನು? ಈ ಎಲ್ಲಾ ಬದಲಾವಣೆಗಳಿಗೆ ಕಾರಣಗಳೇನು? ಎಂದು ನನ್ನ ಮನಸ್ಸು ಚಿಂತಿಸುತ್ತದೆ. ಇವು ಉತ್ತರ ಸಿಗದ ಪ್ರಶ್ನೆಗಳೇನೂ ಅಲ್ಲ.ಅದೇ ಪ್ರಶ್ನೆಗಳು ಸಮಸ್ಯೆಗಳಾದಾಗ ಅದಕ್ಕೆ ಪರಿಹಾರ ಸಿಗೋದಿಲ್ಲ. ಭಯೋತ್ಪಾದನೆ,ಅನಕ್ಷರತೆ ಹಾಗು ಬಡತನ ಅನ್ನೋದು ಸಮಸ್ಯೆಗಳೇ... ಪರಿಹಾರ ಅನ್ನೋದು ಮರೀಚಿಕೆ ಅನ್ಸೋದಿಲ್ಲವೇ? ನಾವಿರುವ ವಾತಾವರಣದಲ್ಲಿ ಋಣಾತ್ಮಕ ಬದಲಾವಣೆಗಳಾದರೆ ಮೊಲ ಉದ್ದೇಶ ಅಥವಾ ಗುರಿಯ ಕಡೆ ಸಾಗುವ ಹಾದಿ ಕಠಿಣವಾಗುತ್ತದೆ.

ಇವತ್ತು ನಮ್ಮ ಸಂಸ್ಥೆಯ ಸಮಸ್ಯೆಗಳಿಗೆ ಕಾರಣ ಯಾರು? ಮೊಲ ಯಾರು? ಅನ್ನೋದಕ್ಕೆ ಉತ್ತರ ಹುಡುಕುವ ಪ್ರಯತ್ನ ಎಲ್ಲರೂ ಮಾಡಬೇಕು, ಮಿಗಿಲಾಗಿ ಸಂಸ್ಥೆಯ ಹಿರಿಯ ಆಡಳಿತವರ್ಗ ಅದರ ಬಗ್ಗೆ ಚಿಂತಿಸಿ,ಚರ್ಚಿಸುವುದು ಈ ಸಮಯದ ಅವಶ್ಯಕತೆಯಾಗಿದೆ. ಇಂದಿನ ಸಮಸ್ಯೆಗೆ ಸಂಸ್ಥೆಯ ಪ್ರತಿಯೊಬ್ಬರೂ ನೇರವಾಗಿ ಹಾಗು ಪರೋಕ್ಷವಾಗಿ ಕಾರಣಕರ್ತರಾಗಿರುತ್ತಾರೆ. ಇಲ್ಲಿ ಬದಲಾದದ್ದು ಮನುಷ್ಯನ ಸ್ವಭಾವ-ಗುಣ-ನಡುವಳಿಕೆಗಳೇ ಅಗಿವೆ. ಈ ಮನುಷ್ಯ ಅತಿ ವಿಚಿತ್ರ, ಆತನ ಸ್ವಭಾವ-ಗುಣ-ನಡುವಳಿಕೆಗಳು ಕಾಲಕ್ಕೆ ತಕ್ಕಹಾಗೆ, ಅವನ ಅವಶ್ಯಕತೆಗಳಿಗನುಗುಣವಾಗಿ ಬದಲಾಗುತ್ತವೆ.

ಕೆಲಸವಿಲ್ಲದೆ ನಿರುಧ್ಯೋಗಿಯಾಗಿದ್ದಾಗ ಕಾಯಕವೇ ಕೈಲಾಸ ವೆನ್ನುವನು, ಕೆಲಸ ಸಿಕ್ಕಿ ಉಧ್ಯೋಗದಲ್ಲಿ ಭದ್ರತೆ ಬಂತೆಂದರೆ ಕಾಯಕವೇ ಕೈಲಾಸವೆನ್ನುವುದು ಕಸವಾಗಿರುತ್ತದೆ.ನಿರುದ್ಯೋಗಿಯಾಗಿದ್ದಾಗ ಹಸಿವಿರುತ್ತದೆ, ಹೊಸತನವಿರುತ್ತದೆ,ತೃಪ್ತಿಯಿರುತ್ತದೆ,ಕೆಲಸ,ಸಂಸ್ಥೆಯ ಮೇಲೆ ನಿಷ್ಟೆಯಿರುತ್ತದೆ, ಪ್ರತಿಯೊಬ್ಬರಲ್ಲೂ ಗೌರವವಿರುತ್ತದೆ ಆದರೆ ಅನಂತರ ಸ್ವಾರ್ಥದಿಂದ ಬೇರೆಲ್ಲವೂ ನಷ್ಟವಾಗಿ ಬರೀ ಅಹಂಕಾರ ಮಾತ್ರ ಉಳಿಯುತ್ತದೆ, ಕೆಲಸ ಮಾಡದೇ ಮಾಡುವ ಕೆಲಸ ಹೀನವಾಗಲು ನೂರಾರು ಪಿಳ್ಳೆನೆವಹುಡುಕುವುದೇ ಅವನ ಕಾಯಕವಾಗುತ್ತದೆ.

