ಭಾನುವಾರ, ಸೆಪ್ಟೆಂಬರ್ 26, 2010

ಅಮರವಾದ ಕ್ರಾಂತಿಯ ಕಿಚ್ಚು-ಭಗತ್ ಸಿಂಗ್


ಇಂದು ೨೭ನೇ ಸೆಪ್ಟೆಂಬರ್ ೨೦೧೦. ಇವತ್ತು ನಿಜಕ್ಕೂ ತುಂಬಾ ಒಳ್ಳೆಯ ದಿನ, ಅದರಲ್ಲೂ ಭಾರತದ ಇತಿಹಾಸದಲ್ಲಿ ಮರೆಯಲಾರದ ಧೃವತಾರೆಯ ಜನ್ಮದಿನವೆಂದರೆ ತಪ್ಪಾಗಲಾರದು. ಇವತ್ತು ನಾವು ಮಾಹಿತಿ ತಂತ್ರಜ್ನಾನದ ಯುಗದಲ್ಲಿದ್ದೇವೆ, ನಮ್ಮ ದೇಶ ಅನೇಕ ಶತೃಗಳ ಕೈಯಲ್ಲಿ ಶತಶತಮಾನಗಳು ನಲುಗಿತ್ತು ಎಂಬುದು ಭಾರತೀಯ ಇತಿಹಾಸ ಓದಿದವರಿಗೆಲ್ಲಾ ತಿಳಿದಿದೆ.ಮುಸಲರು,ಗ್ರೀಕರು,ಡಚ್ಛರು,ಪೋರ್ಚಿಗೀಸರು ಹಾಗು ಆಂಗ್ಲರು ನಮ್ಮನ್ನು ಗುಲಾಮಗಿರಿಗೆ ತಳ್ಳಿ, ನಮ್ಮ ಜನರನ್ನು ಹಾಗು ಸಂಪನ್ಮೂಲಗಳನ್ನು ತಮ್ಮ ವೈಭೋಗಕ್ಕೆ ಬಳಸಿಕೊಂಡರು ಎಂದರೆ ತಪ್ಪಲ್ಲ. ಹಾಗೇ ನಮ್ಮ ಜನ,ಭಾಷೆ,ಸಂಸ್ಕೃತಿಯ ವೈವಿಧ್ಯತೆಯಲ್ಲಿರುವ ಭಿನ್ನತೆಯನ್ನು ನಮ್ಮ-ನಮ್ಮಲ್ಲೇ ವಿಷಬೀಜವನ್ನು ಬಿತ್ತಿ ಹೋದರು ಅವರೆಲ್ಲಾ. ಜನ-ಜನರನ್ನು ಒಡೆಯುವುದೇ ಅಲ್ಲದೆ, ಅಖಂಡ ಭಾರತ ಹೋಳಾಗುವುದಕ್ಕೋ ಅವರೇ ಕಾರಣವಲ್ಲವೇ? ( ಅವರ ಜೊತೆ ಅಧಿಕಾರ ಬಯಸುವ ನಮ್ಮವರು ಇದ್ದರೆನ್ನುವುದು ವಿಷಾದದ ಸಂಗತಿ) ಸ್ವಾತಂತ್ರ ಹೋರಾಟ ೧೮೫೭ ರಲ್ಲೇ ಮಂಗಲಪಾಂಡೆಯಿಂದ ಆರಂಭಗೊಂಡಿತ್ತಾದರೂ ನಮ್ಮಲ್ಲಿಯ ಒಡಕುಗಳ ಕಾರಣದಿಂದ ಸ್ವಾತಂತ್ರ ಬರುವುದು ೯೦ ವರ್ಷಗಳು ಮುಂದೆಹೋದದ್ದು ವಿಪರ್ಯಾಸ. ನಮ್ಮಲ್ಲಿ ಜಾಗೃತಿ ಮೂಡಿಸುವ ಕಾಯಕದ ಜೊತೆಗೆ ಭಾರತೀಯರಲ್ಲಿ ಸ್ವಾತಂತ್ರದ ಕಿಚ್ಚುಹೊತ್ತಿಸಿದ ಮಹನೀಯರು ಒಬ್ಬರೇ? ಇಬ್ಬರೇ?.. ಸಾವಿರಾರು,ಲಕ್ಷಾಂತರ ದೇಶಭಕ್ತರು. ಅಂತಹ ಅಸಂಖ್ಯಾತ ಪ್ರಾಥಃ ಸ್ಮರಣೀಯರನ್ನು ನೆನೆಸಿ ಗೌರವಿಸುವುದು ನಮ್ಮ ಆಧ್ಯ ಕರ್ತವ್ಯವಾಗಿದೆ. ಅಂತಹ ಮಹನೀಯರಲ್ಲಿ ಭಗತ್ ಸಿಂಗ್ ಗೆ ತನ್ನದೇ ಆದ ಸ್ಥಾನವಿದೆ. ಇಂದು ಮಹಾತ್ಮ,ಹುತಾತ್ಮ ಭಗತ್ ಸಿಂಗ್ ನ ಜನ್ಮದಿನ.
ಭಗತ್ ಸಿಂಗ್ ಹುಟ್ಟಿದ್ದು ೧೯೦೭ ಸೆಪ್ಟೆಂಬರ್ ೨೭ ರಂದು ಬಾಂಗ ಎನ್ನುವ ಊರಿನಲ್ಲಿ ಅದು ಈಗಿನ ಪಾಕೀಸ್ಥಾನದಲ್ಲಿ.ತಂದೆ ಕಿಶನ್ ಸಿಂಗ್ ಹಾಗು ತಾಯಿ ವಿದ್ಯಾವತಿ. ಕುಟುಂಬದಿಂದ ಬಳುವಳಿಯೆಂದರೆ ಸ್ವಾತಂತ್ರದ ಕಿಚ್ಚು.ಭಗತ್ ಸಿಂಗ್ ಹುಟ್ಟಿದಾಗ ಅವನ ತಂದೆ ಕಿಶನ್ ಸಿಂಗ್ ಜೈಲಿನಲ್ಲಿದ್ದರು. ಅವನ ಬಂಧುವಾದ ಸರ್ದಾರ್ ಅಜಿತ್ ಸಿಂಗ್ ಒಬ್ಬ ಮಹಾನ್ ಸ್ವಾತಂತ್ರ ಹೋರಾಟಗಾರರಾಗಿದ್ದರು.ಇಂತಹ ಕುಟುಂಬದ ವಾತಾವರಣ ಭಗತ್ ಸಿಂಗ್ ಗೆ ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗಲು ಪ್ರೇರಣೆ ನೀಡಿತೆನ್ನೆಬಹುದು. ತನ್ನ ಶಾಲೆಯ ದಿನಗಳಲ್ಲಿ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಬೆಂಬಲ ವ್ಯಕ್ತಪಡಿಸುತ್ತ ಆಂಗ್ಲ ಸರ್ಕಾರ ನೀಡಿದ್ದ ಪುಸ್ತಕಗಳನ್ನು ಬಹಿರಂಗವಾಗಿ ಸುಟ್ಟು ಪ್ರತಿಭಟಿಸಿದ್ದ.’ಚೌರಿ-ಚೌರಾ’ದ ಅಹಿತಕರ ಘಟನೆಗಳಿಂದ ಮನನೊಂದ ಗಾಂಧೀಜಿ ತಮ್ಮ ಅಸಹಕಾರ ಚಳುವಳಿಯನ್ನು ಕೈಬಿಟ್ಟರು. ಅದರಿಂದ ಭಗತ್ ಸಿಂಗ್ ಬಹುವಾಗಿ ನೊಂದು ಗಾಂಧೀಜಿ ತತ್ವಗಳಿಂದ ಭಾರತಕ್ಕೆ ಸ್ವಾತಂತ್ರ ಸಿಗುವುದಿಲ್ಲವೆಂದರಿತು ಕ್ರಾಂತಿಮಾರ್ಗವೇ ಸೂಕ್ತವೆಂದು ಕ್ರಾಂತಿಕಾರಿಯಾದ.ಅನೇಕ ಯುವ ಕ್ರಾಂತಿ ಸಂಘಟನೆಗಳೊಡನೆ ಭಗತ್ ಸಿಂಗ್ ಗುರುತಿಸಿಕೊಂಡ ಹಾಗು ಅಲ್ಲಿ ಸ್ವಾತಂತ್ರ ಹೋರಾಟ ಮುಂದುವರೆಸಿದ. ಆಂಗ್ಲರ ಲಾಠಿ ಏಟಿನಿಂದ ತೀವ್ರಗಾಯಗೊಂಡ ಲಾಲಾ ಲಜಪತರಾಯರು ಅಸುನೀಗಿದಬಳಿಕ ಅವರ ಸಾವಿಗೆ ಕಾರಣರಾದ ಆಂಗ್ಲ ಅಧಿಕಾರಿಯ ಕೊಲೆಗೆ ಭಗತ್ ಸಿಂಗ್ ಸಂಚು ರೂಪಿಸಿದ. ಆನಂತರ ಕ್ರಾಂತಿಕಾರಿಗಳು ದೇಶದ ಸ್ವಾತಂತ್ರ ಹೋರಾಟಗಾರರು ಎಂಬುದು ದೇಶದ ಜನತೆಗೆ ಹಾಗು ಕಾಂಗ್ರೆಸ್ಸಿಗೆ ಹೇಳಬೇಕಾಗಿತ್ತು. ಅದಕ್ಕಾಗಿ ಅಸೆಂಬ್ಲಿಯಲ್ಲಿ ಬಾಂಬ್ ಹಾಕಿದ. ಭಗತ್ ಸಿಂಗ್ ಹಾಗು ಅವನ ಗೆಳೆಯ ಭತುಕೇಶ್ವರ ದತ್ತ್ ನನ್ನು ಆಂಗ್ಲರು ಬಂಧಿಸಿದರು. ಕೊಲೆ, ಸಂಚು ಆರೋಪದಡಿಯಲ್ಲಿ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಗೆ ಗಲ್ಲು ಶಿಕ್ಷೆ ವಿಧಿಸಿದರು.
’ಇಂಕಿಲಾಬ್ ಜಿಂದಾಬಾದ್’ ಅವರ ಅಂತಿಮ ಮಾತಾಯಿತು. ತಾಯ್ನಾಡಿನ ಬಿಡುಗಡೆಗೆ ತಮ್ಮ ಪ್ರಾಣವನ್ನು ತ್ಯಾಗಮಾಡಿದರು.
ಅವನ ಬಲಿದಾನ ಪ್ರತಿಯೊಬ್ಬ ಭಾರತೀಯನೂ ಸ್ಮರಿಸುವಂತಹುದು. ಇಂದು ನಮ್ಮ ನಡುವೆ ಇಲ್ಲವಾದರೂ ಅವನ ಸಾಹಸ,ಬಲಿದಾನಗಳು ಪ್ರತಿಯೊಬ್ಬ ಭಾರತೀಯನ ಹೃದಯಗಳಲ್ಲಿ ಅಜರಾಮರವಾಗಿವೆ.
" ಓ ಮಹಾನ್ ಚೇತನವೇ ನಿನಗಿದೋ ನಮ್ಮ ನಮನಗಳು,
ಹೃದಯ ನಿನ್ನ ಬಲಿದಾನಕ್ಕಾಗಿ ಕಂಬನಿ ಮಿಡಿಯುತ್ತಿದೆ,
ಮನದಲ್ಲಿ ವ್ಯಥೆಯಿದೆ ಮತ್ತೊಮ್ಮೆ ನೀ ಭಾರತದಲ್ಲಿ ಹುಟ್ಟಲಿಲ್ಲವೆಂದು,
ಬಾ ಧೃವತಾರೆಯೇ ಬಾ ನಮ್ಮ ಚೇತನವಾಗು ಬಾ"

