ಸೋಮವಾರ, ನವೆಂಬರ್ 18, 2013

ನಾವು ಹಾಗೂ ಕನ್ನಡದರಿಮೆ

ಮತ್ತೊಂದು ಕನ್ನಡ ರಾಜ್ಯೋತ್ಸವ ಮುಗಿದಿದೆ. ಅದು ಹತ್ತು ಹಲವು ಸವಾಲುಗಳನ್ನು ಜೊತೆ ಜೊತೆಗೆ ಹೊತ್ತು ತಂದಿದೆ. 2500 ವರ್ಷಗಳಿಗೂ ಹೆಚ್ಚು ಇತಿಹಾಸವುಳ್ಳ ಭಾಷೆ ಎಂಬ ಹೆಗ್ಗಳಿಕೆ ಒಂದಾದರೆ ಮತ್ತೊಂದೆಡೆ ಇಂದಿನ ಜಾಗತಿಕ ವಾಸ್ತವದ ನೆಲೆಗಟ್ಟಿನಲ್ಲಿ ಕನ್ನಡ ಭಾಷೆ ಎಲ್ಲೆಡೆಯಲ್ಲೂ ತೆರೆದುಕೊಳ್ಳದೆ ಬೆಳವಣಿಗೆ ಮರೀಚಿಕೆ ಎಂದೆನಿಸಿದೆ. ಭಾಷೆ ಉಳಿಯುವುದು ಹಾಗು ಬೆಳೆಯುವುದು ಆಯಾ ಭಾಷಾ ಜನರು / ಸಮುದಾಯದ ನಡುವಳಿಕೆಯ ಮೇಲೆ ನಿಂತಿದೆ. ಉದಾ: ಸಂಸ್ಕೃತ ತನ್ನ ಅಸ್ತಿತ್ವ ಕಳೆದುಕೊಳ್ಳುವುದಕ್ಕೆ ಇಂತಹುದೇ ಕಾರಣಗಳಿರಬಹುದು.  ಇಂದು ವಿಶ್ವವೇ ಒಂದು ಹಳ್ಳಿ - ಗ್ಲೋಬಲ್ ವಿಲೇಜ್ – "ವಸುದೈವ ಕುಟುಂಬ" ಎನ್ನುವ ಹಿರಿಯರ ದೃಷ್ಟಿಕೋನದ ಆದರ್ಶಚಿಂತನೆ ವಾಸ್ತವವಾಗಿದೆ. ಹೀಗಿರುವಾಗ ಒಂದು ಭಾಷೆ, ಒಂದು ಧರ್ಮ, ಒಂದು ಜನಾಂಗ ಎನ್ನುವ ಸಂಕೀರ್ಣ ಚಿಂತನೆಗೆ ಅವಕಾಶಗಳೇ ಇಲ್ಲದಂತಾಗಿದೆ. ಆದಿಕವಿ ಪಂಪನ "ಮನುಷ್ಯ ಕುಲಂ ತಾನೊಂದೆ ವಲಂ" ಎಂಬುದು ಸಹಜತೆಗೆ ಹತ್ತಿರವಾಗುತ್ತಿದೆ. ಹೊಸತನಗಳಿಗೆ ಪ್ರತಿಯೊಬ್ಬರೂ ತೆರೆದುಕೊಳ್ಳುವ ಇಂದಿನ ದಿನಗಳಲ್ಲಿ ವ್ಯಾಪಾರೀಕರಣದ ಭರಾಟೆಯಲ್ಲಿ ಭಾಷೆ ಮತ್ತೊಂದು ಭಾಷೆಯ ಮೇಲೆ ಪ್ರಭಾವ ಬೀರುತ್ತಿದೆ. ಹೊಸ ಹೊಸ ವೈಜ್ಞಾನಿಕ ಆವಿಷ್ಕಾರಗಳು ದಿನಕ್ಕೊಂದರಂತೆ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದೆ. ಅನ್ಯಭಾಷೆಗಳು ಹಾಗು ನಮ್ಮ ಭಾಷೆ ಈ ತೆರನಾದ ಪ್ರಕ್ರಿಯೆಗೆ ಹೇಗೆ ಒಡ್ಡಿಕೊಳ್ಳುತ್ತದೆ? ಹೇಗೆ ಬದಲಾವಣೆ ತಂದುಕೊಳ್ಳುತ್ತದೆ? ಎನ್ನುವುದರ ಮೇಲೆ ಭಾಷೆಯ ಬೆಳವಣಿಗೆ ಹಾಗು ಅವನತಿ ಅವಲಂಬಿತವಾಗಿದೆ. ವೈಜ್ಞಾನಿಕ ಆವಿಷ್ಕಾರಗಳೊಂದೇ ಅಲ್ಲ ಜಾಗತೀಕರಣ, ವಸಾಹತೀಕರಣಕ್ಕೆ ನಮ್ಮ ಭಾಷೆ ಹೇಗೆ ಬದಲಾಗಿದೆ ಅನ್ನುವುದೂ ಮುಖ್ಯ. ಜಾಗತೀಕರಣದಿಂದ ನಮ್ಮ ಜೀವನಶೈಲಿಯಲ್ಲಿ ಅನೇಕ ಬದಲಾವಣೆಗಳಾಗಿವೆ ಆದರೆ ನಮ್ಮ ಭಾಷೆ ಹಾಗೆ ಬದಲಾಗಿದೆಯೇ? ಇಂದಿನ ಈ ದಿನಗಳಲ್ಲಿ ಒಂದು ಭಾಷೆ ಮತ್ತೊಂದು ಭಾಷೆಯ ಮೇಲೆ ಸವಾರಿ ಮಾಡಿ ಹೆಚ್ಚುಗಾರಿಕೆ ತೋರಿಸಿಕೊಳ್ಳುವ ಪ್ರಕ್ರಿಯೆ ಹೆಚ್ಚಾಗಿ ಕಾಣಸಿಗುತ್ತದೆ. ಅಂತಹುದರಲ್ಲಿ ಭಾಷಾ ಅಭಿಮಾನ, ವ್ಯಾಮೋಹಗಳಿಗಿಂತ ಜನತೆ ಸುಲಭ, ಚೆನ್ನಾಗಿದೆ, ಹೊಂದಿಕೆಯಾಗುತ್ತದೆ, ಸ್ಟೇಟಸ್‍ಗಾಗಿ, ಪ್ರಿಸ್ಟೀಜ್‍ಗಾಗಿ ಎನ್ನುವ ಕಾರಣಗಳಿಗಾಗಿ ತಮ್ಮತನ ಕಳೆದುಕೊಳ್ಳುವುದು ಎಷ್ಟು ಸಮಂಜಸ? ಜಾಗತೀಕ ಮಟ್ಟದಲ್ಲಿ ನಾವು ಬೆಳೆಯಬೇಕಾದರೆ ನಮ್ಮತನವನ್ನು ನಾವು ಕಳೆದುಕೊಳ್ಳಬೇಕೆ?