ಇದು ನನ್ನ ಸಂಸ್ಥೆಯ ಪರಿಸ್ಥಿತಿಯೊಂದೇ ಅಲ್ಲ, ಭಾರತದ ಸ್ಥಿತಿಯೊ ಹೌದು. "ಪುರಾಣ ಹೇಳೋದಕ್ಕೆ, ಬದನೆಕಾಯಿ ತಿನ್ನೋದಕ್ಕೆ" ಆನ್ನುವ ಮಾತಿನಂತೆ "ಕಾಯಕವೇ ಕೈಲಾಸ" ಅನ್ನೋದು ಇಂದಿನ ಕಾರ್ಖಾನೆಗಳಲ್ಲಿ ಬರೀ ಆಡಂಬರದ ಮಾತಾಗಿದೆ. ಬರೀ ಬಸವಣ್ಣನವರನ್ನು ನಮ್ಮ ಆದರ್ಶ ಅಂದರೆ ಸಾಲದು ಅವರು ಹೇಳಿದಂತೆ ನಡೆಯುವುದು ಅಷ್ಟೇ ಮುಖ್ಯ ಅಲ್ಲವೇ!.

ನಾವು,ನಮ್ಮದು ಅನ್ನುವ ಭಾವ ಗೌಣವಾಗಿ ಸ್ವಾರ್ಥ ಜಾಸ್ತಿಯಾದರೆ ಮನುಷ್ಯ ಮೃಗವಾಗುತ್ತಾನೆ. ಆಗ ಅವನು ಕೆಲಸವನ್ನು ಪ್ರೀತಿಸುವುದಿಲ್ಲ-ಕೆಲಸಗಳ್ಳನಾಗುತ್ತಾನೆ. ಕೆಲಸ ಮಾಡದೇಯಿರುವುದಕ್ಕೆ ನೂರಲ್ಲ,ಸಾವಿರ ಪಿಳ್ಳೆನೆವ ಹುಡುಕುತ್ತಾನೆ. ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಬೇರೆಯವರ ತಪ್ಪನ್ನು ಹುಡುಕುತ್ತಾನೆ. ಹೀಗಾಗಿ ಮನಸ್ತಾಪಗಳುಂಟಾಗಿ ಮನಸ್ಸು-ಮನಸ್ಸುಗಳ ನಡುವೆ ಬಿರುಕು ಬಿಟ್ಟು ದೊಡ್ಡ ಕಂಧಕವೇ ಬೀಡುಬಿಡುತ್ತದೆ. ಮತ್ತೆಂದೂ ಜೋಡಿಸಲಾಗದ ಸಂಭಂದವಾಗಿ ಹೋಗುತ್ತದೆ.

ದೇಶ ಮೊದಲು ಅನ್ನೋ ಹಾಗೆ ಸಂಸ್ಥೆ ಮೊದಲು ಎನ್ನುವ ಭಾವ ಎಲ್ಲರದ್ದೂ ಆದಾಗ ಎಲ್ಲರ ಬಾಳು ಹಸನಾಗುತ್ತದೆ.ಸಂಸ್ಥೆಯ ಗುರಿ ಸಾಧಿಸುವುದೆಂದರೆ ನಮ್ಮ ಬಾಳಿನ ಗುರಿಯನ್ನು ತಲುಪಿದಂತೆಯೇ ಅಲ್ಲವೇ! ಒಂದೇ ಗುರಿ ಅಂದರೆ ಒಂದೇ ದಿಕ್ಕಿನ ಕಡೆ ನಮ್ಮ ಪಯಣವೆಂದಲ್ಲವೇ? ಒಂದು ಸುಂದರ ಉದಾಹರಣೆಯೊಂದಿಗೆ ನಾವು ಏಕತೆಯಿಂದ ದುಡಿಯುವ ಶಕ್ತಿಯನ್ನು ಅರ್ಥಮಾಡಿಕೊಳ್ಳೋಣ.

ಆಯಸ್ಕಾಂತ ವನ್ನು ಪ್ರತಿಯೊಬ್ಬರು ನೋಡಿದ್ದೀರ. ಅದು ಬೇರೆ ಕಬ್ಬಿಣಗಳಿಗಿಂತ ಬಿನ್ನವೆಂದೂ ನಿಮಗೆ ಗೊತ್ತಿದೆ. ಒಂದು ಸಾದಾ ಕಬ್ಬಿಣದ ತುಂಡೊಂದರ ಆಂತರಿಕ ಪರಿಸ್ಥಿಯನ್ನು ನಾವು ಅವಲೋಕಿಸೋಣ. ಅದರ ವೇಲೆನ್ಸಿ ಎಲೆಕ್ಟ್ರಾನ್ ಗಳ ದಿಕ್ಕು ಬೇರೆ ಬೇರೆ ದಿಕ್ಕಿನಲ್ಲಿರುತ್ತದೆ. ಇಂತಹ ಪರಿಸ್ಥಿಯಲ್ಲಿ ಅದಕ್ಕೆ ಯಾವುದೇ ಶಕ್ತಿಯಿರುವುದಿಲ್ಲ.
.
ಅಂತಹ ಒಂದು ಕಬ್ಬಿಣದ ತುಂಡೊಂದಕ್ಕೆ ವಿಧ್ಯುಚ್ಛಕ್ತಿಯನ್ನು ಅದರಲ್ಲಿ ಹರಿಸಿದಾಗ ಅದರಲ್ಲಿಯ ವೇಲೆನ್ಸಿ ಎಲೆಕ್ಟ್ರಾನ್ ಗಳ ದಿಕ್ಕು ಶಕ್ತಿಯ ಪ್ರಯೋಗದಿಂದ ಒಂದೇ ದಿಕ್ಕಿಗೆ ಬದಲಾಯಿಸಿಕೊಳ್ಳುತ್ತದೆ. ಇಂತಹ ಒಂದು ಪರಿಸ್ಥಿಯಲ್ಲಿ ಅದಕ್ಕೆ ವಿಶೇಷವಾದ ಒಂದು ಶಕ್ತಿ ಪಡೆದು ಆಯಸ್ಕಾಂತವಾಗುತ್ತದೆ. ಆ ಬಲದಿಂದ ಯಾವುದೇ ಕಬ್ಬಿಣದ ತುಂಡು ಅದರ ಬಳಿ ಬಂದಾಗ ತನ್ನ ಕಡೆ ಆಕರ್ಷಿಸುತ್ತದೆ.