ಶನಿವಾರ, ಸೆಪ್ಟೆಂಬರ್ 25, 2010

ನಿರ್ವಹಣೆ ಕಾರ್ಯದ ಬಗ್ಗೆ ತಾತ್ಸಾರ ಏಕೆ?



ಆಧುನಿಕ ಕೈಗಾರಿಕಾ ಆರ್ಥಿಕತೆಯ ಸುಭದ್ರತೆಗೆ ತಾಂತ್ರಿಕವೃತ್ತಿ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಈ ಕೆಳಗಿನ ಮುಖ್ಯ ಅಂಶಗಳು ಆಧುನಿಕ ಕೈಗಾರಿಕಾ ಆರ್ಥಿಕತೆಗೆ ಅಭಯಂತರನ ತಾಂತ್ರಿಕ ಕೌಶಲತೆಯ ಕೊಡುಗೆಗಳಾಗಿವೆ.
-ಸಾರ್ವಜನಿಕ ಸೇವಾ ವ್ಯವಸ್ಥೆಯ ರಚನೆ, ಮೂಲಭೂತ ಸೌಕರ್ಯಗಳ ರಚನೆ, ಪ್ರತಿಷ್ಟಾಪನೆ, ನಿರ್ಮಾಣ, ಕಾರ್ಯನಿರ್ವಹಣೆ, ಹಾಗು ಸೌಕರ್ಯಗಳ ಸೃಷ್ಟಿ.
-ನಿರಂತರವಾಗಿ ಕೆಲಸ ಮುಂದುವರೆಯುವಿಕೆ, ನಿರ್ವಹಣೆ ಹಾಗೂ ದುರಸ್ತಿ.
-ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವುದು, ರಚನೆ, ತಾಂತ್ರಿಕತೆ.
-ಆಸ್ತಿಯ ಕ್ರೋಡೀಕರಣ, ಉತ್ಪಾದನೆ, ಉಪಾಯಗಳು.
-ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡುವುದು, ಗುಣಮಟ್ಟ ಕಾದಿರಿಸುವೆಕೆ, ಗುಣಮಟ್ಟ ವರ್ದಿಸುವಿಕೆ.
-ಹೊಸ ವಸ್ತುಗಳು, ತಾಂತ್ರಿಕತೆ, ಪ್ರಯೋಗ, ಸಂಶೋದನೆ ಹಾಗು ಅಭಿವೃದ್ದಿ.
-ವ್ಯಾಪಾರೀಕರಣ ಹಾಗು ಕೈಗಾರಿಕಾ ವಸ್ತುಗಳ ಮಾರಾಟ ಪ್ರಕ್ರಿಯೆ.
ಮೇಲಿನ ಅಂಶಗಳನ್ನು ಗಮನಿಸಿದರೆ ತಾಂತ್ರಿಕ ವೃತ್ತಿಯ ಬಾಹುಳ್ಯದ ಅಗಾಧತೆ ದೇಶದ ಆರ್ಥಿಕತೆಯ ಮೇಲಿನ ಸ್ವಾಮ್ಯಯದ ಅರಿವಾಗುತ್ತದೆ. ತಾಂತ್ರಿಕತೆಯ ವೈಶಿಷ್ಟ್ಯತೆ ಬಳಕೆಯಲ್ಲಿರುವ ಸಂಪನ್ಮೂಲಗಳನ್ನು ಬಳಸಿ ಹೊಸ ಸಂಪನ್ಮೂಲಗಳನ್ನು ರಚಿಸುವುದು ಹಾಗೂ ಜನ ಜೀವನ ಶ್ರೀಮಂತ ಹಾಗೂ ಅರ್ಥಪೂರ್ಣವಾಗಿಸುವುದೇ ಆಗಿದೆ.
ಕೈಗಾರಿಕಾ ತಾಂತ್ರಿಕತೆಯ ಬಾಹುಳ್ಯದಲ್ಲಿ ನಿರ್ವಹಣಾ ಕಾರ್ಯ ಅವಿಭಾಜ್ಯ ಅಂಗವಾಗಿದೆ.ಅತ್ಯಾಧುನಿಕ ತಾಂತ್ರಿಕತೆಯನ್ನು ಮೈಗೂಡಿಸಿಕೊಂಡಿರುವ ಆಧುನಿಕ ಕೈಗಾರಿಕಾ ಸಂಸ್ಥೆಗಳು ಯಂತ್ರಗಳ ಸುರಕ್ಷಿತ ನಿರಂತರ ಚಾಲನೆಯ ಮೇಲೆ ಬಹಳಷ್ಟು ಅವಲಂಬಿತವಾಗಿದೆ.ನಿರ್ವಹಣಾ ಕಾರ್ಯವು ತಾಂತ್ರಿಕ ವಿದ್ಯಾರ್ಹತೆಯುಳ್ಳ ಪದವೀಧರ ಅಭಯಂತರರಿಗೆ ಅನೇಕ ಉನ್ನತ ಅವಕಾಶಗಳನ್ನು ಕಲ್ಪಿಸಿದೆ. ವಿಧ್ಯುಚ್ಛಕ್ತಿ ಆಧುನಿಕ ಕೈಗಾರಿಕೆಯ ನಿರಂತರ ಚಲನೆಗೆ ಅತ್ಯವಶ್ಯವಾಗಿರುವುದರಿಂದ ವಿಧ್ಯುಚ್ಛಕ್ತಿ ಅಭಯಂತರರಿಗೆ ಬಹಳ ಏಡಿಕೆಯಿದೆ. ಮಾನಸಿಕವಾಗಿ ಹಾಗೂ ದೈಹಿಕವಾಗಿ ನಿರ್ವಹಣಾ ಕಾರ್ಯವು ಬಹುಬೇಡಿಕೆಯ ವೃತ್ತಿಯಾಗಿದೆ. ತುರ್ತುಪರಿಸ್ಥಿಗಳಲ್ಲಿ ಯಂತ್ರದ ನಿಲುಗಡೆಯ ಸಂದರ್ಭಗಳಲ್ಲಿ ವ್ಯಕ್ತಿಯೊಬ್ಬ ಯಾವುದೇ ವೇಳೆಯಲ್ಲಿಯೂ ಅಭಾದಿತವಾಗಿ ಕೆಲಸ ನಿರ್ವಹಿಸುವ ಸಾಮರ್ಥ್ಯವನ್ನು ನಿರ್ವಹಣಾ ಕಾರ್ಯಕ್ಷೇತ್ರದ ಗಹನತೆಯನ್ನು ದೈಹಿಕವಾಗಿ ಹೆಚ್ಚಿಸಿದೆ. ಆದರೂ ಪಾಳಿಯಲ್ಲಿ ಕೆಲಸ ಮಾಡುವುದು ಕೆಲಸದ ಒಂದು ಅಂಗವಾಗಿದೆ. ಸಾಮಾನ್ಯ ಜನರ ವಾಸಸ್ಥಳಗಳಿಗಿಂತ ಬಹಳ ದೂರವಿರುವ ಕೈಗಾರಿಕಾ ವಸಾಹತುಗಳು,ಸಮುದ್ರದ ಮಧ್ಯದಲ್ಲಿ, ಮರುಭೂಮಿ, ಪರ್ವತ ಹಾಗೂ ಶಕ್ತಿ ಉತ್ಪಾದನಾ ಸ್ಥಳಗಳಲ್ಲಿ ಕೆಲಸ ಮಾಡುವ ನಿರ್ವಹಣಾ ಕೆಲಸಗಾರರಿಗೆ ದೈಹಿಕ ಸಾಂಮರ್ಥ್ಯದ ಜೊತೆಗೆ ಮಾನಸಿಕ ಒತ್ತಡಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯದ ಅಗತ್ಯವಿರುತ್ತದೆ.
ಪ್ರಾಯೋಗಿಕ ಪ್ರಯೋಗಗಳ ಬಗ್ಗೆ ಒಲವು ನಿರ್ವಹಣಾ ಕಾರ್ಯದ ಎರಡನೇ ಅತ್ಯುತ್ತಮ ಬೇಡಿಕೆಯಾಗಿದೆ. ನಿರ್ವಹಣಾ ಕೆಲಸವನ್ನು ವೃತ್ತಿಯನ್ನಾಗಿಸಿಕೊಳ್ಳುವರು ಕೈ ಕೆಸರು ಮಾಡಿಕೊಳ್ಳುವುದಕ್ಕೆ ಉತ್ಸುಕರಾಗಿರಬೇಕು. ಪ್ರಾಯೋಗಿಕತೆಯ ಅರಿವು ಅದರಲ್ಲೂ ಎಣ್ಣೆಯನ್ನು ಬದಲಾವಣೆ ಮಾಡುವಾಗ , ಹಾಳಾದ ಬೇರಿಂಗ್ ಗಳನ್ನು ಬದಲಾವಣೆ ಮಾಡುವಾಗ, ಇನ್ನಿತರ ನೂರಾರು ಪ್ರಾಯೋಗಿಕ ಕೆಲಸಗಳನ್ನು ಮಾಡುವಾಗ ವೈಜ್ಣಾನಿಕ ಪ್ರಾಯೋಗಿಕತೆಯ ಅರಿವು ಇರಬೇಕಾದುದು ಅವಶ್ಯಕವಾಗಿದೆ. ನಿರ್ವಹಣಾಧಿಕಾರಿಯಿಂದ ಹಿಡಿದು ಸಹಾಯಕ ಕೆಲಸಗಾರರವರೆವಿಗೂ ಕೈ ತುಂಬಾ ಕೆಲಸವಿರುತ್ತದೆ. ಅಧಿಕಾರಶಾಹೀ ದರ್ಪ, ಅಹಂಕಾರಗಳು ನಿರ್ವಹಣಾ ಕಾರ್ಯದಲ್ಲಿ ಕೆಲಸ ಮಾಡಲಾರದು.