ಇನ್ನು ದಿನನಿತ್ಯದ ಕೆಲಸಕಾರ್ಯಗಳಲ್ಲಿ ನಾವು ನಮ್ಮ ಭಾಷೆಯನ್ನು ಎಷ್ಟು ಉಪಯೋಗಿಸುತ್ತೇವೆ? ನಾವೇ ಪ್ರಶ್ನಿಸಿಕೊಂಡರೆ - ತೀರ ಕಡಿಮೆ. ನಾವಿರುವ ವ್ಯವಸ್ಥೆ ನಮ್ಮ ಭಾಷೆಗೆ ಪೂರಕವಾಗಿದೆಯೇ? ಮೊಟ್ಟಮೊದಲು ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಸೇರಿಸುವಾಗಲೇ ಅಡ್ಡಿ ಆತಂಕಗಳು ಸಾಲುಸಾಲಾಗಿಯೇ ಎದುರಾಗುತ್ತವೆ. ಪ್ರೀ-ನರ್ಸರಿ, ನರ್ಸರಿ, ಎಲ್‍ಕೆಜಿ, ಯುಕೆಜಿ ಶಾಲೆಗೆ ಸೇರಿಸುವಾಗಲೇ ತೊಂದರೆ ಅನುಭವಿಸುತ್ತೇವೆ.  ಕಾಲಕ್ಕೆ ತಕ್ಕ ಹಾಗೆ ಇರಬೇಕೆಂಬ ಮಾತಿನಂತೆ ಹೆಚ್ಚು ಮಾನ್ಯತೆ ಇರುವ ಸಿಬಿಎಸ್‍ ಸಿ ಅಥವಾ ಐಸಿಎಸ್‍ ಇ ಶಿಕ್ಷಣ ಪಠ್ಯ ವ್ಯವಸ್ಥೆಗೆ ಎಲ್ಲರೂ ಹಾತೊರೆಯುತ್ತಾರೆ. ಇಂದಿನ ವ್ಯಾಪಾರದ ಯುಗ ಲಾ ಆಫ್ ಡಿಮ್ಯಾಂಡ್ ಅಂಡ್ ಸಪ್ಲೈ ಗೆ ಬದ್ಧವಾಗಿವೆ. ಜನ ಏನನ್ನು ಬಯಸುತ್ತಾರೋ ಅದನ್ನೇ ಶಾಲೆ-ಕಾಲೇಜಿನವರು ಜನರ ಮುಂದಿಡುತ್ತಾರೆ, ಅದು ನಿಜವೂ ಹೌದು. ನಾವೇ ನಮ್ಮ ಪಠ್ಯ ವ್ಯವಸ್ಥೆ ಸರಿಯಿಲ್ಲ ಎನ್ನುತ್ತಿದ್ದೇವೆ. ಎಷ್ಟು ವಿಪರ್ಯಾಸವಲ್ಲವೆ! ಅಂದರೆ ನಮ್ಮ ಭಾಷೆ, ನಮ್ಮ ಪಠ್ಯ ನಮಗೇ ಸಹ್ಯವಿಲ್ಲ. ಏಕೆ ಹೀಗೆ? ಇದಕ್ಕೆ ಪರಿಹಾರವೇನು? ನಮ್ಮ ಭಾಷೆಗೆ ಅನ್ನಕೊಡುವ ಶಕ್ತಿ ಇಲ್ಲವೆ? ಹೊಟ್ಟೆಗೆ ಹಿಟ್ಟು ಕೊಡುವ ಭಾಷೆಯನ್ನಾಗಿ ನಮ್ಮ ಭಾಷೆಯನ್ನು ಬದಲಾಯಿಸುವುದಾದರೂ ಹೇಗೆ?

ಇದು ಒಂದು ಉದಾಹರಣೆಯಷ್ಟೆ. ನಮ್ಮ ದಿನನಿತ್ಯದಲ್ಲಿ ವ್ಯವಹರಿಸುವ ಪ್ರತಿಯೊಂದು ವ್ಯವಸ್ಥೆಯಲ್ಲೂ ಕನ್ನಡ ಇಂದು ಕಣ್ಮರೆಯಾಗಿದೆ. ನಿತ್ಯ ವ್ಯವಹರಿಸುವ ಬ್ಯಾಂಕ್, ಸಾರಿಗೆ, ಮಾಲ್‍ ಗಳಿಗೆ ಭೇಟಿನೀಡಿ ವ್ಯವಹರಿಸುವಾಗ, ಅವಶ್ಯಕ ಅರ್ಜಿಗಳನ್ನು ತುಂಬಿಸುವಾಗ ನಾವು ಬಳಸುವುದು ಇಂಗ್ಲೀಷ್ ಭಾಷೆಯನ್ನು. ಇಂಗ್ಲೀಷ್ ಭಾಷೆ ಗೊತ್ತಿಲ್ಲದಿದ್ದರೆ ಹಿಂದಿ ಭಾಷೆಯಾದರೂ ಗೊತ್ತಿರಬೇಕು ಇಲ್ಲದಿದ್ದಲ್ಲಿ ಅರ್ಜಿ ತುಂಬಿಸಲು ಆಗುವುದಿಲ್ಲ ಅಥವಾ ವ್ಯವಹರಿಸಲು ಸಾಧ್ಯವಾಗುವುದಿಲ್ಲ. ನಮ್ಮ ದಿನನಿತ್ಯದ ಆಡುಭಾಷೆ ಕನ್ನಡವನ್ನು ಬಳಸುವ ಅವಕಾಶಗಳನ್ನು ನಮ್ಮ ಇಂದಿನ ವ್ಯವಸ್ಥೆ ಕಿತ್ತುಕೊಳ್ಳುತ್ತಿದೆ. ವ್ಯವಸ್ಥಿತ ಸಂಸ್ಥೆಯಲ್ಲಿ ಈ ತರಹದ ತೊಂದರೆ ಇದ್ದರೆ ಇನ್ನು ಪ್ರತಿನಿತ್ಯ ವ್ಯವಹರಿಸುವ ಮನೆಕೆಲಸದವಳು, ತರಕಾರಿಯವನು, ಮನೆ ಕಟ್ಟುವವನು ಅನ್ಯಭಾಷೆಯವನಾಗಿರುತ್ತಾನೆ. ಅಲ್ಲಿಯೂ ಸಹ ನಮ್ಮ ಕನ್ನಡಕ್ಕೆ ಕತ್ತರಿ ಬಿದ್ದಂತಾಯಿತು. ಇನ್ನು ದೊಡ್ಡ ದೊಡ್ಡ ಮಾಲ್‍ ಗಳಿಗೆ ಹೋದರೆ ಎಲ್ಲವೂ ಹಿಂದಿಮಯ - ದಾಲ್, ಚಾವಲ್, ನಮಕ್, ನಮ್ಮ ಕನ್ನಡ ಪದಗಳಿಗೆ ಜಾಗವೇ ಇಲ್ಲ. ಹೀಗೆ ಕನ್ನಡ ಪದಗಳು ಕನ್ನಡಿಗರ ನಾಲಗೆಯಲ್ಲೇ ಹೊರಳಲಾರದ ಸ್ಥಿತಿಯಲ್ಲಿದೆ.