ಎಲ್ಲಿಯವರೆಗೂ ಅದರ ಚಲನಾ ದಿಕ್ಕು ಒಂದೇ ಆಗಿರುತ್ತದೆ ಅಲ್ಲಿಯವರೆಗೂ ಅದರ ಶಕ್ತಿಯಿರುತ್ತದೆ. ಇದೇ ತತ್ವವನ್ನು ನಾವು ಒಂದು ಸಂಸ್ಥೆಗೂ ಅನ್ವಯಿಸಬಹುದು. ಸಂಸ್ಥೆಯ ಪ್ರತಿಯೊಬ್ಬ ಸದಸ್ಯನ ಗುರಿಯೊ ಒಂದೇ ಅಗಿದಲ್ಲಿ ಸಂಸ್ಥೆಯ ಎಳಿಗೆಯ ಜೊತೆ ನಾವು ಏಳಿಗೆಯಾಗುವುದರಲ್ಲಿ ಸಂದೇಹವೇಯಿಲ್ಲ.

ಒಡೆದ ಮನಸ್ಸುಗಳನ್ನು ಒಂದಾಗಿಸುವುದು ಕಷ್ಟವಾದರೂ ಸಹಮತ,ಸಹಬಾಳ್ವೆಗೆ ಅದು ಅವಶ್ಯ. ಅಧಿಕಾರ ವರ್ಗ ಹಾಗು ಕಾರ್ಮಿಕ ವರ್ಗ ತಮ್ಮ ತಮ್ಮ ಜವಾಬ್ದಾರಿಗಳನ್ನು ಅರಿತು ಪ್ರತಿಯೊಬ್ಬರ ಜೀವನವನ್ನು ಹಸನಾಗಿಸಬೇಕು. ಇದು ಈ ಗಳಿಗೆಯ ಅವಶ್ಯಕತೆಯಾಗಿದೆ.

ಬುಧವಾರ, ಅಕ್ಟೋಬರ್ 6, 2010

ನನ್ನ ಜೀವನದ ನಾಯಕ

ಅದೊಂದು ಚಿಕ್ಕ ಊರಿನ ಗಲ್ಲಿ. ಚಿಕ್ಕ ದಾರಿಯ ಆಸುಪಾಸಿನ ಎರಡು ಕಡೆಗಳಲ್ಲಿಯೊ ಮನೆಗಳು. ಸರಿ ಸುಮಾರು ೨೦-೩೦ ಮನೆಗಳಿರಬಹುದು. ಹೊಸದಾಗಿ ಕಟ್ಟಿದ ಬಡಾವಣೆಯಾದ್ದರಿಂದ ಅದಕ್ಕೊಂದು ಹೆಸರು. ಶ್ರಿ ಅರವಿಂದನಗರ ಅಂತ. ಅರವಿಂದರ ಅನುಯಾಯಿಗಳಾದ ಶ್ರಿ ರಾಮರಾವ್ ರವರು ತಮ್ಮ ಮಗನಿಗೂ, ತಾವಿದ್ದ ಬಡಾವಣೆಗೂ ಅದೇ ಹೆಸರಿಟ್ಟಿದ್ದರು ಹಾಗು ತಾವು ಚಿಕ್ಕ ಮಕ್ಕಳಿಗೆ ಪಾಠ ಹೇಳಿಕೊಡಲು ಕಟ್ಟಿಸಿದ ಕಟ್ಟಡಕ್ಕೆ ಶ್ರಿ ಅರವಿಂದ ಆಶ್ರಮವೆಂದೂ ನಾಮಕರಣ ಮಾಡಿದ್ದರು. ಅಂತಹ ಒಂದು ಚಿಕ್ಕ ಊರಿನ ಚಿಕ್ಕ ಬಡಾವಣೆಯಲ್ಲಿ ನಾನು ನನ್ನ ಆರಂಭಿಕ ಶಾಲೆಯಿಂದ ಹಿಡಿದು ಪಿ ಯು ಸಿ ಯವರೆಗೂ ಓದಿ ನಂತರ ಪದವಿ ಶಿಕ್ಷಣಕ್ಕೆ ಪರ ಊರಿಗೆ ಹೋದೆ.

ಶಾಲಾ ದಿನಗಳಲ್ಲಿ ನನ್ನ ಬಡಾವಣೆಯಲ್ಲಿ ನನ್ನ ವಯಸ್ಸಿನವರೂ, ನನಗಿಂತ ಚಿಕ್ಕ ವಯಸ್ಸಿನವರೂ ಹಾಗು ನನಗಿಂತ ವಯಸ್ಸಿನಲ್ಲಿ ದೊಡ್ಡವರೂ ಇದ್ದರು. ಅವರಲ್ಲಿ ಕೆಲವರು ನನಗೆ ಸ್ಪೂರ್ತಿಯಾದವರೂ ಇದ್ದರು. ಅವರ ನಡೆ,ನುಡಿ, ಆಟ,ಪಾಠ....ಇತ್ಯಾದಿಗಳಲ್ಲಿ.