ಆಧುನಿಕ ಕೈಗಾರಿಕೆಯು ಅನೇಕ ತಾಂತ್ರಿಕತೆಯ ಸಮ್ಮೇಳನತೆಯ ಸಹಾಯದಿಂದ ಕೆಲಸಕಾರ್ಯಗಳು ನಿರಂತರವಾಗಿ ಚಲನೆಯಲ್ಲಿರುತ್ತದೆ. ನಿರ್ವಹಣಾ ಅಭಯಂತರರು ಅಗಾಗ್ಗೆ ಅನೇಕ ಕಾರ್ಯಕ್ಷೇತ್ರಗಳಲ್ಲಿ ಕೆಲಸಮಾಡಬೇಕಾಗುತ್ತದೆ ಉದಾಹರಣೆ: ಸಿವಿಲ್,ಮೆಕ್ಯಾನಿಕಲ್, ವಿಧ್ಯುನ್ಮಾನ, ಇನ್ಸ್ಟುಮೆಂಟೇಷನ್, ಶೈತ್ಯೀಕರಣ.......ಇತ್ಯಾದಿ. ಹೀಗಾಗಿ ನಿರ್ವಹಣಾ ಅಭಯಂತರರು ಇತರೇ ವೈಜ್ಣಾನಿಕ, ತಾಂತ್ರಿಕ ವಿಷಯಗಳ ಅರಿವು ಹಾಗೂ ಪ್ರಾಯೋಗಿಕತೆಯ ಅವಶ್ಯಕತೆಯಿರುತ್ತದೆ. ಆದುದರಿಂದ ನಿರ್ವಹಣಾ ಅಭಯಂತರ " ಸಕಲ ಕಾರ್ಯಗಳ ಅರಿವು ಹಾಗೂ ಒಂದು ವಿಷಯದಲ್ಲಿ ಪಾಂಡಿತ್ಯ" ವನ್ನು ಪಡೆದಿರಬೇಕಾಗುತ್ತದೆ.
ನಿರ್ವಹಣಾ ಕಾರ್ಯದ ಜೊತೆ ಅತಿ ಹತ್ತಿರದ ಸಂಭಂದವಿರುವುದು ಭದ್ರತೆಗೆ. ಯಂತ್ರಗಳನ್ನು ಸರಿಯಾಗಿ ನಿರ್ವಹಣೆಯ ಗಮನದಲ್ಲಿ ಇರಿಸದಿದ್ದರೆ ಅನೇಕ ಅಪಘಾತಗಳು ಸಂಭವಿಸಬಹುದು. ನಿರ್ವಹಣಾ ಅಭಯಂತರರು ದಿನಂಪ್ರತಿಯ ಸಣ್ಣಸಣ್ಣ ಕೆಲಸಗಳಿಗೆ ಅಚಲವಾದ ಗಮನವನ್ನು ಕೇಂದ್ರೀಕರಿಸಬೇಕು. ಬೇಜವಾಬ್ದಾರಿ ಹಾಗೂ ಕೆಲಸಕಾರ್ಯಗಳಲ್ಲಿ ವಾಮಮಾರ್ಗಗಳನ್ನು ಅನುಸರಿಸುವ ವ್ಯಕ್ತಿಯಿಂದ ನಿರ್ವಹಣಾ ಕೆಲಸಗಳಿಗೆ ಅಡಚಣೆಯುಂಟಾಗಿ ಜೀವ ಹಾಗೂ ಉತ್ಪಾದಕತೆಯಲ್ಲಿ ತೊಂದರೆಯುಂಟಾಗುತ್ತದೆ.
ಆದುದರಿಂದ ನಿರ್ವಹಣಾ ಕೆಲಸವನ್ನು ವೃತ್ತಿಯನ್ನಾಗಿಸಿಕೊಳ್ಳುವ ವ್ಯಕ್ತಿಗಳಿಗೆ ಪ್ರಾಯೋಗಿಕತೆಯ ಅರಿವು, ವೃತ್ತಿಯ ಕಠಿಣತ್ವ ಹಾಗೂ ಇತರ ವಿಷಯಗಳನ್ನು ಮೈಗೂಡಿಸಿಕೊಳ್ಳುವ ನೈತಿಕತೆಯ ಜೊತೆಗೆ ಕೆಲಸ ಕಾರ್ಯಗಳಲ್ಲಿ ಶಿಸ್ತು ಹಾಗೂ ಸಂಯಮದ ಅವಶ್ಯಕತೆ ಹೆಚ್ಚಾಗಿರುತ್ತದೆ. ಮೇಲಿನ ಅಂಶಗಳು ಒಬ್ಬ ಉತ್ತಮ ನಿರ್ವಹಣಾ ಅಭಯಂತರನ ಮುಖ್ಯ ಲಕ್ಷಣಗಳಾಗಿವೆ.
ನಿರ್ವಹಣಾ ವೃತ್ತಿಪರರಿಗೆ ತಮ್ಮ ಕೆಲಸ ಅನನ್ಯವಾದಂತಹ ಸ್ಥಾನವನ್ನು ಕೈಗಾರಿಕಾ ಸಂಸ್ಥೆಗಳಲ್ಲಿ ಒದಗಿಸಿಕೊಟ್ಟಿದೆ. ಬೇರೆ ವೃತ್ತಿಗಳಂತೆ ನಿರ್ವಹಣಾ ಅಭಯಂತರನ ಜ್ಣಾನ, ಪ್ರೌಡಿಮೆ ಒಂದು ಕೈಗಾರಿಕೆಗೆ ಮಾತ್ರ ಮೀಸಲಾಗಿರದೆ ಎಲ್ಲಾ ಕೈಗಾರಿಕಾ ಸಂಸ್ಥೆಗಳಲ್ಲೂ ಕೆಲಸ ಮಾಡುವ ನೈತಿಕತೆಯನ್ನು ಹೊಂದಿರುತ್ತಾರೆ. ಹೀಗಾಗಿ ನಿರ್ವಹಣಾ ಅಭಯಂತರರು ಒಮ್ದು ಕೈಗಾರಿಕೆಯಿಂದ ಮತ್ತೊಂದು ಕೈಗಾರಿಕೆಗೆ ಬಹುಬೇಗನೆ ಹೊಂದಿಕೊಳ್ಳುವವರಾಗಿರುತ್ತಾರೆ. ನಿರ್ವಹಣಾ ಅಭಯಂತರರನ್ನು ಕೈಗಾರಿಕೆಗಳು ಬಹು ಬೇಗನೆ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ನಿರ್ವಹಣಾ ವೃತ್ತಿಯ ಬಾಗುವಿಕೆಯ ಲಕ್ಷಣ ಅನೇಕ ಇತರ ವೃತ್ತಿಪರರು ಮತ್ಸರ ಪಡುವಂತಾಗಿದೆ. ನಿರ್ವಹಣಾ ವೃತ್ತಿಯ ಕಾರ್ಯಕ್ಷೇತ್ರ ಕೆಲಸದ ಅವಕಾಶಗಳು ಈ ಕೆಳಗಿನ ಕ್ಷೇತ್ರಗಳಲ್ಲಿ ಹೆಚ್ಚಾಗಿವೆ. ತಾರೆಯರ ಉಪಹಾರ ಕೇಂದ್ರಗಳು, ವಾಣಿಜ್ಯ ಸಂಕೀರ್ಣಗಳು, ಶಕ್ತಿ ಉತ್ಪಾದನಾ ಸಂಸ್ಥೆಗಳು, ಪೆಟ್ರೋಲಿಯಮ್ ರಾಸಾಯನಿಕ ಉತ್ಪಾದನಾ ಸಂಸ್ಥೆಗಳು, ವಾಹನ ತಯಾರಿಕಾ ಘಟಕಗಳು ಹಾಗೂ ಸಾಮಾನ್ಯ ಕೈಗಾರಿಕಾ ಸಂಸ್ಥೆಗಳು.
ಸಂಸ್ಥೆಯಲ್ಲಿ ಮುನ್ನಡೆ ಹಾಗೂ ಜೀವನದಲ್ಲಿ ಮುನ್ನಡೆ ವ್ಯಕ್ತಿಗತವಾದ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ. ಸಂಸ್ಥೆಯ ನೀತಿ-ನಿಯಮಗಳ ಮೇಲೂ ವ್ಯಕ್ತಿಯೋರ್ವನ ಮೇಲೋಭಿವೃದ್ದಿ ಅವಲಂಬಿತವಾಗಿದೆ. ಇತ್ತೀಚಿನ ದಿನಗಳಲ್ಲಿ ವ್ಯಕ್ತಿಯೋರ್ವನ ಸಾಮರ್ಥ್ಯ ಅಭಿವೃದ್ದಿಯ ಅಳತೆಗೋಲಾಗಿ ಸಂಸ್ಥೆಗಳು ಅಳವಡಿಸಿಕೊಂಡಿವೆ. ಹತ್ತು-ಹನ್ನೆರಡು ವರ್ಷಗಳ ಕಾರ್ಯಾನುಭವ ಸಂಸ್ಥೆಯೊಂದರಲ್ಲಿ ಉಚ್ಚಮಟ್ಟದ ಹುದ್ದೆ ಹಾಗೂ ಜವಾಬ್ದಾರಿಗಳನ್ನು ನಿರ್ವಹಿಸಬಹುದಾಗಿದೆ.
ಔಷದ ಕಾರ್ಖಾನೆಗಳು ಅದರಲ್ಲೂ ಬಹುರಾಷ್ಟ್ರೀಯ ಸಂಸ್ಥೆಗಳು ವೇತನ ಕೊಡುವಿಕೆಯಲ್ಲಿ ಮೊದಲ ಸ್ಥಾನವನ್ನು ಪೆಟ್ರೋಲಿಯಮ್ ರಸಾಯನಿಕಗಳನ್ನು ತಯಾರಿಸುವವರು ಹಾಗೂ ಮೂರನೆಯ ಸ್ಥಾನದಲ್ಲಿ ರಸಾಯನಿಕಗಳನ್ನು ತಯಾರಿಸುವ ಸಂಸ್ಥೆಗಳಿವೆ.