ಇನ್ನು ಸಾಹಿತ್ಯದ ವಿಷಯದಲ್ಲಿ ಎಂಟು ಜ್ಞಾನಪೀಠಗಳು ಕನ್ನಡಮ್ಮನ ಮುಡಿಗೇರಿದೆ. ಅದಕ್ಕೆ ಎಲ್ಲರೂ ಹೆಮ್ಮೆಪಡೋಣ. ಆದರೆ ಇಲ್ಲಿ ಭಾಷೆಯ ಬೆಳವಣಿಗೆಗೆ ಅವಕಾಶ ಕಡಿಮೆಯಾಗಿದೆ ಎನಿಸುತ್ತದೆ. ಹೊಸ ಪದಗಳ ಅನ್ವೇಷಣೆ ಇಲ್ಲಿ ಆಗುವುದೇ ಇಲ್ಲ. ವಿಜ್ಞಾನ, ಗಣಿತ, ತಂತ್ರಜ್ಞಾನ ವಿಷಯಗಳು ಕನ್ನಡಭಾಷೆಗೆ ದೂರ. ಇನ್ನು ಅವುಗಳ ಬಗ್ಗೆ ಪುಸ್ತಕಗಳು ಹೊರಬರುವುದು ಕನಸೇ ಸರಿ. ನಮ್ಮ ಆಡುಭಾಷೆ ಕೇವಲ ಮನೆಗಷ್ಟೇ, ಮಾತಿಗಷ್ಟೇ ಮೀಸಲಾಗಿದೆ ಎನ್ನದೆ ವಿಧಿಯಿಲ್ಲ.

ಕನ್ನಡಕ್ಕೆ ಕೇವಲ ಶಾಸ್ತ್ರೀಯ ಸ್ಥಾನಮಾನ ಒದಗಿಸಿಕೊಟ್ಟರಷ್ಟೇ ಸಾಲದು. ಭಾಷೆಯ ಅಭಿವೃದ್ಧಿಗೆ ಯೋಜನೆಗಳನ್ನು ಸಹ ರೂಪಿಸಬೇಕಿದೆ. ಚಿತ್ರರಂಗದಲ್ಲಿ ಕನ್ನಡ ನುಡಿಯ ಬಗ್ಗೆ ಯೋಚಿಸಿದರೆ ಬೇಸರವಾಗುತ್ತದೆ. ನಿಜ, ವರ್ಷಕ್ಕೆ ನೂರು-ಇನ್ನೂರು ಕನ್ನಡ ಭಾಷೆಯ ಚಿತ್ರಗಳು ಬಿಡುಗಡೆಯಾಗುತ್ತವೆ ಆದರೆ ಅವುಗಳ ಗುಣಮಟ್ಟದ ಬಗ್ಗೆ ಯೋಚಿಸಿದರೆ ಅವು ಬೇರೆ ಭಾಷೆಗಳಿಗೆ ಸಾಟಿಯಾಗಲಾರದೆನಿಸುತ್ತವೆ. ಕನ್ನಡಚಿತ್ರಗಳಲ್ಲಿ ಗುಣಮಟ್ಟ, ಹೊಸತನದ ಕೊರತೆಯಿದೆ. ಜಾಗತೀಕರಣದಿಂದ ಅನೇಕಾನೇಕ ಭಾಷೆಯ ಚಲನಚಿತ್ರಗಳು ವೀಕ್ಷಕರಿಗೆ ಲಭ್ಯವಿವೆ. ಕನ್ನಡಿಗರ ದೌರ್ಭಾಗ್ಯವೆಂದರೆ ನಮ್ಮ ಕನ್ನಡ ಚಿತ್ರರಂಗ ಡಬ್ಬಿಂಗ್‍ ಗೆ ತೆರೆದುಕೊಳ್ಳದೆ ಇರುವುದು, ಅನ್ಯಭಾಷೆಯ ಚಿತ್ರಗಳು ಕನ್ನಡದಲ್ಲಿ ಲಭ್ಯವಾಗದೆ ಮೂಲಭಾಷೆಯಲ್ಲೇ ನೋಡುವ, ಚಲನಚಿತ್ರದ ಉತ್ತಮ ಗುಣಮಟ್ಟವನ್ನು ಆಸ್ವಾದಿಸುವ ಭಾಗ್ಯ ನಮ್ಮ ಕನ್ನಡಿಗರಿಗಿಲ್ಲ. ನಮ್ಮ ಮಕ್ಕಳು ಪೋಗೊ, ಕಾರ್ಟುನ್ ನೆಟ್‍ ವರ್ಕ್, ಹಿಸ್ಟರಿ..... ಮುಂತಾದ ಉತ್ತಮ ಕಾರ್ಯಕ್ರಮಗಳನ್ನು ಕನ್ನಡ ಭಾಷೆಯ ಮೂಲಕ ಅರಿಯುವಂತೆ ಮಾಡಲು ನಾವು ಅಸಫಲರಾಗಿದ್ದೇವೆ. ನಮ್ಮ ಭಾವಿ ಕನ್ನಡಿಗರಿಗೆ ವಿಶ್ವವನ್ನು ಕನ್ನಡದ ಕಂಗಳಿಂದ ತೋರಿಸಲು ನಾವು ಅಸಮರ್ಥರಾಗಿದ್ದೇವೆ.

ಒಟ್ಟಾರೆ ಹೇಳಬೇಕೆಂದರೆ ನಮ್ಮ ಭಾಷೆ ನಮ್ಮ ಜೀವನದ ಅವಿಭಾಜ್ಯ ಅಂಗಗಳಲ್ಲಿ ಒಂದಾಗುವುದಕ್ಕೆ ಹೆಣಗಾಡುತ್ತಿರುವುದಂತೂ ನಿಜ. ನಮ್ಮ ಭಾಷೆಯಲ್ಲದೆ ಪರಕೀಯ ಭಾಷೆಯನ್ನೇ ಹೆಚ್ಚು ಬಳಸುವ ನಾವುಗಳು ನಮ್ಮ ಭಾಷೆಯ ಅವನತಿಗೆ ನೇರವಾಗಿ ಕಾರಣರಾಗುತ್ತಿದ್ದೇವೆ. ನಮ್ಮೊಳಗಿನ ಕನ್ನಡಪ್ರಜ್ಞೆ ಜಾಗೃತಗೊಳಿಸುವ ಕೆಲಸಗಳು ಅಗತ್ಯವಾಗಿ ಆಗಬೇಕಿದೆ. ಕುವೆಂಪುರವರು ಹೇಳಿದ "ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು" ಎನ್ನುವ ಕನ್ನಡತನ, ಕನ್ನಡಪ್ರಜ್ಞೆಯ ಜಾಗೃತಿಯು ಈ ಕ್ಷಣದ ಅವಶ್ಯಕತೆಯಾಗಿದೆ. ಅದನ್ನು ಹೇಗೆ ಸಾಧಿಸಬೇಕು ಎನ್ನುವುದರ ಬಗ್ಗೆ ನಾವು ಚಿಂತನೆ ನಡೆಸಬೇಕಿದೆ.