ಜೀವನದಲ್ಲಿ ನಮ್ಮ ಜೊತೆಗೆ ಬಂಧು ಬಳಗದವರು, ಆತ್ಮೀಯರು, ಸ್ನೇಹಿತರೂ ಒಂದಲ್ಲ ಒಂದು ಕಾಲ ಘಟ್ಟದಲ್ಲಿ ನಮ್ಮ ಆಗು-ಹೋಗುಗಳಿಗೆ ಸಾಕ್ಷಿಯಾಗಿರುತ್ತಾರೆ.ಕೆಲವರು ಅವರಲ್ಲಿ ನಮಗೆ ಆದರ್ಶವಾಗಿರುತ್ತಾರೆ ಅದು ಮಾನಸಿಕವಾಗಿ ಆಗಿರಬಹುದು, ಇಲ್ಲವೇ ತಂದೆ-ತಾಯಿ ನೋಡು ಅವನು ಹೀಗೆ-ಹಾಗೆ ಅವನನ್ನು ನೋಡಿ ಕಲಿ ಎಂಬ ಒತ್ತಾಯಪೂರ್ವಕವಾಗಿಯೂ ಇರಬಹುದು. ಅದು ಸರಿ, ತಪ್ಪು ಎಂದು ನಿರ್ಧರಿಸುವ ಮಾನಸಿಕ ಬೆಳೆವಣಿಗೆ ಅಂದು ನಮಗಿರಲಿಲ್ಲ ಬಿಡಿ. ಜೀವನದ ಮತ್ಯಾವುದೋ ಕಾಲ ಘಟ್ಟದಲ್ಲಿ ಅದೇ ಗೆಳೆಯರು,ಬಂಧುಗಳು, ನಮ್ಮ ದೃಷ್ಟಿಯಿಂದ ದೂರವಾಗಿದ್ದವರು ಮತ್ತೆ ಝಗಮಗಿಸುವಂತೆ ಕಾಣಿಸಿದರೆ ಮತ್ತೆ ಕೆಲವರು ಜೀವನದಲ್ಲಿ ಅಧೋಗತಿಗೆ ಇಳಿದಿರುತ್ತಾರೆ. ಅದನ್ನೆಲ್ಲಾ ನೋಡುವವರಿಗೆ ಜೀವನವು ಅಶ್ಚರ್ಯವೂ, ಅವರ ಸ್ಥಿತಿ ದುಃಖವನ್ನೂ ತರುತ್ತದೆ.ಏನೂ ಮಾಡಲಾಗದೆ ಮೊರನೆಯವರಾಗಿ ನೋಡುವುದು ಮಾತ್ರ ನಮ್ಮ ಪಾಲಿಗಿರುತ್ತದೆ. ಹಿಂದೆ ನೋಡಿದಾಗಲೂ, ಈಗ ನೋಡುವುದಕ್ಕೂ ಅಜ-ಗಜ ವ್ಯತ್ಯಾಸವಿರುತ್ತದೆ.

ಪ್ರಾಣೇಶ್ ( ಹೆಸರನ್ನು ಬದಲಿಸಿದ್ದೇನೆ) ಓದಿನಲ್ಲಿ ಅಷ್ಟೇನೂ ಬುದ್ದಿವಂತನಲ್ಲ, ಹತ್ತನೇ ತರಗತಿಯಲ್ಲಿ, ಪಿ ಯು ಸಿ ಯಲ್ಲೂ ಫೇಲ್ ಆದವನು. ಅವನ ಗೆಳೆಯರೆನಿಸಿಕೊಂಡವರಿಗೆ ಅವನ ಬಗ್ಗೆ ಯಾವ ರೀತಿಯ ಅಭಿಪ್ರಾಯವಿರಬಹುದು ನೀವೇ ಊಹಿಸಿ. ಬಂಧು-ಬಳಗಗಳಲ್ಲಿಯೊ ಅವನ ಬಗ್ಗೆ ತಾತ್ಸಾರ,ಅಪಹಾಸ್ಯ, ಗೆಳೆಯರಲ್ಲೂ ಅವನ ಕಂಡರೆ ಅಸಡ್ಡೆ,ಕೀಳುಭಾವನೆ. ಇಂಥಹ ಪರಿಸ್ಥಿತಿ ಎಂಥವನನ್ನೂ ಅಧೀರನನ್ನಾಗಿಸುತ್ತದೆ. ಅವನ ಸಕಾರಾತ್ಮಕ ಧೋರಣೆಗಳನ್ನು ನಾಶಪಡಿಸುತ್ತದೆ. ಆದರೆ ಕೆಲವೇ ಕೆಲವರಲ್ಲಿ ಮಾತ್ರ ಇಂತಹ ಪರಿಸ್ಥಿತಿಯಲ್ಲಿ ನಾಯಕತ್ವದ ಗುಣಗಳು ಬಡಿದೇಳುತ್ತವೆ. ನಿಜ, ಪ್ರತಿಯೊಬ್ಬರೂ ಹುಟ್ಟುತ್ತಾ ನಾಯಕರೇ!,ಅಮೃತಪುತ್ರರೇ!, ಆದರೆ ಬೆಳೆಯುತ್ತಾ ನಮ್ಮ ಶಕ್ತಿ ಬಗೆಗಿನ ಅರಿವಿಗೆ ಗಟ್ಟಿಯಾದ ಪರದೆಯನ್ನು ಹಾಕಿಕೊಂಡು ಕೀಳರಿಮೆ ಅನ್ನೋ ಹೊದ್ದಿಗೆಯನ್ನು ಮೈಮೇಲೆ ಹೊದ್ದುಕೊಂಡು ಮಲಗಿಬಿಟ್ಟಿರುತ್ತೇವೆ. ಆಗ ಕೈ ಹಾಕಿದ ಕೆಲಸವೆಲ್ಲಾ ಕುಲಗೆಟ್ಟು ಹೋಗುತ್ತಿರುತ್ತದೆ. ನಮ್ಮ ಟೈಂನ್ನು ಹಳಿದುಕೊಳ್ಳುವುದು ಬಿಟ್ಟರೆ ನಮಗಿನ್ನೇನೂ ಇರುವುದಿಲ್ಲ. ಇಲ್ಲವಾದರೆ ನಮ್ಮ ಸೋಲನ್ನು ಬೇರೆಯವರ ತಲೆಗೆ ಕಟ್ಟೋದು ಬಿಟ್ಟರೆ ಬೇರೇನೂ ನಾವು ಮಾಡುವುದಿಲ್ಲ. ಆದರೆ ಅದೇ ಸೋಲನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಗೆಲುವಿನ ನಗೆ ಬೀರುವವರು ತುಂಬಾ ಕಡಿಮೆ, ಅವರೇ ಜೀವನದಲ್ಲಿ ನಿಜವಾದ ನಾಯಕರು ಅಲ್ಲವೇ?.