ಹೆಚ್ಚಿನ ಅವಕಾಶಗಳು ಅದರಲ್ಲೂ ಉತ್ತಮ ಪದವಿಯ ಜೊತೆಗೆ ಅನುಭವ ಹೊಂದಿದ ಅಭಯಂತರರಿಗೆ ಸಲಹಾಕೇಂದ್ರಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಅನೇಕ ಕಾರ್ಖಾನೆಗಳು ಹಾಗೂ ಸಂಸ್ಥೆಗಳು ಸಲಹಾಕೇಂದ್ರಗಳ ಮೇಲೆ ಗಮನವನ್ನು ಕೇಂದ್ರೀಕರಿಸಿದ್ದಾರೆ- ನಿರ್ವಹಣೆಯ ಬಗ್ಗೆ, ಹೊಸ ಬದಲಾವಣೆಗಳ ವಿಷಯಗಳಲ್ಲಿ ಸಲಹಾಕೇಂದ್ರಗಳ ಮೇಲೆ ಅವಲಂಬಿತರಾಗಿದ್ದಾರೆ. ಓಳ್ಳೆಯ ಜನರ ಪರಿಚಯದಿಂದ ನಿರ್ವಹಣಾ ಕಾರ್ಯ ಲಾಭದಾಯಕ ವೃತ್ತಿಯೆನಿಸಿದೆ. ಮತ್ತೊಂದು ವ್ಯಕ್ತಿಗತವಾದ ಸಂಸ್ಥೆಯೆಂದರೆ ಗುತ್ತಿಗೆ ಆಧಾರದ ಮೇಲೆ ನಿರ್ವಹಣಾ ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದು. ಅನೇಕ ಕಾರ್ಖಾನೆಗಳು, ಸಂಸ್ಥೆಗಳು ಅದರಲ್ಲೂ ಸಾರ್ವಜನಿಕ ಹಾಗೂ ಖಾಸಗಿ ಸಂಸ್ಥೆಗಳು ನಿರ್ವಹಣಾ ಕಾರ್ಯದ ಜವಾಬ್ದಾರಿಯನ್ನು ಖಾಸಗೀ ಸಂಸ್ಥೆಗಳಿಗೆ ವಹಿಸುತ್ತಿದೆ. ಸಾರ್ವಜನಿಕ ಉದ್ಯಮಗಳು ಹೆಚ್ಚಾಗಿ ಖಾಸಗೀ ಸಂಸ್ಥೆಗಳಿಗೆ ನಿರ್ವಹಣಾ ಕಾರ್ಯಗಳನ್ನು ವಹಿಸಿಕೊಡುತ್ತಿವೆ. ಮುಮ್ದೆಯೂ ಈ ರೀತಿಯ ಒಲವು ಹೆಚ್ಚಾಗಲಿದೆ.
ನಿರ್ವಹಣಾ ಕಾರ್ಯವು ಬಹುಮುಖ್ಯವಾದ ಕೆಲಸವಾದರೂ ಆಡಳಿತವರ್ಗದವರಿಮ್ದ ತುಚ್ಛವಾಗಿ ಕಾಣಲ್ಪಟ್ಟಿದೆ. ನಿಜ ಹೇಳಬೇಕೆಂದರೆ ನಿರ್ವಹಣಾಕಾರ್ಯವು ಕಡೆಗಣಿಸಲ್ಪಟ್ಟ ಕಾಯಕವಾಗಿದೆ. ನಿರ್ವಹಣಾ ವೃತ್ತಿಪರರ ಪ್ರಾಮುಖ್ಯತೆಯನ್ನು ಪ್ರಖ್ಯಾತ ಸಂಸ್ಥೆಗಳೂ ಕಡೆಗಣಿಸಿವೆ. ಪ್ರಸ್ತುತ ಕಡೆಗಣಿಸಿದ ಭಾವನೆ ಕ್ಷೀಣಿಸುತ್ತಿದೆಯಾದರೂ ಒಂದು ಒಳ್ಳೆಯ ಸ್ಥಾನಮಾನ ಸಿಗಲು ಬಹಳ ಕಾಲದ ಅವಶ್ಯಕತೆ ಹಾಗೂ ಆಡಳಿತವರ್ಗಗಳ ದೃಷ್ಟಿಕೋನ ಬದಲಾಗ ಬೇಕು.
ನಿರ್ವಹಣಾ ವೃತ್ತಿಪರರು ಅಪಘಾತಗಳಿಗೆ ತೀರ ಹತ್ತಿರವಿರುತ್ತಾರೆ, ಹೀಗಾಗಿ ಸಣ್ಣ-ಪುಟ್ಟ ಅಪಘಾತಗಳು ಘಟಿಸುತ್ತಿರುತ್ತವೆ. ವಿಷಯುಕ್ತ ಅನಿಲ, ಬೆಂಕಿ, ಹಾಗೂ ಆಮ್ಲ.... ಇತ್ಯಾದಿ ಗಳನ್ನು ಎಚ್ಚರಿಕೆಯಿಂದ ಉಪಯೋಗಿಸಬೇಕು. ಎಚ್ಚರ ತಪ್ಪಿದಲ್ಲಿ ಕರಾಳ ಅಪಘಾತಗಳು ಸಂಭವಿಸಿ ವ್ಯಕ್ತಿಯ ಜೀವಕ್ಕೆ ಅಪಾಯವುಂಟಾಗಬಹುದು ಹಾಗೂ ಆಸ್ತಿ-ಪಾಸ್ತಿಯ ನಷ್ಟವೂ ಸಂಭವಿಸಬಹುದು. ಕಾರ್ಖಾನೆಗಳಲ್ಲಿ ಯಂತ್ರಗಳು ಚಲಿಸುವಾಗ ಶಬ್ದವು ಉಂಟಾಗಿ ಶಬ್ದಮಾಲಿನ್ಯದಿಂದ ಕಿವುಡುತನ ಬರುವ ಸಂಭವವೂ ಹೆಚ್ಚು. ವಿಷಯುಕ್ತ ಅನಿಲ,ಧೂಳು ಹಾಗೂ ಪರಿಸರ ಮಾಲಿನ್ಯದಿಂದ ಶ್ವಾಸಕೋಶಕ್ಕೆ ಸಂಭಂದಿಸಿದ ಕಾಯಿಲೆಗಳು ಬರುವ ಸಂಭವಗಳು ಹೆಚ್ಚು.
ನವನವೀನ ಕಾರ್ಯತಂತ್ರಗಳು, ತಾಂತ್ರಿಕತೆಯಿಂದ ಹಳೆಯ ಕಾರ್ಯತಂತ್ರಗಳು ಬೆಲೆಯನ್ನು ಕಳೆದುಕೊಂಡು ನಿರ್ವಹಣಾ ಕಾರ್ಯಕ್ಕೆ ಪ್ರಾಮುಖ್ಯತೆ ತಂದುಕೊಡುತ್ತಿದೆ. ಹೆಚ್ಚುತ್ತಿರುವ ತಾಂತ್ರಿಕತೆಯಿಂದಾಗಿ ಕಾರ್ಖಾನೆಗಳಲ್ಲಿ ಹಾಗೂ ಸಂಸ್ಥೆಗಳಲ್ಲಿ ನಿರ್ವಹಣಾ ವೃತ್ತಿಪರರಿಗೆ ಬೇಡಿಕೆ ಹೆಚ್ಚುತ್ತಿದೆ. ಪ್ರಸ್ತುತ ಜಾಗತೀಕರಣದಿಂದಾಗಿ ನಿರ್ವಹಣಾಕಾರ್ಯದ ಬಗ್ಗೆ ಇದ್ದ ಹಳೆಯ ಧೋರಣೆ ಆಡಳಿತವರ್ಗಗಳಲ್ಲಿ ಕಡಿಮೆಯಾಗುತ್ತಿದೆ. ನಿರ್ವಹಣಾ ವೃತ್ತಿಪರರು ಹೊಸ ಹೊಸ ಕಾರ್ಯತಂತ್ರಗಳನ್ನು, ವಿಧಾನಗಳನ್ನು ಕಲಿಯುವ ಹಂಬಲವುಳ್ಳವರಾಗಿರಬೇಕಾದುದು ಪ್ರಸ್ತುತ ಕಾಲದ ಬೇಡಿಕೆಯಾಗಿದೆ. ಹೊಸದಾಗಿ ನಿರ್ವಹಣಾ ಕಾರ್ಯವನ್ನು ವೃತ್ತಿಯನ್ನಾಗಿ ಸ್ಚೀಕರಿಸುವವರಿಗೆ ಇಂದು ಕಾಲಸೂಕ್ತವಾಗಿದೆ ಏಕೆಂದರೆ ಹೊಸ ಹೊಸ ಸಂಸ್ಥೆಗಳು ಭಾರತಕ್ಕೆ ಕಾಲಿಡುತ್ತಿದ್ದು ವಾಹನ ತಯಾರಿಕಾ ಘಟಕಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಸುರಕ್ಷಿತ ಸಾದನಗಳನ್ನು, ಕಾರ್ಯವಿದಾನಗಳನ್ನು ಅಳವಡಿಸಿಕೊಳ್ಳುವುದರಿಂದ ಅಪಘಾತಗಳು ಕಡಿಮೆಯಾಗಿ ವ್ಯಕ್ತಿ ಆರೋಗ್ಯದಲ್ಲೂ ಸುಧಾರಣೆಯನ್ನು ಕಾಣಬಹುದಾಗಿದೆ. ನವೀನ ತಾಂತ್ರಿಕತೆಯಲ್ಲಿ ಭದ್ರತೆಗೆ ಹೆಚ್ಚಿನ ಗಮನವನ್ನು ಕೊಡಲಾಗಿದೆ. ನವೀನ ಭದ್ರತಾ ತಾಂತ್ರಿಕತೆಯಿಂದಾಗಿ ಕಾರ್ಖಾನೆಗಳಲ್ಲಿ ಕೆಲಸಮಾಡುವವರಿಗೆ ನಿರಾಳತೆಯಿದೆ. ಹೊಸ ತಾಂತ್ರಿಕತೆ, ವಿಧಿ-ವಿಧಾನಗಳು ಸುರಕ್ಷಿತ ಕೆಲಸದ ಪರಿಸರವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗುವತ್ತ ಧಾಪುಗಾಲಿಡುತ್ತಿದೆ.

