ಶುಕ್ರವಾರ, ಮಾರ್ಚ್ 29, 2024

ಆಹಾ! ಭಾನುವಾರ

 

ನನಗಂತೂ ಭಾನುವಾರವೆಂದರೆ ರೋಮಾಂಚನವಾಗುತ್ತದೆ. ಭಾನುವಾರ ಯಾವಾಗ ಬರುವುದೋ! ಎಂದು ಮನಸ್ಸು ಕಾತರಿಸುತ್ತದೆ. ಭಾನುವಾರ ನನಗಂತೂ ಒಂದು ವಿಶೇಷ ದಿನವೆಂದೇ ಹೇಳಬೇಕು. ಪ್ರತಿದಿನ ಉದ್ಯೋಗ ನಿಮ್ಮಿತ್ತ ಬೆಳಿಗ್ಗೆ ಬೇಗ ಎದ್ದರೂ ಭಾನುವಾರವೂ ಸಹ ಖುಷಿಯಿಂದ ಬೆಳಿಗ್ಗೆ ಬೇಗ ಏಳಬೇಕೆನ್ನುವ ಹುಮ್ಮಸ್ಸು ನನ್ನಲ್ಲಿ ಈಗಲೂ ಉಳಿದಿದೆ. ಭಾನುವಾರವೆಂದರೆ ಮನೋಲ್ಲಾಸ, ಭಾನುವಾರನೆಂದರೆ ಆಹ್ಲಾದ. ಸಮರ್ಥವಾಗಿ ಗುಣಾತ್ಮಕವಾಗಿ ಬಳಸಿಕೊಳ್ಳಬೇಕೆನ್ನುವ ತವಕ.

"ಬೆಳಗಾಗೆದ್ದು ನಾನ್ಯಾರ ನೆನೆಯಾಲಿ" ಎಂಬ ಜನಪದರ ನುಡಿಯಂತೆ ಬೆಳಿಗ್ಗೆ ಐದು ಗಂಟೆಗೆಲ್ಲಾ ಎದ್ದು ಹಲವರನ್ನು ನೆನೆಯುತ್ತಾ, ಶನಿವಾರವೇ ಸಿದ್ಧಪಡಿಸಿದ ಕೆಲಸದ ಪಟ್ಟಿಯಂತೆ ನನ್ನ ಭಾನುವಾರ ಆರಂಭವಾಗುತ್ತದೆ. ಅವೆಲ್ಲವುಗಳನ್ನು ಪೂರ್ಣಗೊಳಿಸುವುದೇ ನನ್ನ ಭಾನುವಾರದ ಗುರಿ. ಚುಮು ಚುಮು ಚಳಿಯಲ್ಲಿ ಕಾಫಿ ಹೀರುವುದೇ ಅಪ್ಯಾಯಮಾನ. ಚುಮು ಚುಮು ಚಳಿಯಲ್ಲಿ ಘಮ ಘಮ ಬಿಸಿ ಬಿಸಿ ಕಾಫಿ ಜೊತೆ ಮನಸ್ಸು ಹೇಳುತ್ತೆ "ಆಹಾ! ಭಾನುವಾರ".

ಕಾಫೀ ಹೀರುತ್ತಾ ತೇಲುವ ಮನಸ್ಸಿನ ಬೆಳಗಿನ ಆಹ್ಲಾದಕರ ವಾತಾವರಣದಲ್ಲಿ ಮನಃ ಪಟಿಲದ ಮೇಲೆ ಅನೇಕಾನೇಕ ಕವಿತಾಭಾವಗಳು ಪುಂಖಾನು ಪುಂಖವಾಗಿ ಹೊರಹೊಮ್ಮುತ್ತದೆ. ಇದೇ ಸಮಯದಲ್ಲಿ ಭಾವ ಬರೆದಿಡಲೇಬೇಕು ಇಲ್ಲವಾದಲ್ಲಿ ಮತ್ತೆ ಅವು ಎಂದೂ ಮನಸ್ಸಿಗೆ ಬಾರವು. ಹೀಗಾಗಿ ಸಮಯ ನನಗೆ ಬಹಳ ಮುಖ್ಯವಾದುದು. ಒಂದು, ಎರಡು ಅಥವಾ ಕೆಲವೊಮ್ಮೆ ಐದು, ಆರು ಕವಿತೆಗಳನ್ನು ಬರೆದಿರುವ ಉದಾಹರಣೆಗಳೂ ಇವೆ. "ಮಳೆ ನಿಂತ ಮೇಲೆ" ಅನ್ನೋಹಾಗೆ ಮನಸ್ಸು ನೆಮ್ಮದಿಯ ಭಾವ ತಾಳಿದ ಮೇಲೆ ಬೆಳಗಿನ ವಾಯುಸಂಚಾರಕ್ಕೆ ಹೊರಡುವ ಸಮಯವಾಗಿರುತ್ತದೆ. ಮನೆಯ ರೆಫ್ರಿಜಿರೇಟರ್ ನಲ್ಲಿ ಏನೇನು ತರಕಾರಿಗಳಿವೆ? ಏನಿಲ್ಲ? ಎಂದು ಇಣಿಕಿ ನೋಡಿ ಏನು ತರಬೇಕೆಂದು ಗುರುತು ಹಾಕಿಕೊಂಡು ಹೊರಡುತ್ತೇನೆ.