ಹತ್ತು ವರ್ಷಗಳ ನಂತರ ಇಂದು ಪರಿಸ್ಥಿತಿ ಬದಲಾಗಿದೆ ಕ್ಷಮಿಸಿ ಅವನು ಪರಿಸ್ಥಿಯನ್ನು ಬದಲಾಯಿಸಿಕೊಂಡನೆಂದರೆ ತಪ್ಪಲ್ಲ. ಅವನು ಎಷ್ಟು ಓದಿದ್ದಾನೆ ಅನ್ನೋದು ಶೇ೫೦ ಮಾತ್ರ ಜೀವನಕ್ಕೆ ಬೇಕಾಗುತ್ತದೆ ಅಷ್ಟೇ ಶೇ ೧೦೦ ರಷ್ಟು ಬೇಕಾಗಿರುವುದು ಜೀವನದ ಕಡೆಗೆ ಅವನ ನಡುವಳಿಕೆ ಅಲ್ಲವೇ?ಅವನು ನಡೆದು ಬಂದ ದಾರಿ,ಅವನ ಕಷ್ಟಕಾಲದಲ್ಲಿ ಹೆಗಲುಕೊಟ್ಟವರು ಅವನ ನಿಜವಾದ ನೆಂಟರು. ಅವನು ಒಂದು ಸಂಸ್ಥೆಯ ಒಡೆಯನಾಗಿದ್ದಾನೆ, ನೂರಾರು ಜನಗಳಿಗೆ ಕೆಲಸ ಕೊಟ್ಟು ಅವರ ಜೀವನದ ಬೆಳಕಾಗಿದ್ದಾನೆ.

ಅವನ ಛಲ. ಬಲಕ್ಕೆ, ಜೀವನ ಪ್ರೀತಿಗೆ ಏನು ಹೇಳಬೇಕು? ನಿಜಕ್ಕೂ ಹ್ಯಾಟ್ಸಾಫ್ ಅನ್ನದೇ ಇರಲು ಸಾಧ್ಯವೇ? ನೀವೇ ಹೇಳಿ.

ಶುಕ್ರವಾರ, ಅಕ್ಟೋಬರ್ 1, 2010

"ಒಂದು ಬೆಡ್ ರೂಮ್ ಫ್ಲಾಟ್" ಬರೆದವರು ಒಬ್ಬ ಭಾರತೀಯ ಸಾಫ್ಟ್ ವೇರ್ ಇಂಜನೀಯರ್- ಒಂದು ನೈಜ ಕಹೀ ಘಟನೆ.


"ಒಂದು ಬೆಡ್ ರೂಮ್ ಫ್ಲಾಟ್" ಬರೆದವರು ಒಬ್ಬ ಭಾರತೀಯ ಸಾಫ್ಟ್ ವೇರ್ ಇಂಜನೀಯರ್- ಒಂದು ನೈಜ ಕಹೀ ಘಟನೆ.