ನಾಗೇಂದ್ರ ಕುಮಾರ್ ಕೆ. ಎಸ್.

ಜ್ಘ್ಯಾನವೆಂದರೆ ಯಾವುದು?

ಕೆಲಸ ಮಾಡುವಾಗ, ರಾಮನ್ ಹಾಗು ನಾರಾಯಣ ಹರಟೆಹೊಡೆಯುತ್ತಿದ್ದರು.
ರಾಮನ್: ನಾರಾಯಣ್ ನಾನು ಕಳೆದ ೫ ತಿಂಗಳಿಂದ ರಾತ್ರಿ ತರಗತಿಗೆ ಹೋಗುತ್ತಿದ್ದೇನೆ, ಮುಂದಿನ ವಾರ ನನಗೆ ಪರೀಕ್ಷೆಯಿದೆ.
ನಾರಾಯಣ: ಒಹ್! ಹೌದಾ!
ರಾಮನ್: ಉದಾಹರಣೆಗೆ, ನಿನಗೆ ಗ್ರಾಹಾಂಬೆಲ್ ಯಾರೆಂದು ತಿಳಿದಿದೆಯೇ?
ನಾರಾಯಣ: ಗೊತ್ತಿಲ್ಲ.
ರಾಮನ್: ಗ್ರಾಹಾಂಬೆಲ್ ದೂರವಾಣೆಯನ್ನು ೧೮೭೬ರಲ್ಲಿ ಕಂಡುಹಿಡಿದ ಅನ್ವೇಷಕ, ನೀನು ರಾತ್ರಿ ತರಗತಿಗೆ ಬಂದರೆ ನಿನಗೂ ತಿಳಿಯುತ್ತದೆ.


ಮಾರನೇ ದಿನ, ಮತ್ತೇ ಅದೇ ವಿಚಾರದ ಬಗ್ಗೆ ಅವರ ನಡುವೆ ಮಾತುಕತೆಯಾಯಿತು.
ರಾಮನ್: ನಿನಗೆ ಅಲೆಗ್ಸಾಂಡರ್ ಡುಮಾಸ್ ಯಾರೆಂದು ತಿಳಿದಿದೆಯೇ?
ನಾರಾಯಣ: ಗೊತ್ತಿಲ್ಲ.
ರಾಮನ್: ಅವನು ’ದಿ ೩ ಮಸ್ಕಿಟೀಯರ್ಸ್" ಪುಸ್ತಕ ಬರೆದವನು,ನೀನು ರಾತ್ರಿ ತರಗತಿಗೆ ಬಂದರೆ ನಿನಗೂ ತಿಳಿಯುತ್ತದೆ.


ಮಾರನೇ ದಿವಸ ಅದೇ ಚರ್ಚೆಯಾಯಿತು
ರಾಮನ್: ನಿನಗೆ ಜೀನ್ ಜಾಕಸ್ ರೋಸೈ ಯಾರೆಂದು ತಿಳಿದಿದೆಯೇ?
ನಾರಾಯಣ: ಗೊತ್ತಿಲ್ಲ.
ರಾಮನ್: ಅವನು ’ಕನ್‌ಪ್ಫೆಶನ್ಸ್" ಪುಸ್ತಕ ಬರೆದವನು,ನೀನು ರಾತ್ರಿ ತರಗತಿಗೆ ಬಂದರೆ ನಿನಗೂ ತಿಳಿಯುತ್ತದೆ.
ಈ ಬಾರಿ ನಾರಾಯಣ್ ಗೆ ತುಂಬಾ ಸಿಟ್ಟು ಬಂತು ಹಾಗು ಅವನು ರಾಮನ್ ಗೆ ಪ್ರಶ್ನೆ ಕೇಳಿದ: ನಿನಗೆ ಬಾಲಕೃಷ್ಣ ಕುಪ್ಪುಸ್ವಾಮಿ ಯಾರೆಂದು ತಿಳಿದಿದೆಯೇ?
ರಾಮನ್: ಗೊತ್ತಿಲ್ಲ.
ನಾರಾಯಣ್: ಅವನು ನಿನ್ನ ಹೆಂಡತಿಯೊಂದಿಗೆ ತಿರುಗುತ್ತಿರುವವನು, ನೀನು ರಾತ್ರಿ ತರಗತಿಗೆ ಹೋಗುವುದನ್ನು ನಿಲ್ಲಿಸಿದರೆ ನಿನಗೆ ಇದು ತಿಳಿಯುತ್ತದೆ.