ಈ ಲೇಖನ "ಕಹಳೆ" ಗಾಗಿ ಬರೆದದ್ದು.

www.kahale.gen.in

ಮಂಗಳವಾರ, ನವೆಂಬರ್ 12, 2013

ಖಾಸಗಿಗೆ ಕತ್ತರಿ.

ಖಾಸಗಿಗೆ ಕತ್ತರಿ.

ಖಾಸಗಿ ಪಡಿತರ ಸಂಸ್ಥೆಗಳಿಗೆ ಕತ್ತರಿ
ಖಾಸಗಿಯವರಿಂದ ನಡೆಯುತ್ತಿತ್ತು ವಿತರಣೆ
ಈಗ ಸರ್ಕಾರಿ ಪಡಿತರ ಸಂಸ್ಥೆಗಳಷ್ಟೇ ಸರಿಸಾಟಿ
ಅವರು ವಿತರಿಸಿದರೆ ಸರಿ,ಇಲ್ಲದಿದ್ದರೂ ಸರಿ
ಏಕೆಂದರೆ ಸರ್ಕಾರಿ ಕೆಲಸ ದೇವರ ಕೆಲಸ
ಮಾಡಿದರೂ ಸೈ,ಮಾಡದ್ದಿದ್ದರೂ ಸೈ.

೨. ಮಕ್ಕಳಭಾಗ್ಯ ಯೋಜನೆ

ಸಿದ್ಧರಾಮಣ್ಣ ಹೇಗಾದರೂ ಆಗಲಿ
ಮುಸ್ಲೀಮರಿಗೆ ಕರುಣಿಸಿದ್ದಾರೆ ಶಾದಿ ಭಾಗ್ಯ
ಮುಂದೆ ಇನ್ನೂ ಏನೇನು ಭಾಗ್ಯಗಳು ಕಾದಿದೆಯೋ?
ಶಾದಿ ಆದ ಮೇಲೆ ಮಕ್ಕಳಾಗದವರಿಗೆ
ಸದ್ಯ ಸಚಿವರಿಂದ ಮಕ್ಕಳ ಭಾಗ್ಯಯೋಜನೆಗೆ
ಕೈಹಾಕದಿದ್ದರೆ ಸಾಕು;
ಏಕೆಂದರೆ ಈಗಾಗಲೇ ತಿವಾರಿಯಂತವರು
ಯೋಜನೆಯನ್ನು ಅನಧೀಕೃತವಾಗಿ ಜಾರಿಗೊಳಿಸಿದ್ದಾರೆ

೩. ಟಿಪ್ಪುಗೆ ರಂಗನಾಥನ ದರ್ಶನ

ದೇವೆಗೌಡರ ಹೇಳಿಕೆ
ಪಾಪ ಗೌಡರು ಕನಸು ಕಂಡಿರಬೇಕು
ಗೌಡರೆ ಎಚ್ಚರಿಕೆ ಸಿದ್ಧು
ಮೌಢ್ಯ ಅಂತ ಒಳಗಾಕ್ಸಿದರೆ ಕಷ್ಟ.

೪. ವಿಜಯ ಬ್ಯಾಂಕಿಗೆ  ರೂ ೧೩೬ ಕೋಟಿ ಲಾಭ

ಎಷ್ಟಾದರೂ ಜನರಿಂದ ವಸೂಲು ಮಾಡಿರೋದೆ ತಾನೆ
ಗ್ರಾಹಕರಿಗೆ ನಾಯಪೈಸೆ ಲಾಭವಿಲ್ಲ.
ಗ್ರಾಹಕರ ಜೇಬಿಗೆ ಯಾವಾಗಲೂ ಕತ್ತರಿ
ಬ್ಯಾಂಕಿಗೆ ಪ್ರತಿವರ್ಷವೂ ಲಾಭವೋ ಲಾಭ.

ದಿನಾಂಕ: ೧೨.೧೧.೨೦೧೩ ಕನ್ನಡಪ್ರಭದಿಂದ ಪ್ರೇರಿತ.

ಸೋಮವಾರ, ನವೆಂಬರ್ 11, 2013

ಸತ್ಯದ ಹೊಳಹು

ಒಂದು ಘಟನೆ ಎಷ್ಟೊಂದು ಸತ್ಯಗಳ ಹೊರಗೆಡವುತ್ತೆ ಅಂದರೆ ನಂಬೋದಕ್ಕೆ ಸಾಧ್ಯವಿಲ್ಲ ಆದರೂ ಅದು ಸತ್ಯ. ಎಷ್ಟೊಂದು ಜನರ ಮುಖವಾಡಗಳು ಕಳಚಿ ನಿಜಮುಖಗಳ ಸಾಕ್ಷಾತ್ಕಾರ ಅಥವಾ ದರ್ಶನವಾಗುವುದಂತೂ ನಿಜ.ಅವರವರ ಕಪಟ ಬಣ್ಣ ಕರಗಿ ನೈಜತೆಯ ಹೊರಹಾಕೋ ನಿಜ ಪ್ರಾಯೋಗಿಕ ಪರೀಕ್ಷೆಯೇ ಈ ಘಟನೆಗಳೆಂದರೆ ತಪ್ಪಿಲ್ಲ. ಜೀವನ ಪಾಠಶಾಲೆ ಎಂದು ಹಿರಿಯರು ಅಂದದ್ದು ಅದಕ್ಕೇ ಇರಬೇಕು.ಗೀತೆಯ ಸಾರದಂತೆ ಆದದ್ದಕ್ಕೆ ನಾನು ಕಾರಣನಲ್ಲ. ಆಗುವುದಕ್ಕೂ ನಾನು ಕಾರಣನಲ್ಲ ಬರಿ ನಿಮಿತ್ತಮಾತ್ರ ವೆಂಬುವುದೂ ಅಷ್ಟೇ ಸತ್ಯ.ನಮ್ಮ ಮನದ ಪರಿಪಕ್ವತೆಗೆ ಅಂತಹ ಘಟನೆಗಳು ಪೂರಕವೆಂದು ನಾವು ಅರಿತುಕೊಳ್ಳಬೇಕು. ನೊಂದುಕೊಂಡರೆ ಪ್ರಯೋಜನವಿಲ್ಲ. ಜೊತೆಯಲ್ಲಿರುವ ಅನೇಕ ಗೆಳೆಯರು ಘಟನೆಯ ಫಲವಾಗಿ ಕ್ಷಣಮಾತ್ರದಲ್ಲೇ ಶತೃಗಳಾಗುತ್ತಾರೆ ಹಾಗು ನಮ್ಮ ಮೇಲೆ ಕತ್ತಿ ಮಸೆಯಲು ಆರಂಭಿಸುತ್ತಾರೆ. ಹಾಗೆ ನಿಜಗೆಳೆಯರು ನಡುವೆಯಿದ್ದು ಗೋಡೆಯಂತೆ ಗೆಳೆತನವನ್ನು ಕಾಯುತ್ತಾರೆ. ಒಂದೇ ಘಟನೆ ಎರಡು ನೈಜತೆಯನ್ನು ಹೊರಹಾಕುತ್ತದೆ. ಎಷ್ಟೊಂದು ಸೋಜಿಗ. ಮನದ ಈ ರೀತಿಯ ಪರಿವರ್ತನೆ ನಂಬಲು ಕಷ್ಟಸಾಧ್ಯ.
ಇದೇ ಅಲ್ಲವೆ ವೇದಾಂತ ಅಥವಾ ಜೀವನ ಸತ್ಯ?.
ಕನ್ನಡಪ್ರಭ ದ "ಸುಪ್ರಭತಾ"ದ ಈ ನುಡಿ ಮನಮುಟ್ಟುವ ಹಾಗಿದೆ.