ಎಲ್ಲಾ ತಂದೆ-ತಾಯಿಯರ ಕನಸಿನಂತೆ ನಾನೂ ಕೂಡ ಸಾಫ್ಟ್ ವೇರ್ ಇಂಜನೀಯರಿಂಗ್ ನಲ್ಲಿ ಪದವಿ ಪಡೆದು ಅಮೇರಿಕಾದ ಒಂದು ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದೆ, ಅಮೇರಿಕಾ ’ ಅವಕಾಶ ಹಾಗು ಬುದ್ದಿವಂತರ ನಾಡು’. ಅಮೇರಿಕಾ ನೆಲದಲ್ಲಿ ಕಾಲಿಡುತ್ತಿದ್ದಂತೆ ನನ್ನ ಬಹುದಿನಗಳ ಕನಸು ನನಸಾಗಿತ್ತು.
ಕೊನೆಗೂ ನಾನು ಯಾವ ಜಾಗದಲ್ಲಿ ಇರಬೇಕೆಂದುಕೊಂಡಿದ್ದೆನೋ ಅಲ್ಲಿಗೆ ತಲುಪಿಯಾಗಿತ್ತು. ನಾನು ಅಂದೇ ನಿರ್ಧರಿಸಿದ್ದೆ ಇನ್ನು ೫ ವರ್ಷಗಳ ಕಾಲ ಚೆನ್ನಾಗಿ ದುಡಿದು ಸಾಕಷ್ಟು ಹಣಗಳಿಸಿ ಭಾರತದಲ್ಲಿ ಖಾಯಂ ಆಗಿ ನೆಲೆಗೊಳ್ಳುವುದೆಂದು.
ನನ್ನ ತಂದೆ ಸರ್ಕಾರಿ ನೌಕರಿಯಿಂದ ನಿವೃತ್ತರಾಗಿದ್ದರು, ಅವರು ತಮ್ಮ ಜೀವಮಾನ ಪೂರ್ತಿ ದುಡಿದು ಒಂದು ರೂಮಿನ ಮನೆಯನ್ನು ಮಾತ್ರ ತಮ್ಮದಾಗಿಸಿಕೊಂಡಿದ್ದರು.
ನಾನು ನನ್ನ ತಂದೆಯವರಿಗಿಂತ ಹೆಚ್ಚಾಗಿ ಆಸ್ತಿ ಮಾಡಬೇಕೆಂದುಕೊಂಡಿದ್ದೆ. ನಂತರ ನನಗೆ ಒಂಟಿತನದ ಜೊತೆಗೆ ನನ್ನ ಮನೆಯ ನೆನಪು ಕಾಡತೊಡಗಿತು. ನಾನು ಪ್ರತಿವಾರ ನನ್ನ ತಂದೆ-ತಾಯಿಗೆ ಕರೆ ಮಾಡತೊಡಗಿದೆ ಅದೂ ತೀರ ಅಗ್ಗದ ಅಂತಾರಾಷ್ಟ್ರೀಯ ದೂರವಾಣಿ ಕರೆ ಬಳಸಿ. ಎರಡು ವರ್ಷ ಕಳೆಯಿತು, ಆ ಎರಡು ವರ್ಷಗಳನ್ನು ನಾನು ಮೆಕ್ ಡೊನಾಲ್ಡ್ ನಲ್ಲಿ ಬರ್ಗರ್ ಮತ್ತು ಪಿಜ್ಜಾ ಹಾಗು ಡಿಸ್ಕೋಗಳ ಜೊತೆ ಕಳೆದೆ. ಮತ್ತೆರಡು ವರ್ಷ ವಿದೇಶಿ ವಿನಮಯದಲ್ಲಿ ಭಾರತೀಯ ರುಪಾಯಿಯ ದರ ಕಡಿಮೆಯಾಗುವುದನ್ನು ನೋಡಿ ಆನಂದಿಸಿದ್ದೆ.
ಕೊನೆಯದಾಗಿ ನಾನು ಮದುವೆಯಾಗಬೇಕೆಂದು ನಿರ್ಧರಿಸಿದೆ. ನನ್ನ ತಂದೆ-ತಾಯಿಗೆ ವಿಷಯ ತಿಳಿಸಿದೆ, ನನಗೆ ಈಗ ಕೇವಲ ೧೦ ದಿನಗಳ ರಜೆ ಮಾತ್ರ ಸಿಗುತ್ತದೆ ಅಷ್ಟರೊಳಗೆ ಎಲ್ಲವೂ ಮುಗಿಯಬೇಕೆಂದು. ನಾನು ಅಗ್ಗದ ವಿಮಾನದಲ್ಲಿ ನನ್ನ ಪ್ರಯಾಣದ ವ್ಯವಸ್ಥೆ ಮಾಡಿಕೊಂಡೆ. ಮನದಲ್ಲೇ ಸಂತೋಷದ ಉತ್ಸವವನ್ನು ಆಚರಿಸುತ್ತಿದ್ದೆ ಏಕೆಂದರೆ ನನ್ನ ಎಲ್ಲಾ ಗೆಳೆಯರಿಗೆ ಉಡುಗೊರೆಗಳನ್ನು ಕೊಡಬೇಕೆಂದುಕೊಂಡಿದ್ದೆ, ಕೊಡದೇಯಿದ್ದರೆ ಎಲ್ಲರಿಂದಲೂ ಮಾತುಗಳನ್ನು ಕೇಳಬೇಕಲ್ಲಾ ಅದಕ್ಕೆ. ಮನೆಗೆ ಬಂದ ನಂತರ ಒಂದು ವಾರ ಬರೀ ಹುಡುಗಿಯರ ಫೋಟೋ ನೋಡುವುದರಲ್ಲೇ ಕಳೆದೆ ಹಾಗು ದಿನ ಕಳೆದಂತೆ ನನಗೆ ಕಾಲಾವಕಾಶ ಇಲ್ಲದ ಕಾರಣ ಅನಿವಾರ್ಯವಾಗಿ ಒಂದು ಹುಡುಗಿಯನ್ನು ಆರಿಸಿಕೊಳ್ಳಲೇಬೇಕಾಯಿತು.