ಸೋಮವಾರ, ಸೆಪ್ಟೆಂಬರ್ 20, 2010

ಸಾಂಸ್ಕೃತಿಕ ಸ್ಪರ್ಧೆಗಳ ವರದಿ


ಸುಂದರ ವೇದಿಕೆ, ಮನಕ್ಕೊಪ್ಪುವ ಶೃಂಗಾರ, ನಗುವ ಹೊಮ್ಮುವ ಮಾತುಗಳು, ಸಾಗರದಂತೆ ಸೇರಿದ ಜನಸಮೂಹ, ಅಲ್ಲಲ್ಲಿ ತೇಲಿಬರುವ ಮಾತುಗಳು, ಮುಂಗಾರು ಮಳೆಯಂತೆ ಹಿತವಾಗಿ ಮನಸೂರೆಗೊಳ್ಳುವ ಸ್ನೇಹಿತರ ಅಕ್ಕರೆಯ ಮಾತುಗಳು. ಇದೇನು ಯಾವುದೋ ಸಿನಿಮಾ ಚಿತ್ರಮಂದಿರದಲ್ಲಿ ಕೇಳಿ ಬರುವಂತಹ ಮಾತುಗಳಿವು ಎಂದುಕೊಂಡಿರಾ? ಹೀಗೆ ಅಲ್ಲಿ ಏನಿದೆಲ್ಲ ಎಂದು ಯೋಚಿಸುವುದಕ್ಕೆ ಯಾರಿಗಾದರೋ ಬಿಡುವಿದ್ದರೆ ತಾನೆ!. ಹಾಮ್! ನಾನು ಹೇಳಕ್ಕೆ ಹೊರಟಿರುವುದು ನಮ್ಮ ಸಂಸ್ಥೆಯ "ಸಾಂಸ್ಕೃತಿಕ ದಿನಾಚರಣೆ"ಯ ಅಂಗವಾಗಿ ನಡೆದ ಕಾರ್ಯಕ್ರಮಗಳ ಬಗ್ಗೆ. ಹೌದು ನೋಡಿ ನಮ್ಮ ಸಾಂಸ್ಕೃತಿಕ ಕಾರ್ಯಕ್ರಮಗಳು ಎಂದ ಕ್ಷಣ " ಏನೋ ಒಂಥರಾ " ಹುಡುಗಾಟದ ಖುಷಿಯಾಗುತ್ತೆ.
ಪ್ರಹಸನವೆಂದ ಕೂಡಲೇ ನಮಗೆ ಜ್ಞಾಪಕ ಬರುವುದು ಡಿ.ವಿ.ಜಿ ಯವರ
ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ!
ನಗುವ ಕೇಳುತ ನಗುವುದತಿಶಯದ ಧರ್ಮ
ನಗುವ, ನಗಿಸುತ ನಗಿಸಿ ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ- ಮಂಕುತಿಮ್ಮ
ಇಂತಹ ಮುತ್ತಿನಂತಹ ಮಾತು ನೆನಪಿಗೆ ಬರದೆ ಇರಲು ಸಾಧ್ಯವೇ? ಜೀವನದ ಯಾಂತ್ರಿಕ ಬದುಕು ಬೇಸರ ತಂದು ಜೀವನ ಏತಕ್ಕೆ? ಎಂಬ ಜಿಗುಪ್ಸೆಯನ್ನು ನೀಗಲು ಇಂತಹ ಕಾರ್ಯಕ್ರಮಗಳ ಅಗತ್ಯ ಇಂದು ಎದ್ದು ಕಾಣುತ್ತಿದೆ.
ದಿ೨೯.೦೭.೨೦೦೭ ರ ಸುಂದರ ಸಂಜೆ ಕೆ.ಟಿ.ಟಿ.ಎಮ್. ಸಹೋದ್ಯೋಗಿಗಳು ರಂಜಿಸಲು ತಯಾರಾಗಿಯೇ ಬಂದಿದ್ದರು. ನಿರೂಪಕರಾಗಿ ಶ್ರೀ. ಸುರೇಶ್ ಜೋಷಿ ಹಾಗೂ ಕು ಲೋಕೇಶ್ವರಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಮಾತುಮಾತಿನ ನಡುವೆ ತೇಲಿ ಬರುತ್ತಿದ್ದ ಹಾಸ್ಯ ಚಟಾಕಿಗಳು ಸಭಿಕರನ್ನು ನಗೆಗಡಲಲ್ಲಿ ಮುಳುಗಿಸಿತ್ತು. ಇನ್ನೂ ನೆನಪಿದೆ. ಮನೆಯಲ್ಲೂ ’ಗದಗ’ದ "ಧಗಧಗ" ಊಟ ನೆನಪಿಗೆ ಬಂದು ನಕ್ಕಿದಿದೆ.
ಅಂದು ಸಮಯಕ್ಕೆ ಸರಿಯಾಗಿ ಬಸ್ಸುಗಳು ತಲುಪಿ, ಜಯನಗರದ ಹೆಚ್.ಎನ್. ಕಲಾಕ್ಷೇತ್ರದಲ್ಲಿ ಸಂಜೆ ೪.೦೦ ಕ್ಕೆ ಸರಿಯಾಗಿ ಕಾರ್ಯಕ್ರಮಗಳು ಆರಂಭಗೊಂಡವು. ಕಾರ್ಯಕ್ರಮವು ಶ್ರೀ. ನರಸಿಂಹರವರ ಕಂಠಸಿರಿಯಲ್ಲಿ ಮೂಡಿಬಂದ ದೇವರನಾಮದಿಂದ ಮೊದಲುಗೊಂಡು ಆನಂತರ ಸಂಸ್ಥೆಯ ಮುಖ್ಯಸ್ಥರನ್ನು ಸ್ವಾಗತಿಸಿ, ಸಂಜೆಯ ಮೊದಲ ಸ್ಪರ್ಧೆ "ಪ್ರಹಸನ"ದ ಮೂಲಕ ಶುರುವಿಟ್ಟುಕೊಂಡಿತು. "ಪ್ರಹಸನ" ಸ್ಪರ್ಧೆಯಲ್ಲಿ ಸುಮಾರು ೬ ತಂಡಗಳು ಸಭಿಕರನ್ನು ಮೋಡಿಮಾಡಲು ತಯಾರಾಗಿ ಬಂದಿದ್ದವು. ಮೊದಲನೆಯದಾಗಿ ಶ್ರೀ. ಪೂಜಾರ್‌ರವರ ತಂಡ ನಡೆಸಿಕೊಟ್ಟ "ಮೂರುಜನ ಖೈದಿಗಳ" ಪ್ರಹಸನ ಪ್ರಸ್ತುತ ರಾಜಕೀಯ ಹಾಗು ಸರ್ಕಾರಾಧಿಕಾರಿಗಳ ಲಂಚಗುಳಿತನದ ಕೆಟ್ಟಚಾಳಿಯನ್ನು ಕಣ್ಣಮುಂದೆ ತೆರೆದಿಟ್ಟು ಸಭಿಕರನ್ನು ನಗೆಯ ಸಾಗರದಲ್ಲಿ ತೇಲಿಸಿತ್ತು.
ಎರಡನೆಯದಾಗಿ ಬಂದ ಶ್ರೀ. ವಿಜಯಕುಮಾರ್ ಮತ್ತು ತಂಡದವರ ಹಾಸ್ಯ ಮಿಶ್ರಿತ ರಾಮಾಯಣ ಪೌರಾಣಿಕ ನಾಟಕ ಸಬಿಕರನ್ನು ನಗೆಗಡಲಿನಲ್ಲಿ ತೇಲಿಸಿತು.
ಮೂರನೆಯ ತಂಡವಾಗಿ ಶ್ರೀ. ನಾಗೇಂದ್ರ ಕುಮಾರ್ ಮತ್ತು ಗೆಳೆಯರ ಮೂಕಾಭಿನಯದ ಪ್ರಹಸನ ಚೆನ್ನಾಗಿ ಮೂಡಿಬಂತು.
ಹವ್ಯಾಸ ಬದಲಿಸು- ಹಣೆಬರಹ ಬದಲಾದೀತು
ದೃಷ್ಟಿ ಬದಲಿಸು- ದೃಶ್ಯ ಬದಲಾದೀತು
ಹಡುಗು ಬದಲಿಸಬೇಕಿಲ್ಲ, ದಿಕ್ಕು ಬದಲಿಸಿದರೆ ಸಾಕು ದಡ ಸಿಕ್ಕೀತು"
ಎನ್ನುವ ನುಡಿಯಂತೆ ಜನರು ತಮ್ಮ ದೃಷ್ಟಿಕೋನವನ್ನು ಬದಲಿಸಿಕೊಂಡರೆ ಸಾಕು, ಸಮಾಜಕ್ಕೆ ಸಾಕಷ್ತು ಅನುಕೂಲಗಳನ್ನು ಮಾಡಬಹುದು. ಸಾಮಾನ್ಯ ಜನ ತಮ್ಮ ದೈನಂದಿನ ನಡೆಗಳಲ್ಲಿ ಪರಿಸರಕ್ಕೆ ಸಾಕಷ್ಟು ಹಾನಿಯಾಗುವಂತೆ ನಡೆದುಕೊಳ್ಳುತ್ತಾರೆ. ತಾವು ಆರೋಗ್ಯವಾಗಿದ್ದಾಗ ಬೇರೆಯವರ ಮಾತುಗಳಿಗೆ ಬೆಲೆ ಕೊಡುವುದಿಲ್ಲ. ಅದೇ ತಮಗೆ ತೊಂದರೆಯಾದಾಗ ತಮ್ಮ ತಪ್ಪಿನ ತಿಳುವಳಿಕೆ ಬೇಗ ಆಗುತ್ತದೆ ಎನ್ನುವ ನೀತಿಯುಕ್ತ "ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಹಾಗು ಆರೋಗ್ಯವೇ ಭಾಗ್ಯ ಎಂಬ ಪ್ರಹಸನ" ಮನಮುಟ್ಟುವಂತೆ ಪ್ರದರ್ಶಿಸಲ್ಪಟ್ಟಿತ್ತು.
ಆನಂತರ ಪ್ರದರ್ಶನಗೊಂಡ "ಭೂಮಿಗೆ ಬಂದ ಭಗವಂತ" ಶ್ರೀ. ಸಂತೋಷ್ ಮತ್ತು ತಂಡದವರು ಸಭಿಕರನ್ನು ನಗೆಗಡಲಿನಲ್ಲಿ ತೇಲಿಸಿದರು.
ಪ್ರಹಸನ ಮುಗಿದ ನಂತರ ನೃತ್ಯ-ಡ್ಯಾನ್ಸ್ ಕಾರ್ಯಕ್ರಮ ಎಲ್ಲರನ್ನೂ ಮೈಮರೆಯುವಂತೆ ಮಾಡಿತು. ಹೊಸತು- ಹಳತು ಸಮ್ಮಿಳಿತಗೊಂಡ ನೃತ್ಯ ಸಭಿಕರ ಮನಸ್ಸನ್ನು ಸೂರೆಗೊಂಡಿತು. ಶ್ರೀ. ರವಿಕುಮಾರ್ ತಂಡದ ’ಮುಮ್ಗಾರು ಮಳೆ’ ಚಲನಚಿತ್ರ ದ "ಒಂದೇ ಒಂದೇ ಸಾರಿ, ಕಣ್ಮುಂದೆ ಬಾರೇ", ’ಪಲ್ಲಕ್ಕಿ’ ಚಲನಚಿತ್ರದ "ಕಣ್ಣಲೂ ನೀನೇನೆ . . .", ಹಿಂದಿ ಚಲನಚಿತ್ರದ " " ಮನಸೂರೆಗೊಂಡವು. ಶ್ರೀ. ವಿಜಯ ಕುಮಾರ್ ಮತ್ತು ತಂಡದ " ಗುರು ಶಿಷ್ಯರು" ಚಲನಚಿತ್ರದ "ದೊಡ್ಡೋರೆಲ್ಲಾ ಜಾಣರಲ್ಲ, ಚಿಕ್ಕೋರೆಲ್ಲಾ ಕೋಣರಲ್ಲ" ಸಭಿಕರ ಮೆಚ್ಚುಗೆ ಗಳಿಸಿ ಪ್ರಥಮ ಸ್ಥಾನ ಪಡೆಯಿತು.
ಕಾರ್ಯಕ್ರಮದ ಕೊನೆಯಲ್ಲಿ ಪುಷ್ಕಳವಾದ ಊಟದ ವ್ಯವಸ್ಥೆಯಿತ್ತು. ಊಟದ ನಂತರ ಸಂಸ್ಥೆಯ ಎಲ್ಲ ಸದಸ್ಯರು, ಆ ಸಂಜೆಯ ಸವಿಘಳಿಗೆಗಳನ್ನೇ ಮೆಲುಕುಹಾಕುತ್ತಾ ಮರಳಿ ಮನೆಯೆಡೆಗೆ ಸಾಗಿದರು.
ವರದಿ : ನಾಗೆಂದ್ರ ಕುಮಾರ್