ಪ್ರತಿ ಸೋಲೂ ಒಂದು ಪಾಠ.
ಚೆನ್ನಾಗಿ ಕಲಿಯಬೇಕು.
ಪ್ರತಿ ಯಶಸ್ಸೂ ಒಂದು ಕನ್ನಡಿ.
ಜೋಪಾನವಾಗಿ ಕಾಪಾಡಬೇಕು.
ಪ್ರತಿ ಉತ್ತಮ ಗೆಳೆಯನೂ ವಜ್ರವಿದ್ದಂತೆ.
ಸರಿಯಾಗಿ ಕಾಪಾಡಿಕೊಳ್ಳಬೇಕು.

ಸೋಮವಾರ, ಮೇ 13, 2013

ಒಂದು ದಿನದ ಕಥೆ-ಸಮಯ ಎಲ್ಲರ ದೊರೆ

ಮೊನ್ನೆ ತುಂಬಾ ದಿನಗಳ ನಂತರ ನಾನು ಎರಡನೇ ಪಾಳೀಯ ಕೆಲಸಕ್ಕೆ ಹೋಗಬೇಕಾಗಿತ್ತು. ಆದೊಂದೇ ದಿನ ನನ್ನ ಬಹುತೇಕ ಕೆಲಸಗಳನ್ನು ಅಂದರೆ ಬ್ಯಾಂಕ್,ವಿಮೆ,..ಇತ್ಯಾದಿಗಳು ಮುಗಿಸುವ ಅವಕಾಶ ಇರೋದು. ಹಿಂದಿನ ದಿನ ರಾತ್ರಿನೇ ನನ್ನ ಎಲ್ಲಾ ಕೆಲಸಗಳನ್ನು ಪಟ್ಟಿಮಾಡಿಕೊಂಡಿದ್ದೆ. ಕೆಲಸ ಒಂದು,ಎರಡಲ್ಲ, ನಾಲ್ಕಾರು ಅದು ಒಂದೇ ಕಡೆ ಮುಗಿಯುವ ಕೆಲಸಗಳಂತೂ ಅಲ್ಲ. ನಾಲ್ಕಾರು ದಿಕ್ಕುಗಳನ್ನು ಕ್ರಮಿಸಬೇಕು. ಹೀಗಾಗಿ ಮನದಲ್ಲೇ ಯಾವ ಕೆಲಸ ಮೊದಲು, ಅನಂತರ ಎನ್ನುವ ಒಂದು priority  ಪಟ್ಟಿ ಮನದಲ್ಲೇ ಮಲಗುವ ಮುಂಚೆಯೇ ಸಿದ್ಧವಾಗಿತ್ತು. ಬೆಳಿಗ್ಗೆ ೬.೦೦ ಗಂಟೆಗೆಲ್ಲಾ ಎದ್ದು ನನ್ನ ಮುಂಜಾನೆಯ ಘನಕಾರ್ಯಗಳನ್ನೆಲ್ಲಾ ಮುಗಿಸಿ ಸಿದ್ಧನಾಗಿದ್ದೆ. ಮನೆಯಲ್ಲಿ ಶ್ರೀಮತಿ ಹಾಗು ಮಗರಾಯ ಇಲ್ಲದ ಕಾರಣ ತಿಂಡಿ-ತೀರ್ಥ ಎಲ್ಲಾ ಮಾವನ ಅಂಗಡಿ (ದರ್ಶಿನಿ)ಯಲ್ಲೇ ಮುಗಿಸಬೇಕಾದ ಅನಿವಾರ್ಯತೆ ಇತ್ತು. ಬೆಂಗಳೂರಿಗರಿಗೆ ಇದು ಹೊಸದೇನೂ ಅಲ್ಲ.ಅದು ಜೀವನದ ಅವಿಭಾಜ್ಯ ಅಂಗ. ತಿಂಡಿ ಅಂದ್ರೆ ನನಗೆ ಬೆಳಿಗ್ಗೆ ಇಡ್ಲಿ ತುಂಬಾ ಇಷ್ಟವಾಗುತ್ತೆ ಜೊತೆಗೆ ಕಾಫಿ ಇದ್ದರಂತೂ ಆಹಾ! ಮಧುರ ಮಧುರ. ಆ ಆಸ್ವಾದನೆ ನಿಜವಾದ ಸ್ವರ್ಗ.ನನ್ನ ಗಾಡಿ ಏರಿ ಮೊದಲು ಹೊರಟಿದ್ದು SBI ಜೀವ ವಿಮೆ ಕಛೇರಿ,ಸೌಥ್ ಎಂಡ್ ವೃತ್ತದ ಬಳಿ. ಶ್ರೀನಿವಾಸ ನಗರ,ಹನುಮಂತನಗರ,ಬಸವನ ಗುಡಿಯನ್ನು ದಾಟಿ ಗಾಂಧಿ ಬಜಾರನ್ನು ಬಳಸುತ್ತಾ ಸೌಥ್ ಎಂಡ್ ವೃತ್ತದ ಬಳಿ ಸುರಾನಾ ಕಾಲೇಜಿನ ಹತ್ತಿರ ಬರುವ ವೇಳೆಗಾಗಲೇ ಸಮಯ ೯.೪೫ ಆಗಿತ್ತು. ಗಾಡಿಯನ್ನು ವಾಹನ ನಿಲುಗಡೆ ಪ್ರದೇಶದಲ್ಲಿ ನಿಲ್ಲಿಸಿ SBI  ಕಛೇರಿಯ ಕಡೆಗೆ ಹೆಜ್ಜೆ ಹಾಕಿದೆ. ಹೆಜ್ಜೆ ಹಾಕುತ್ತಾ ಕಛೇರಿಯ ಕೆಲಸದ ವೇಳೆಯನ್ನು ಗಮನಿಸಿದೆ ಬೆಳಿಗ್ಗೆ ೧೦.೦೦ ಕ್ಕೆ ಆರಂಭ ಎಂದಿತ್ತು.ಮನದಲೇ ಸರಿಯಾದ ಸಮಯಕ್ಕೆ ಬಂದಿದ್ದೀನಿ ನನ್ನ ಕೆಲಸ ಬೇಗ ಮುಗಿಯುತ್ತೆ ಎನಿಸಿತು. ಮೆಟ್ಟಿಲುಗಳನ್ನೇರುತ್ತಾ ಎರಡನೆಯ ಮಹಡಿಯ SBI ಕಛೇರಿಗೆ ಕಾಲಿಟ್ಟೆ. ಕಛೇರಿಯಲ್ಲಿ ನೀರವ ಮೌನ ತಾಂಡವವಾಡುತಿತ್ತು. ಬಾಗಿಲು ತೆರೆದಿದ್ದರೂ ಯಾವ ಸಿಬ್ಬಂದಿಯೂ ಬಂದಿಲ್ಲವೆನಿಸಿತು. ಕಛೇರಿಯ ಹಿರಿಯ ಪ್ರಬಂಧಕರು ಆಗಲೇ ಆಗಮಿಸಿ ಕೆಲಸ ಶುರುವಿಟ್ಟುಕೊಂಡಿದ್ದರು. ಬಿಳಿ ಬೋರ್ಡ್ ಮೇಲೆ ತಮ್ಮ ಯೋಜನೆಗಳನ್ನು ಬರೆದು ಅಳಿಸಿ,ಮತ್ತೆ ಬರೆದು ಅಳಿಸಿತ್ತಾ ಅಭ್ಯಾಸದಲ್ಲಿ ತೊಡಗಿದ್ದರು. ನನಗೆ ಕಛೇರಿಗೆ ರಜೆಯಿರಬೇಕು ಅದಕ್ಕೆ ಇನ್ನೂ ಸಿಬ್ಬಂದಿ ಬಂದಿಲ್ಲವೆನಿಸಿತು. SBI ನದೇ ಕ್ಯಾಲೆಂಡರನಲ್ಲಿ ಪರೀಕ್ಷಿಸಿ ನನ್ನ ಅನುಮಾನ "ಇಂದು ರಜೆ ಇಲ್ಲ" ಎಂದು ಖಾತರಿ ಪಡಿಸಿಕೊಂಡೆ. ಸಮಯ ಮಾತ್ರ ಜಾರುತ್ತಿತ್ತು. ೧೦.