ನನ್ನ ಭಾವೀ ಅತ್ತೆ-ಮಾವಂದಿರು ಹೇಳಿದರು, ನನಗೆ ಆಶ್ಚರ್ಯವಾಗುವಂತೆ. ಮುಂದಿನ ೨-೩ ದಿನಗಳಲ್ಲಿ ಮದುವೆಯಾಗಬೇಕೆಂದು ಏಕೆಂದರೆ ನನಗೆ ಹೆಚ್ಚಿನ ದಿನ ರಜೆ ಇರಲಿಲ್ಲವಲ್ಲಾ ಅದಕ್ಕೆ. ಮದುವೆಯ ನಂತರ, ಅಮೇರಿಕಾಗೆ ಹೊರಡುವ ಕಾಲ ಬಂದಿತು,ತಂದೆ-ತಾಯಿಗೆ ಸ್ವಲ್ಪ ಹಣವನ್ನು ನೀಡಿದೆ ಹಾಗು ಅವರ ನೆರೆ-ಹೊರೆಯವರಿಗೆ ಅವರನ್ನು ಸ್ವಲ್ಪ ನೋಡಿಕೊಳ್ಳಿಯೆಂದು ಹೇಳಿ ನಾವು ಅಮೇರಿಕಾಗೆ ಹೊರಟೆವು.
ನನ್ನ ಹೆಂಡತಿ ಮೊದ-ಮೊದಲು ಹೊಸ ದೇಶದಲ್ಲಿ ಸಂತೋಷವಾಗಿದ್ದಳು ಹಳೆಯದಾದ ನಂತರ ಅವಳಿಗೆ ಬೇಜಾರಾಗತೊಡಗಿತು. ಹೀಗಾಗಿ ಮನೆಗೆ ಕರೆ ಮಾಡುವ ಅಂತರ ವಾರಕ್ಕೆ ಎರಡು ಕೆಲವು ಸಮಯ ವಾರಕ್ಕೆ ಮೊರು ಬಾರಿಯಾಗತೊಡಗಿತು.ನಮ್ಮ ಉಳಿತಾಯ ಕಡಿಮೆಯಾಗತೊಡಗಿತು.ಎರಡು ವರ್ಷಗಳ ನಂತರ ನಮಗೆ ಮಕ್ಕಳಾಯಿತು. ಎರಡು ಮುದ್ದಾದ ಮಕ್ಕಳು, ಒಂದು ಗಂಡು ಮತ್ತು ಇನ್ನೊಂದು ಹೆಣ್ಣು, ದೇವರೇ ಕೊಟ್ಟ ಉಡುಗೊರೆಗಳು. ಪ್ರತಿ ಬಾರಿಯೊ ನಾನು ನನ್ನ ತಂದೆ-ತಾಯಿಯ ಜೊತೆ ಮಾತನಾಡುತ್ತಿದ್ದೆ ಅವರು ಪ್ರತಿ ಬಾರಿಯೊ ಭಾರತಕ್ಕೆ ಬಾ ಮೊಮ್ಮಕ್ಕಳನ್ನು ನೋಡಿದ ಹಾಗಾಗುತ್ತೆ ಎನ್ನುತ್ತಿದ್ದರು.
ಪ್ರತಿ ವರ್ಷವೂ ಭಾರತಕ್ಕೆ ಹೋಗುವುದೆಂದು ನಿರ್ಧರಿಸುತ್ತಿದೆ... ಆದರೆ ಸ್ವಲ್ಪ ಕೆಲಸ ಹಾಗು ಸ್ವಲ್ಪ ಹಣದ ತೊಂದರೆಯಿಂದ ಹೋಗಲು ಆಗುತ್ತಲೇ ಇರಲಿಲ್ಲ. ವರ್ಷಗಳು ಕಳೆದು ಹೋದವು ಹಾಗು ಭಾರತಕ್ಕೆ ಬರುವುದು ಕನಸಾಗಿ ಹೋಯಿತು. ಒಂದು ದಿನ ಹೀಗೆ ತುರ್ತಾಗಿ ವಿಷಯ ತಿಳಿಯಿತು ನನ್ನ ತಂದೆ-ತಾಯಿಗೆ ಹುಶಾರಿಲ್ಲವೆಂದು. ಆದರೆ ನಾನು ಬಹಳ ಪ್ರಯತ್ನಪಟ್ಟರೂ ನನಗೆ ರಜೆ ದೊರೆಯಲಿಲ್ಲ ಹಾಗು ನಾನು ಭಾರತಕ್ಕೆ ಹೊರಡಲಾಗಲಿಲ್ಲ. ಅನಂತರ ನನ್ನ ತಂದೆ-ತಾಯಿ ತೀರಿಕೊಂಡ ವಿಷಯ ತಿಳಿಯಿತು ಹಾಗು ಅವರ ಹತ್ತಿರದವರು ಯಾರೂ ಇಲ್ಲದ ಕಾರಣ ಸಮಾಜದವರೇ ಅವರ ಅಂತಿಮ ಕಾರ್ಯಗಳನ್ನು ಮಾಡಿದರೆಂದು ತಿಳಿಯಿತು. ನನಗೆ ಕೀಳರಿಮೆ ಕಾಡತೊಡಗಿತು. ನನ್ನ ತಂದೆ-ತಾಯಿ ತಮ್ಮ ಮೊಮ್ಮಕ್ಕಳನ್ನು ನೋಡದೇ ತೀರಿಕೊಂಡರೆಂದು.
ಹೀಗೆ ಹಲವು ವರ್ಷಗಳು ಕಳೆಯಿತು,ನನ್ನ ಮಕ್ಕಳಿಗೆ ಇಷ್ಟವಿಲ್ಲದಿದ್ದರೂ, ನನ್ನ ಹೆಂಡತಿಯ ಉತ್ಸಾಹದಿಂದ ನಾವು ಭಾರತಕ್ಕೆ ಹಿಂತಿರುಗಿದೆವು ಇಲ್ಲೆಯೇ ನೆಲೆಸಲು.ನಾನು ನನಗೆ ಬೇಕಾಗುವಂತಹ ಮನೆ ಹುಡುಕಲು ಪ್ರಯತ್ನಿಸಿದೆ ಅದರೆ ನನ್ನ ದುರಾದೃಷ್ಟವೋ ಏನೋ ನನ್ನ ಬಳಿಯಿದ್ದ ಹಣವೂ ಸಾಕಷ್ಟಿಲ್ಲದ ಕಾರಣ ಯಾವುದನ್ನೂ ಕೊಳ್ಳಲಾಗಲಿಲ್ಲ ಹಾಗೇ ಇತ್ತೀಚಿನ ದಿನಗಳಲ್ಲಿ ಆಸ್ತಿಯ ಬೆಲೆಗಳೂ ತುಂಬಾ ಜಾಸ್ತಿಯಾಗಿತ್ತು. ಹೀಗಾಗಿ ನಾನು ಮತ್ತೇ ಅಮೇರಿಕಾಗೆ ಹೋಗಲು ನಿರ್ಧರಿಸಿದೆ.