ಆನಂದಮಯ ಜಗ ಹೃದಯ ಏತಕೆ ಭಯ ಮಾಣೋ

ಸೂರ್ಯೋದಯ ಚಂದ್ರೋದಯ ದೇವರ ದಯಾ ಕಾಣೋ

ಬಿಸಿಲಿದು ಬರಿ ಬಿಸಿಲಲ್ಲವೋ ಸೂರ್ಯನ ಕೃಪೆ ಕಾಣೋ

ಸೂರ್ಯನು ಬರಿ ರವಿಯಲ್ಲವೋ ಭ್ರಾಂತಿಯ ಮಾಣೋ

 

ಎಂಬ ಕವಿವಾಣಿಯಂತೆ ಬೆಳಗಿನ ವಿದ್ಯಮಾನ ವೀಕ್ಷಿಸಲು ಮುಕ್ತ ಮನಸ್ಸಿನಿಂದ ಹೊರಡುತ್ತೇನೆ.  ಹಕ್ಕಿಗಳ ಕಲರವ, ಆಕಾಶದೆಲ್ಲೆಡೆ ಮೂಡಣ ದಿಕ್ಕಿನಲ್ಲಿ ಮೂಡುವ ಬೆಳಗಿನ ಚಿತ್ತಾರ ಅನುಭವಿಸುವುದು ಸಾರ್ಥಕ್ಯದ ಕ್ಷಣಗಳು.

ಮನದಾಳದಲ್ಲಿ ಹೊಸ ಚಿಂತನೆಗಳನ್ನು ಮೆಲುಕುಹಾಕುತ್ತಾ ಬೆಳಗಿನ ಜನಸಾಮಾನ್ಯರ ವಿದ್ಯಮಾನಗಳನ್ನು ಹೊಸ ದೃಷ್ಟಿಕೋನದಿಂದ ನೋಡುತ್ತಾ ಸುಮಾರು ಒಂದೂವರೆ ಗಂಟೆಗಳ ಕಾಲದ ನನ್ನ ಬೆಳಗಿನ ವಾಯುಸಂಚಾರ ಮನೆ ತಲುಪುವುದರೊಂದಿಗೆ ಮುಗಿಯುತ್ತದೆ. ಬೆವೆತ ದೇಹ ತಣ್ಣೀರಿನಲ್ಲಿ ಮುಖತೊಳೆದುಕೊಂಡು ಎರಡೆನೆಯ ಬಿಸಿ ಬಿಸಿ ಕಾಫಿ ಹೀರೋದೇ ಭಾನುವಾರದ ಸ್ವರ್ಗ ಸುಖ.

ಭಾನುವಾರದ ಇತರ ವಿವರಗಳನ್ನು ಹೇಳಲು ಬೇಕಾದಷ್ಟಿದೆ ಸಧ್ಯಕ್ಕೆ ಇಷ್ಟು ಸಾಕು.

ಗುರುವಾರ, ಮಾರ್ಚ್ 28, 2024

#001-ಅಸಾಧ್ಯವಾದುದನ್ನು ಸಾಧಿಸಿ!

 

ನಲನು ರಾಮನಿಗೆ ಹೇಳಿದನು, ನಾನು ಸಾಗರಕ್ಕೆ  ಸೇತುವೆಯನ್ನು ನಿರ್ಮಿಸುವ ಸಾಮರ್ಥ್ಯ ಹೊಂದಿದ್ದೇನೆ. ನಾನು ಇತರ ಅಗ್ರಗಣ್ಯ ವಾನರರೊಂದಿಗೆ ಈಗಲೇ  ಸಾಗರಕ್ಕೆ  ಸೇತುವೆಯನ್ನು ನಿರ್ಮಿಸಲು ಪ್ರಾರಂಭಿಸುತ್ತೇನೆ.