೦೫, ೧೦.೧೦ ನಾನು ನನ್ನ ಕೈಗಡಿಯಾರದಲ್ಲಿ ಅದೆಷ್ಟು ಬಾರಿ ಸಮಯ ನೋಡಿಕೊಂಡೆನೋ ತಿಳಿದಿಲ್ಲ. ಕಛೇರಿಯ ಯಾವ ಸಿಬ್ಬಂದಿಯೂ ಬರುವ ಮುನ್ಸೂಚನೆ ಮಾತ್ರ ಸಿಗಲಿಲ್ಲ. ಆದಾಗ್ಯೂ ಹಣ ತುಂಬುವ ಅರ್ಜಿ,cheque ಎಲ್ಲವನ್ನೂ ತುಂಬಿಸಿ ಸಿದ್ಧನಾಗಿದ್ದೆ. ಮನದಲ್ಲೇ ಸಮಯದ ಅರಿವಿಲ್ಲದ ಸಿಬ್ಬಂದಿ ಎಂದು ಜರಿದುಕೊಳ್ಳುತ್ತಾ ಕುಳಿತುಕೊಂಡೆ. ನನ್ನ ಮುಂದಿನ ಕಪಾಟಿನ ಮೇಲೆ ದೊಡ್ಡ ಅಕ್ಷರಗಳಲ್ಲಿ ಮಹಾತ್ಮ ಗಾಂಧಿ ಹೇಳಿದ ನುಡಿಮುತ್ತು .....
"A Customer is the most important
Visitor on our premise.
He is not dependent on us,
We are dependent on him.
He is not an interruption of our work,
He is the purpose of it.
He is not an outsider to our business,
He is a part of it.
We are not doing him a favor by serving him,
He is doing us a favor by giving us,
An opportunity to do so."
ಸಾಲುಗಳು ನನ್ನ ಗಮನ ಸೆಳೆದರೂ ಅದು ನನ್ನನ್ನು ಅಣಕಿಸುತ್ತಿರುವಂತೆ ಭಾಸವಾಯಿತು. ಹಾಗೆ ನನ್ನ ಮನದಲ್ಲಿ ಭಾರತೀಯರು ಏಕೆ ಸಮಯದ ಪರಿಪಾಲನೆ ಮಾಡುವುದಿಲ್ಲ? ಎನ್ನುವ ಯಕ್ಷಪ್ರಶ್ನೆ ಮೂಡಿತು. ಉತ್ತರ ಸಿಗದ ಪ್ರಶ್ನೆ ಅದು ಎಂದು ನನಗೆ ತಿಳಿದಿದೆ. ಇದೇ ಪ್ರಶ್ನೆಯನ್ನು ದ್ವಾಪರ ಯುಗದಲ್ಲಿ ಯಕ್ಷನೇನಾದರೂ ಧರ್ಮರಾಯನಿಗೆ  ಕೇಳಿದಿದ್ದರೆ ಧರ್ಮರಾಯ ತನ್ನ ತಮ್ಮಂದಿರನ್ನು ನಿಜವಾಗಿಲೂ ಉಳಿಸಿಕೊಳ್ಳಲಾಗುತ್ತಿರಲಿಲ್ಲವೆನಿಸಿತು. ಕಾಯುವುದು ತುಂಬಾ ಕಷ್ಟದ ಕೆಲಸ. ನಾನು ಸಮಯಕ್ಕೆ ಸರಿಯಾಗಿ ಬಂದರೂ ನನ್ನ ಕೆಲಸ ಸಮಯಕ್ಕೆ ಸರಿಯಾಗಿ ಆಗಲಿಲ್ಲ. ಕೊನೆಗೂ ಒಬ್ಬ ಸಿಬ್ಬಂದಿ ನನ್ನ ಕಂಡ ತಕ್ಷಣ ಸಾರ್! ಏನು ಕೆಲಸವಿದೆ? ಎಂದು ನನ್ನ ಕಡೆ ಗಮನಹರಿಸಿದ. ನಾನು "ಹಣ ಕಟ್ಟಬೇಕು" ಎಂದೆ. ಅದಕ್ಕೆ " ಕೊಡಿ ಸಾರ್ ಇನ್ನೂ ಸಿಬ್ಬಂದಿ ಬಂದಿಲ್ಲ ನಾನು ನಿಮಗೆ ರಸೀದಿಯನ್ನು ಮಿಂಚೆಯಲ್ಲಿ ಕಳುಹಿಸಿಕೊಡುತ್ತೇನೆಂದ". ಅವರಿಗೆ ಅಭಿನಂದನೆ ಸಲ್ಲಿಸುತ್ತಾ ಅಲ್ಲಿಂದ ಹೊರಟೆ.
ಅಂತೂ ಇಂತೂ ಆದಿನ ಸುಗಮವಾಗಿ ಅಲ್ಲದಿದ್ದರೂ ಎಲ್ಲಾ ಕೆಲಸಗಳನ್ನೂ ಮಾಡಿ ಮುಗಿಸಿದ್ದೆ. ಆದರೂ ನಮ್ಮ ಜನ,ನಮ್ಮ ವ್ಯವಸ್ಥೆ ತುಂಬಾ, ತುಂಬಾ ಬದಲಾಗಬೇಕೆನಿಸಿತು. ಸಮಯ ಪರಿಪಾಲನೆ ಅದರಲ್ಲೋಂದಷ್ಟೆ. ಇಂತಹ ಸಣ್ಣ ಸಣ್ಣ ವಿಷಯಗಳು ನೂರಾರಿದೆ.ಸಣ್ಣ ವಿಷಯ (ಮಾತು,ಶುಚಿತ್ಚ,ಗೆಳೆತನ,ಬದ್ಧತೆ,ಪರಿಸರ,ನೀತಿ,ಸಮಾಜ,ಸಂಸ್ಕೃತಿ,ಭಾಷೆ.....ಇತ್ಯಾದಿಗಳು)  ಅಂತ ಗಮನಹರಿಸದೇ ಇರೋದೆ ನಮ್ಮ ಅನೇಕ ಸೋಲುಗಳಿಗೆ ಕಾರಣ. ಸಣ್ಣ ಸಣ್ಣ ವಿಚಾರಗಳೇ ನಮ್ಮೊಳಗಿನ ಶಿಸ್ತನ್ನು ನಿರ್ಧರಿಸುತ್ತದೆ. ಆ ಸಣ್ಣ ಶಿಸ್ತೇ ನಮ್ಮ ಜೀವನದಲ್ಲಿ ಬದಲಾವಣೆ ತರುವುದು ಅದರಲ್ಲಿ ಸಂದೇಹವಿಲ್ಲ. ನೀವೇನು ಹೇಳುವಿರಿ ನನ್ನ ಮಾತು ನಿಜವಲ್ಲವೇ?