ನನ್ನ ಹೆಂಡತಿ ಅಲ್ಲಿಗೆ ಬರಲು ನಿರಾಕರಿಸಿದಳು ಹಾಗು ನನ್ನ ಮಕ್ಕಳು ಭಾರತದಲ್ಲಿ ಇರಲು ಇಷ್ಟಪಡಲಿಲ್ಲ. ನಾನು ಹಾಗು ನನ್ನ ಇಬ್ಬರು ಮಕ್ಕಳು ಅಮೇರಿಕಾಗೆ ಹಿಂತಿರುಗಿದೆವು ನನ್ನ ಹೆಂಡತಿಗೆ ಎರಡು ವರ್ಷಗಳಲ್ಲಿ ಬಂದೇ ಬರುತ್ತೇನೆ ಎಂದು ವಚನವನ್ನು ಕೊಟ್ಟು.
ಕಾಲಚಕ್ರ ಉರುಳಿತು, ನನ್ನ ಮಗಳು ಅಮೇರಿಕಾದ ಹುಡುಗನನ್ನು ಮದುವೆಯಾಗಲು ನಿರ್ಧರಿಸಿದ್ದಳು ಹಾಗು ನನ್ನ ಮಗ ಅಮೇರಿಕಾದಲ್ಲಿ ಸಂತೋಷವಾಗಿದ್ದಾನೆ. ನಾನು ನಿರ್ಧರಿಸಿದ್ದೆ ಸಾಕು ಸಾಕು ಎಲ್ಲಾ ಗಂಟು ಮೊಟೆ ಕಟ್ಟಿಕೊಂಡು ಭಾರತಕ್ಕೆ ಬಂದು ಬಿಡಬೇಕೆಂದು. ನನ್ನ ಬಳಿ ಒಂದು ಒಳ್ಳೆಯ ಬಡಾವಣೆಯಲ್ಲಿ ಎರಡು ರೂಮಿನ ಪ್ಲಾಟನ್ನು ಕೊಂಡುಕೊಳ್ಳುವಷ್ಟು ಹಣ ನನ್ನ ಬಳಿ ಇತ್ತು.
ಈಗ ನನಗೆ ೬೦ ವರ್ಷ, ನನ್ನ ಪ್ಲಾಟ್ ನಿಂದ ಹೊರಗೆ ಬರುವುದು ಯಾವಾಗೆಂದರೆ ನಿಯಮಿತವಾಗಿ ನಾನು ದೇವಸ್ಥಾನಕ್ಕೆ ಹೊರಡುವಾಗ ಮಾತ್ರ.ನನ್ನ ನಂಬಿಕಸ್ಥ ಹೆಂಡತಿಯೊ ನನ್ನನ್ನು ಅಗಲಿ ಸ್ವರ್ಗ ಸೇರಿದಳು.
ಕೆಲವು ವೇಳೆ ನನಗೇ ಆಶ್ಚರ್ಯವಾಗುತ್ತೆ,ಏನೇನೆಲ್ಲ ಆಗಿ ಹೋಗಿದೆ ಎಲ್ಲವೂ ಸರಿಯೇ? ನನ್ನ ತಂದೆ ಭಾರತದಲ್ಲೇ ಇದ್ದು,ಒಂದು ಮನೆಯನ್ನು ಕೊಂಡುಕೊಂಡಿದ್ದರು. ನಾನು ಕೂಡ ಎಷ್ಟೋಂದೆಲ್ಲಾ ಒದ್ದಾಡಿ ಈಗ ನನ್ನ ಬಳಿಯೊ ಅಷ್ಟೇಯಿದೆ.
ನಾನು ನನ್ನ ತಂದೆ-ತಾಯಿಯನ್ನು ಮತ್ತು ನನ್ನ ಮಕ್ಕಳನ್ನು ಒಂದು ಹೆಚ್ಚುವರಿ ಬೆಡ್ ರೂಮಿಗಾಗಿ ಕಳೆದುಕೊಂಡೆ.
ಕಿಟಕಿಯಿಂದ ಹೊರಗೆ ನೋಡಿದರೆ ಮಕ್ಕಳು ಕುಣಿಯುತ್ತಿರುವುದು ಕಾಣಿಸುತ್ತದೆ. ಈ ಹಾಳು ಟಿವಿ ಯಿಂದ ನಮ್ಮ ಮಕ್ಕಳು ಹಾಳಾಗುತ್ತಿದ್ದಾರೆ, ಅವರು ನಮ್ಮ ಮೌಲ್ಯ,ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ನನಗೆ ಅವಾಗವಾಗ ನನ್ನ ಮಕ್ಕಳಿಂದ ಪತ್ರಗಳು ಬರುತಿರುತ್ತದೆ ನನ್ನ ಕ್ಷೇಮ ವಿಚಾರಿಸಿ. ಹಾಂ! ಹಾಗಾದರೂ ಅವರು ನನ್ನನ್ನು ನೆನೆಯುತ್ತಾರಲ್ಲ ಅನ್ನೋ ಸಮಾಧಾನವಿದೆ.
ನಾನು ಸತ್ತ ನಂತರ ನನ್ನ ಅಂತಿಮ ಕಾರ್ಯಗಳನ್ನು ನನ್ನ ನೆರೆಹೊರೆಯವರೇ ಮಾಡುತ್ತಾರೆ ಅನಿಸುತ್ತದೆ. ದೇವರು ಅವರನ್ನು ಚೆನ್ನಾಗಿಡಲಿ. ಆದರೂ ನನ್ನಲ್ಲಿ ಆ ಪ್ರಶ್ನೆ ಹಾಗೇ ಉಳಿದಿದೆ’'was all this worth it?'
ಈಗಲೂ ಅದಕ್ಕೆ ಉತ್ತರವನ್ನು ಹುಡುಕುತ್ತಿದ್ದೇನೆ.........