ರಾಮನು ನಲನ ಮಾತಿಗೆ ಒಪ್ಪಿದನು, ನೂರಾರು ಮತ್ತು ಸಾವಿರಾರು ವಾನರ ವೀರರು ಸಂತೋಷದಿಂದ ಹಾರಿದರು ಮತ್ತು ಹತ್ತಿರದ ಕಾಡಿನ ಕಡೆಗೆ ಧಾವಿಸಿದರು. ಅವರು ಕಲ್ಲು ಮತ್ತು ಮರಗಳನ್ನು ಮುರಿದು ಸಮುದ್ರದ ಕಡೆಗೆ ಎಳೆತಂದರು. ಅವರು ಸಾಲ, ಅಶ್ವಕ್ರನ, ಧವ, ಬಿದಿರು, ಕುಟಜ, ಅರ್ಜುನ ಮತ್ತು ಇತರ ಎಲ್ಲಾ ರೀತಿಯ ಮರಗಳನ್ನು ಸಂಗ್ರಹಿಸಲು ಪ್ರಾರಂಭಿಸಿದರು. ಪ್ರಬಲ ಶಕ್ತಿಯುಳ್ಳ ವಾನರರು ಆನೆಯ ಗಾತ್ರದ ಬಂಡೆಗಳನ್ನು ಕಿತ್ತು ಸಮುದ್ರದ ಕಡೆಗೆ ಯಾಂತ್ರಿಕ ಉಪಾಯಗಳೊಂದಿಗೆ ಸಾಗಿಸಿದರು. ಅವರು ಬಂಡೆಗಳನ್ನು ಸಾಗರಕ್ಕೆ ಎಸೆದಾಗ, ಅದರ ನೀರು ಆಕಾಶದ ಕಡೆಗೆ ಏರುಮುಖವಾಗಿ  ಮತ್ತು ಹಿಂದಕ್ಕೆ ಚಿಮ್ಮುತ್ತಿತ್ತು. ಎಲ್ಲಾ ಕಡೆಗಳಿಂದ  ಬಂಡೆಗಳು ಮತ್ತು ಮರಗಳು ಸಮುದ್ರದ ಶಾಂತತೆಯನ್ನು  ಕದಡಿದವು. ಕೆಲವು ವಾನರರು ಬಂಡೆಗಳನ್ನು ಸರಳ ರೇಖೆಯಲ್ಲಿ ಇರಿಸಲು ಉದ್ದವಾದ ಹಗ್ಗಗಳನ್ನು ಕಟ್ಟಿದರು.

ನಲನು ಸೇತುವೆಯ  ವಿನ್ಯಾಸವನ್ನು ಅಂತಿಮಗೊಳಿಸಿದನು  ಮತ್ತು ಸಾಗರದ ಮಧ್ಯದಲ್ಲಿ ಸ್ಮಾರಕ ಸೇತುವೆಯನ್ನು ನಿರ್ಮಿಸಲು ಪ್ರಾರಂಭಿಸಿದನು. ಕೆಲವು ವಾನರರು ಸೇತುವೆಯನ್ನು ಅಳೆಯಲು ಕಂಬಗಳನ್ನು ಹಿಡಿದಿದ್ದರು ಮತ್ತು ಇತರರು ವಸ್ತುಗಳನ್ನು ಸಂಗ್ರಹಿಸಿದರು. ಎಲ್ಲಾ ವಾನರರು ವ್ಯವಸ್ಥೆ ಮಾಡಲು ಮತ್ತು ಕೊಡುಗೆ ನೀಡಲು ಇಲ್ಲಿಗೆ ಮತ್ತು ಅಲ್ಲಿಗೆ ಓಡುತ್ತಿದ್ದರು.

ಮೊದಲ ದಿನ, 14 ಯೋಜನಗಳಷ್ಟು ಸೇತುವೆಯನ್ನು ನಿರ್ಮಿಸಲಾಯಿತು ಮತ್ತು ಅವರ ಪ್ರಯತ್ನದ ಫಲಿತಾಂಶವನ್ನು ನೋಡಿ ಎಲ್ಲರೂ ರೋಮಾಂಚನಗೊಂಡರು.

ಎರಡನೆಯ ದಿನ ಎಲ್ಲರ ಪ್ರಯತ್ನದಿಂದ 20 ಯೋಜನಗಳನ್ನು ನಿರ್ಮಿಸಲಾಯಿತು.