ಭಾನುವಾರ, ಮೇ 12, 2013

ಮನಸ್ಸು ಭಾರವಾಯಿತು. ಕನ್ನಡನಾಡಿಗೆ ಇನ್ನೂ ಸಮಯ ಬಂದಿಲ್ಲವೆನಿಸಿತು......

 ಈ ಪತ್ರ ಸುಮಾರು ಹತ್ತು ವರ್ಷಗಳ ಹಿಂದೆ ಬರೆದದ್ದು. ಸಂದರ್ಭ ಹೇಗಿತ್ತೆಂದರೆ ಶ್ರೀಯುತ ಅಂಬರೀಷ್ ರವರು ಚಲನಚಿತ್ರರಂಗದಿಂದ ಹೆಸರುಗಳಿಸಿದ ನಂತರ ರಾಜಕೀಯ ಆಶ್ರಯ ಬಯಸಿ ಸೂಕ್ತ ರಾಜಕೀಯ ಪಕ್ಷಕ್ಕಾಗಿ ಹುಡುಕಾಟ ನಡೆಸಿದ್ದರು.ಜನತಾದಳದ ಶ್ರೀ ದೇವೇಗೌಡರ ಜೊತೆಗಿನ ಒಡನಾಟವೂ ಹೆಚ್ಚಿತ್ತು.ಎಲ್ಲರೂ ಅವರು ಜನತಾದಳ ಸೇರುತ್ತಾರೆಂದು ತಿಳಿದ್ದಿದ್ದರು ಆದರೆ ಆದದ್ದೇ ಬೇರೆ. ಆ ಸಂದರ್ಭದಲ್ಲಿ ಉದಯ ಟಿವಿಯಲ್ಲಿ ಒಂದು ಕಾರ್ಯಕ್ರಮಕ್ಕಾಗಿ ಈ ಪತ್ರ ಬರೆದೆ. ಆ ಕಾರ್ಯಕ್ರಮ ನಡೆಸಿಕೊಟ್ಟಿದ್ದು "ನಮ್ಮೂರ ಮಂದಾರ ಹೂವೇ" ಖ್ಯಾತಿಯ ವಿನಾಯಕ ಜೋಷಿ. ಈ ಪತ್ರದ ಸಾರಾಂಶವನ್ನು ಅಂಬರೀಷರ ಮುಂದೆ ವಿನಾಯಕ ಜೋಷಿ ಓದಿದ್ದರು. ಆ ಪತ್ರದ ಒಕ್ಕಣೆ ಹೀಗಿದೆ.

ಆತ್ಮೀಯ ನಾಯಕ ನಟ ಶ್ರೀ ಅಂಬರೀಷ್ ರವರಿಗೆ ಪ್ರೀತಿಯ ಅಭಿಮಾನಿಯ ಅನಂತ ನಮನಗಳು ಹಾಗು ಶುಭಾಷಯಗಳು.ತಮ್ಮ ಚಿತ್ರಗಳ ಅನೇಕ ಪಾತ್ರಗಳು ನನ್ನಂತಹ ಅನೇಕ ಕನ್ನಡ ಅಭಿಮಾನಿಗಳಿಗೆ ಆದರ್ಶಪ್ರಾಯವಾಗಿವೆ. ಮೂವತ್ತು ವರ್ಷಕ್ಕೂ ಹೆಚ್ಚು ಸುದೀರ್ಘ ಕನ್ನಡ ಕಲಾದೇವಿಯ ಸೇವೆಯಲ್ಲಿ ನಿರತರಾಗಿದ್ದೀರಿ. ಮುಂದೆಯೂ ಕನ್ನಡ ತಾಯಿಯ ಸೇವೆ ನಿರಂತರವಾಗಿ ನಡೆಯಲಿ. ತೆರೆಯ ಮೇಲೆ ನಿಮ್ಮನ್ನು ನೋಡುವುದಕ್ಕಿಂತ, ನವ ಪ್ರತಿಭೆಗಳನ್ನು ಶೋಧಿಸುವ, ಬೆಳೆಸುವ ನಿಟ್ಟಿನಲ್ಲಿ ನಿಮ್ಮ ಚಟುವಟಿಕೆಗಳು ಹೆಚ್ಚಾಗಲಿ ಎಂದು ಬಯಸುತ್ತೇನೆ.