-ನಮ್ಮ ಮೌಲ್ಯ-

ಒಬ್ಬ ಪ್ರಖ್ಯಾತ ಉಪನ್ಯಾಸಕರಿಂದ ಒಂದು ಸಂಜೆ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಉಪನ್ಯಾಸಕಾರು ತಮ್ಮ ಉಪನ್ಯಾಸವನ್ನು ಕೈಯಲ್ಲಿ ರೂ.೫೦೦ ರ ನೋಟನ್ನು ಹಿಡಿದು ಆರಂಭಿಸಿದರು. ಆ ಸಭಾಂಗಣದಲ್ಲಿ ಸುಮಾರು ೨೦೦ ಜನರಿಗೆ ಆ ನೋಟನ್ನು ತೋರಿಸುತ್ತಾ ಕೇಳಿದರು " ಯಾರಿಗೆ ಬೇಕು ಈ ರೂ. ೫೦೦ ರ ನೋಟು?" ಎಂದು. ಅವರು ಹಾಗೆ ಪ್ರಶ್ನಿಸುತ್ತಿದ್ದಂತೆ ಎಲ್ಲರ ಕೈಗಳು ಮೇಲೇರ ತೊಡಗಿತು ಅದಕ್ಕುತ್ತರವಾಗಿ ಅವರು " ನಿಮ್ಮಲ್ಲಿ ಯಾರಿಗಾದರೂ ಒಬ್ಬರಿಗೆ ನಾನು ಈ ನೋಟನ್ನು ಕೊಟ್ಟೇ ಕೊಡುತ್ತೇನೆ ಮೊದಲು ನಾನು ಮಾಡುವುದನ್ನು ನೀವು ನೋಡಿ". ಅವರು ತನ್ನ ಕೈಯಲ್ಲಿದ್ದ ನೋಟನ್ನು ಹಿಂಡಿ ಹಿಪ್ಪೆಮಾಡಿದರು ಹಾಗು ಅದನ್ನು ಕೈಗೆ ತೆಗೆದುಕೊಳ್ಳುತ್ತಾ " ಈಗ ಹೇಳಿ ಈ ನೋಟು ಯಾರಿಗೆ ಬೇಕು" ಎಂದರು. ಮತ್ತೆ ಎಲ್ಲರ ಕೈಗಳೂ ಮೇಲೇರತೊಡಗಿತು. " ಸಂತೋಷ " ಎಂದು ಹೇಳಿ " ಈಗ ಹೇಳಿ ಯಾರಿಗೆ ಬೇಕು ನಾನು ಹೀಗೆ ಮಾಡಿದರೆ" ಎಂದು ಹೇಳಿ ನೋಟನ್ನು ನೆಲಕೆ ಹಾಕಿ ಕಾಲಿನಿಂದ ಚೆನ್ನಾಗಿ ತುಳಿದು ತೊಪ್ಪೆಮಾಡಿ ಕೈಗೆತ್ತಿಕೊಂಡರು, ನೋಟು ಗಲೀಜಾಗಿ ನೋಡಲು ಅಸಹ್ಯವಾಗುತ್ತಿತು. "ಈಗ ಹೇಳಿ ಯಾರಿಗೆ ಬೇಕು" ಎಂದರು. ಮತ್ತೆ ಎಲ್ಲರ ಕೈ ಮೇಲೇರತೊಡಗಿತು. " ಆತ್ಮೀಯ ಗೆಳೆಯರೆ ಈಗ ತಾನೇ ನೀವೊಂದು ಜೀವನದ ಅಮೂಲ್ಯವಾದ ಪಾಠವನ್ನು ಕಲಿತಿರಿ, ನಾನು ಹಣಕ್ಕೆ ಏನೇ ಮಾಡಿದರೂ ನೀವು ಅದು ಬೇಕೆಂದೇ ಹೇಳಿದಿರಿ. ನಾನು ಹಣಕ್ಕೆ ಏನು ಮಾಡಿದರೂ ಹಣದ ಮೌಲ್ಯ ಮಾತ್ರ ಕಡಿಮೆಯಾಗಲಿಲ್ಲ, ಈಗಲೂ ಅದರ ಮೌಲ್ಯ ರೂ ೫೦೦ ರೇ ಆಗಿದೆ. ಕೆಲವು ಸಮಯದಲ್ಲಿ ನಮ್ಮ ಪರಿಸ್ಥಿತಿಗಳು, ನಾವು ತೆಗೆದುಕೊಳ್ಳುವ ತೀರ್ಮಾನಗಳು, ನಮ್ಮನ್ನು ಜೀವನದಲ್ಲಿ ಕುಗ್ಗಿ ಹೋಗುವಂತೆ, ಮತ್ತೆ ಏಳಲಾಗದಂತೆ ಮಾಡುತ್ತದೆ. ನಮಗೇ ನಾವೇ ಅಂದುಕೊಳ್ಳುತ್ತೇವೆ ನಾವು ನಿಷ್ಪ್ರಯೋಜಕರು, ಕಸಕ್ಕಿಂತ ಕಡೆ, ನಮಗೆ ಬೆಲೆಯಿಲ್ಲ" ಎಂದು " ಆದರೆ ನಾವು ಏನೇ ಆಗಿದ್ದರೂ ನಮ್ಮ ಬೆಲೆಯನ್ನು ಎಂದೂ ನಾವು ಕಳೆದುಕೊಳ್ಳುವುದಿಲ್ಲ". " ನಿಮ್ಮ ವ್ಯಕ್ತಿತ್ವ ಅನನ್ಯವಾದುದು, ನೀವು ಬೇರೆಯವರಿಗಿಂತ ಬಿನ್ನವೆಂಬುದನ್ನು ಮರೆಯ ಬೇಡಿ ‘ನಾಳೆಯ ಕನಸಿನ ಮೇಲೆ ಇಂದಿನ ನಿರಾಶೆಯ ಕರಿನೆರಳು ಬೀಳದಂತೆ ನೋಡಿಕೊಳ್ಳಿ’.ಹಳೆಯ ವರುಷದ ನೋವುಗಳನ್ನು ಇಂದಿಗೇ ಕೊನೆಗೊಳಿಸಿ ಮಧುರ ನೆನೆಹುಗಳನ್ನು ಬರುವ ವರುಷಕ್ಕೆ ಕೊಂಡೊಯ್ಯಿರಿ. ಹೊಸ ವರುಷವನ್ನು ಹೊಸ ಕನಸು ಹಾಗು ಆಕಾಂಕ್ಷೆಗಳೊಂದಿಗೆ ಆರಂಭಿಸಿ, ನಿಮಗೆಲ್ಲರಿಗೂ ಶುಭವಾಗಲಿ" ಎಂದು ತಮ್ಮ ಉಪನ್ಯಾಸವನ್ನು ಮುಗಿಸಿದರು.
ಇಷ್ಟೊಂದೆಲ್ಲಾ ಏಕೆ ಹೇಳಬೇಕಾಯಿತೆಂದರೆ,ಪ್ರಸ್ತುತ ಆರ್ಥಿಕ ಹಿಂಜರಿತದಿಂದ ನಾವು ಹಾಗು ನಮ್ಮನ್ನು ಸಲಹುತ್ತಿರುವ ಸಂಸ್ಥೆಗಳು ಕಂಗೆಡುತ್ತಿವೆ, ಎಲ್ಲೆಡೆಯಲ್ಲೂ ನಿರಾಶೆಯ ಕರಿನೆರಳು ಹಬ್ಬುತ್ತಿದೆ, ಜೀವನ ದುಸ್ತರವೆನಿಸುತ್ತಿದೆ. ಇಂತಹ ಪರಿಸ್ಥಿತಿ ಶಾಶ್ವತವಲ್ಲವೆಂಬುದು ತಿಳಿದಿರಲಿ. ಕಷ್ಟದ ಪರಿಸ್ಥಿತಿ ಹೊಸ ಹೊಸ ಅವಕಾಶಗಳ ಹೆದ್ದಾರಿಯನ್ನು ತೆರೆಯುತ್ತದೆ, ಮಾನಸಿಕ ಸಿದ್ದತೆಗೆ ಇದೇ ಪ್ರಶಸ್ತಕಾಲ ಬನ್ನಿ ಕಷ್ಟಕಾಲದಲ್ಲಿ ಬೆಂದು ಹದವಾಗಿ ಅನುಭವ ಅಮೃತವ ಸವಿಯೋಣ, ನಾಳೆಯೆಂಬ ಅಮೃತಗಳಿಗೆಯ ಸ್ವಾಗತಿಸಲು ಇಂದೇ ಸಿದ್ದರಾಗೋಣ.