ಮೂರನೇ ದಿನದಲ್ಲಿ 21 ಯೋಜನಗಳಷ್ಟು ಸೇತುವೆಯನ್ನು ಹೆಚ್ಚುವರಿಯಾಗಿ ತ್ವರಿತವಾಗಿ ನಿರ್ಮಿಸಲಾಯಿತು.

ನಾಲ್ಕನೇ ದಿನದಲ್ಲಿ 22 ಯೋಜನಗಳನ್ನು ನಿರ್ಮಿಸಲಾಯಿತು ಮತ್ತು ಐದನೇ ದಿನದಲ್ಲಿ ಲಂಕಾ ತೀರದವರೆಗೆ 23 ಯೋಜನಗಳಷ್ಟು ಸೇತುವೆಯನ್ನು ನಿರ್ಮಿಸಲಾಯಿತು.

ವಿಶ್ವಕರ್ಮನ ಬಲಿಷ್ಠ ಮತ್ತು ಸುಪ್ರಸಿದ್ಧ ಮಗನಾದ ನಲನು ಸಮುದ್ರಕ್ಕೆ ಅಡ್ಡಲಾಗಿ ಸೇತುವೆಯನ್ನು ತನ್ನ ತಂದೆ ನಿರ್ಮಿಸಿದಂತೆಯೇ ಅತ್ಯುತ್ತಮವಾಗಿ ನಿರ್ಮಿಸಿದನು. ಸುಂದರ ಸೇತುವೆಯು ಆಕಾಶದಲ್ಲಿ ನಕ್ಷತ್ರಗಳ ಕ್ಷೀರಪಥದಂತೆ ಪ್ರಕಾಶಮಾನವಾಗಿ ಹೊಳೆಯಿತು. ಅದ್ಭುತವನ್ನು ಎತ್ತಿಹಿಡಿಯುವ ಬಯಕೆಯಿಂದ, ಗಂಧರ್ವರು, ಸಿದ್ಧರು ಮತ್ತು ಋಷಿಗಳ ಜೊತೆಗೆ ದೇವತೆಗಳು ಗುಂಪು ಗುಂಪಾಗಿ ಬಂದು ಆಕಾಶದಲ್ಲಿ ನಿಂತರು. 10 ಯೋಜನ ಅಗಲ ಮತ್ತು 100 ಯೋಜನ ಉದ್ದದ ಸೇತುವೆಯನ್ನು ನಿರ್ಮಿಸುವ ಪ್ರಯತ್ನವನ್ನು ಅವರು ಶ್ಲಾಘಿಸಿದರು.

ವಾನರರು ಚಿಮ್ಮಿ ಸಂತೋಷದಿಂದ ಕೂಗಿದರು. ಇತರ ಎಲ್ಲಾ ಜೀವಿಗಳು ಸಮುದ್ರಕ್ಕೆ  ಸೇತುವೆಯ ನಿರ್ಮಾಣವನ್ನು ಊಹಿಸಲಾಗದ, ಅಸಾಧ್ಯ ಮತ್ತು ಅದ್ಭುತವೆಂದು ಆಶ್ಚರ್ಯದಿಂದ ನೋಡಿದರ, ಇದರಿಂದಾಗಿ ಅವರೆಲ್ಲರೂ ಅದ್ಭುತದ ಸೇತುವೆಯನ್ನು ನೋಡಿ ರೋಮಾಂಚನಗೊಂಡರು .

ಕೆಲಸದಲ್ಲಿ ತೊಡಗಿದವರನ್ನು  ಒಗ್ಗಟ್ಟಾಗಿ ಸೇರಿಸುವ ಉನ್ನತ ಉದ್ದೇಶದಿಂದ ಉತ್ಸುಕರಾದಾಗ ಐತಿಹಾಸಿಕ  ಕಾರ್ಯವನ್ನು ತ್ವರಿತವಾಗಿ ಸಾಧಿಸಲು ಸಾಧ್ಯವಾಗುತ್ತದೆ.

ಅದು ಮುಗಿಯುವವರೆಗೆ ಯಾವಾಗಲೂ ಅಸಾಧ್ಯವೆಂದು ತೋರುತ್ತದೆ.

 #ಜೀವನದ ಆಟ

ಮೂಲ ಆಂಗ್ಲಭಾಷೆ: ಸ್ವಪ್ನಿಲ್ ಗುಪ್ತ