ರಾಜಕೀಯದಲ್ಲೂ ತಮ್ಮ ಹೆಸರು ಚಿರಪರಿಚಿತ.ಚಲನಚಿತ್ರದ ಮೂಲಕ ಗಳಿಸಿದ ಹೆಸರಿನಿಂದ ರಾಜಕೀಯದಲ್ಲೂ ಮೇಲೆ ಬರುವ ತಮ್ಮ ಉದ್ದೇಶ ಈಡೇರಿದೆ. ಕೇವಲ ತೆರೆಯಮೇಲೆ ನಾಯಕರಾಗಿದ್ದ ತಾವು ನಿಜ ಜೀವನದಲ್ಲೂ ನಾಯಕರಾಗುವ ಎಲ್ಲಾ ಲಕ್ಷಣಗಳು ತಮ್ಮಲ್ಲಿ ಅಗಾಧವಾಗಿದೆ. ಇಂದಿನ ಭ್ರಷ್ಟರಾಜಕಾರಣದಲ್ಲಿ ತಮ್ಮಂತಹ ಕಲಿಯುಗ ಕರ್ಣರ ಅವಶ್ಯಕತೆ ರಾಜ್ಯದ ಜನತೆಗೆ ಹೆಚ್ಚಾಗಿದೆ. ರಾಜ್ಯದ ಅಭಿವೃದ್ಧಿಯ ಕೆಲಸಗಳು ಲಂಚ,ಲಂಪಟತನಗಳಿಂದ ಕುಂಠಿತವಾಗಿವೆ. ರಾಜ್ಯದ ಸಮಗ್ರ ಅಭಿವೃದ್ಧಿಯ ಕನಸುಗಳು ಕನಸಾಗಿಯೇ ಉಳಿಯುತ್ತಿದೆ. ಕಾವೇರಿ ನದಿ ಕರ್ನಾಟಕದ ಕಣ್ಣೀರ ಕಥೆಯಾಗದೆ ರಾಜ್ಯದ ಜೀವನಾಡಿಯಾಗಬೇಕಾಗಿದೆ. ಒಂದು ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿರದೆ, ನಾಡು,ನುಡಿ,ಜಲ,ಸಂಸ್ಕೃತಿ,ಅಭಿವೃದ್ಧಿ,ಮಾನವೀಯ ಮೌಲ್ಯಗಳ ಹರಿಕಾರರಾಗಬೇಕು- ಇದೇ ನನ್ನ ನಿಮ್ಮಲ್ಲಿಟ್ಟಿರುವ ಕನಸು. ಯುವ ಜನತೆ ನಿಮ್ಮ ಹಿಂದೆ ಅಪಾರವಾಗಿದ್ದಾರೆ. ಅಭಿವೃದ್ಧಿ,ಶಾಂತಿ,ನೆಮ್ಮದಿ,ಮಾನವೀಯ ಮೌಲ್ಯಗಳು ನಿಮ್ಮ ಉಸಿರಾಗಬೇಕು,ಆ ಉಸಿರು ಈ ನಾಡಿನ ಜೀವವಾಗಬೇಕು. ಇದುವೇ ನಾವು ನಿಮ್ಮಲ್ಲಿಟ್ಟಿರುವ ಭರವಸೆ,ನಾಡ ಜನತೆಯ ಕನಸು.

ನಾನು ಬಯಸಿದ್ದೇ ಅವರು ಯಾವುದೇ ಪಕ್ಷ ಸೇರದೆ ತಮ್ಮದೇ ಆದ ಪಕ್ಷವೊಂದನ್ನು ಸ್ಥಾಪಿಸಬೇಕು ಎಂದು. ಆದರೆ ಆದದ್ದೇ ಬೇರೆ. ಈಗ ಎಲ್ಲವೂ ಇತಿಹಾಸದ ಪುಟಗಳಲ್ಲಿ ಸೇರಿಹೋಗಿದೆ. ಅವರು ರಾಷ್ಟ್ರೀಯ ಪಕ್ಷವನ್ನು ಸೇರಿದರು. ಇದೀಗ ಹತ್ತು ವರ್ಷಕ್ಕೂ ಹೆಚ್ಚು ಕಾಲ ಕಳೆದುಹೋಗಿದೆ. ಅವರ ರಾಜಕೀಯ ಭವಿಷ್ಯ ಹೇಗಿತ್ತು? ನಮ್ಮ ನಾಡು,ನುಡಿ,ಜಲ, ಸಂಸ್ಕೃತಿಯ ಬಗ್ಗೆ ಅವರಿಗಿದ್ದ ಬದ್ಧತೆ ಎಲ್ಲವೂ ನಾಡನ ಜನತೆಗೆ ತಿಳಿದಿದೆ.

ಇಷ್ಟೆಲ್ಲಾ ಏಕೆ ನೆನಪಾಯಿತೆಂದರೆ ಇತ್ತೀಚೆಗಷ್ಟೇ ಮುಗಿದ ರಾಜ್ಯದ ಚುನಾವಣೆಗೆ ಮುನ್ನ  ಆದ ಅದರಲ್ಲೂ ಕಲಿಯುಗ ಕರ್ಣ ಅಂಬರೀಷ್ ರವರಿಗೆ ಸಂಬಂಧಿಸಿದ ಹಾಗೆ ನಡೆದ ಘಟನೆಗಳು ನನ್ನನ್ನು ಹತ್ತು ವರ್ಷಗಳ ಹಿಂದಕ್ಕೆ ಕರೆದೊಯ್ಯಿತು. ಅವರಿಗೆ ಬರೆದ ಪತ್ರವ ಜೋಪಾನವಾಗಿ ಎತ್ತಿಟ್ಟಿದ್ದೆ ಅದರ ನೆನಪಾಯಿತು. ಅವರು ಸ್ವಲ್ಪ ವ್ಯಕ್ತಿಗತ ಶಿಸ್ತು ಹಾಗು ರಾಜ್ಯದ ಜನತೆಯ ಆಶೋತ್ತರಗಳಿಗೆ ಸರಿಯಾಗಿ ಸ್ಪಂದಿಸಿದ್ದರೆ ಈ ಸಂದರ್ಭ ಸೃಷ್ಟಿಯಾಗುತ್ತಲೇ ಇರಲಿಲ್ಲವೆನಿಸಿತು. ಮನಸ್ಸು ಭಾರವಾಯಿತು. ಕನ್ನಡನಾಡಿಗೆ ಇನ್ನೂ ಸಮಯ ಬಂದಿಲ್ಲವೆನಿಸಿತು......