ಭಾನುವಾರ, ಸೆಪ್ಟೆಂಬರ್ 19, 2010

ವಿಶ್ವ ಪರಿಸರ ದಿನ-೨೦೧೦

ಜೂನ್ ೫, ಮತ್ತೊಮ್ಮೆ ಬಂದಿದೆ!, ಏನು ವಿಶೇಷ? ಅಂತ ಯೋಚನೆ ಮಾಡ್ತಾಯಿದ್ದೀರ? ಜೂನ್ ೫ "ವಿಶ್ವ ಪರಿಸರ ದಿನ". ನಮ್ಮ ರಕ್ಷಣೆಗೆ, ಪಾಲನೆಗೆ,ಪೋಷಣೆಗೆ ತನ್ನದೆಲ್ಲವನ್ನೂ ಮುಕ್ತವಾಗಿ ನೀಡಿದ ಪರಿಸರ ಇಂದು ಬೆತ್ತಲಾಗಿದೆ. ನಮ್ಮನ್ನು ಸಲಹಿದ ಪರಿಣಾಮವಾಗಿ, ಇಂದು ತನಗೇ ನೆಲೆಯಿಲ್ಲದಂತಾಗಿದೆ ಹಾಗು ಪರಿಸ್ಥಿತಿ ಶೋಚನೀಯವಾಗಿದೆ. ನಮ್ಮ ಪರಿಸರದ ಪುನರುತ್ಥಾನಕ್ಕೆ ನಾವು ಏನು ಮಾಡಬೇಕೆಂಬುದರ ಬಗ್ಗೆ ಚಿಂತನ-ಮಂಥನ ನಡೆಸಿ ಸರಿದಾರಿಯಲ್ಲಿ ಪರಿಸರ ಸಂರಕ್ಷಿಸುವ ಕಾರ್ಯ ಈ ಕ್ಷಣದ ಅವಶ್ಯಕತೆಯಾಗಿದೆ.ಜಾಗತೀಕವಾಗಿ ಏರುತ್ತಿರುವ ತಾಪಮಾನ,ಇಳಿಮುಖವಾಗುತ್ತಿರುವ ಮಳೆ, ಏರುತ್ತಿರುವ ವಾಯು,ಜಲ, ನೆಲ ಮಾಲಿನ್ಯ ಮತ್ತು ಇಳಿಮುಖವಾಗುತ್ತಿರುವ ಶುದ್ಧ ನೀರು,ಗಾಳಿ, ಆಹಾರ ಪದಾರ್ಥಗಳು ಪ್ರತಿಯೊಂದು ದೇಶವನ್ನು ಚಿಂತೆಗೀಡು ಮಾಡಿದೆ. ಮಾನವ ತನ್ನ ನೆಲೆಯನ್ನು ತಾನೇ ನಾಶಮಾಡಿಕೊಳ್ಳುತ್ತಿದ್ದಾನೆ. ಅತಿಯಾದ ಕೈಗಾರೀಕರಣ, ನಗರೀಕರಣದ ಜೊತೆಗೆ ಮಾನವನ ಅತಿಯಾದ ಸ್ವಾರ್ಥ ಹಾಗು ಪರಿಸರದ ಬಗ್ಗೆ ತಳೆದಿರುವ ನಕಾರಾತ್ಮಕ ಧೋರಣೆ, ಇಂದು ಪ್ರಪಂಚಾದ್ಯಂತ ಎಲ್ಲಾ ದೇಶಗಳನ್ನು ಬಡಿದೆಬ್ಬಿಸಿದೆ. ನಾಗರೀಕರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೊಡಿಸುವ ಪ್ರಯತ್ನ ಇಂದು ನಿನ್ನೆಯದಲ್ಲ. ಜನಸಾಮಾನ್ಯರಲ್ಲಿ ಪರಿಸರ ಬಗ್ಗೆ ಜಾಗೃತಿ ಮೂಡಿಸಿ ನೈಸರ್ಗಿಕ ಸಂಪನ್ಮೂಲಗಳು ಮಾಲಿನ್ಯಗೊಳ್ಳುವುದನ್ನು ತಡೆಗಟ್ಟಿ, ಮುಂದಿನ ಪೀಳಿಗೆಗೆ ನೆಮ್ಮದಿಯ ಬದುಕು ಕಟ್ಟಿಕೊಡುವ ಪ್ರಯತ್ನದ ಸಾಂಕೇತಿಕವಾಗಿ ಪ್ರತಿವರ್ಷ ಜೂನ್ ೫ ರಂದು "ವಿಶ್ವ ಪರಿಸರ ದಿನ" ವೆಂದು ಪ್ರಪಂಚಾದ್ಯಂತ ಆಚರಿಸಲಾಗುವುದು (ವಿಶ್ವ ಪರಿಸರ ದಿನ ಮೊದಲ ಬಾರಿ ಜೂನ್ ೫, ೧೯೭೩ ರಂದು ಆಚರಿಸಲಾಯಿತು).
ಪರಿಸರದ ಮಡಿಲಲ್ಲಿ ನಾವು:
>ನಮ್ಮ ಪರಿಸರ ನಮಗೇನು ಕೊಟ್ಟಿಲ್ಲ ಹೇಳಿ! ಸುಂದರ ಬದುಕು,ಕನಸು,ಕಷ್ಟಗಳನ್ನು ಎದುರಿಸುವ ಶಕ್ತಿ,
ಬಂಧು-ಬಾಂಧವರು, ಕೋಟ್ಯಾಂತರ ಜೀವ-ವೈವಿಧ್ಯಗಳಿಗೆ ತವರುಮನೆ-ಭೂಮಿ, ಭೂಮಿ ನಮ್ಮೆಲ್ಲರ ತಾಯಿ.
>ಪ್ರಕೃತಿಯ ಸೌಂದರ್ಯ ಸವಿಯಲು ನೂರು ಜನ್ಮ ಸಾಲದು,ಕವಿಯಾಗಿ ಪ್ರಕೃತಿಯ ಗುಣಗಾನ ಮಾಡುವ ಕವಿಗಳಿದ್ದಾರೆ ಇಲ್ಲಿ.ಪ್ರಕೃತಿ ತನ್ನೊಳಡಗಿಸಿಕೊಂಡಿರುವ ಸಾವಿರಾರು ರಹಸ್ಯಗಳನ್ನು ಭೇದಿಸಲು ಸಾವಿರಾರು ವಿಜ್ನಾನಿಗಳು ಸಂಶೋಧನೆ ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರಿದ್ದಾರೆ.
>ದಟ್ಟವಾದ ಕಾನನಗಳು,ಪಾತಾಳದ ಕಣಿವೆಗಳು,ಧೈರ್ಯವಿದ್ದರೆ ನನ್ನನ್ನೇರು ಎಂದು ಕೈಬೀಸಿ ಕರೆಯುವ ಪರ್ವತ ಶ್ರೇಣಿಗಳು,ರಸಿಕರಿಗೆ ಹಾಗು ಚಾರಣಿಗರಿಗೆ ಸವಾಲೆಸೆಯುತ್ತಿದೆ.
ನಮ್ಮ ಮುಡಿಲಲ್ಲಿ ಪರಿಸರ:
ನಮ್ಮನ್ನು ಸಲಹಿದ ಪರಿಸರದ ಬಗ್ಗೆ ನಮಗೂ ಕಾಳಜಿ ಇರಬೇಕಲ್ಲವೆ.ಬೇಕಾಬಿಟ್ಟಿ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ ಹಾಳುಮಾಡುತ್ತಿದ್ದೇವೆ.ಹಿತ-ಮಿತವಾಗಿ ಬಳಸುವುದನ್ನು ನಾವು ಕಲಿಯಬೇಕಿದೆ. ಸಂಪನ್ಮೂಲಗಳನ್ನು ಬಳಸುವಾಗಈ ಕೆಳಗಿನ ಅಂಶಗಳನ್ನು ಗಮನಿಸುವುದು ಒಳಿತು.
o ನೀರನ್ನು ಅವಶ್ಯಕತೆಗನುಗುಣವಾಗಿ ಬಳಸಿ.
o ಮಳೆ ನೀರನ್ನು ಸಾಧ್ಯವಾದಷ್ಟು ಬಳಸಿ ಹಾಗು ಅಂತರ್ಜಲದ ವೃದ್ಧಿಗೆ ಯೋಜನೆಗಳನ್ನು ರೂಪಿಸಿ.
o ನೀರಿನ ಮೊಲಗಳಾದ ಕೆರೆ,ಬಾವಿ,ಕೊಳ ಹಾಗು ನದಿಗಳ ಮಾಲಿನ್ಯವನ್ನು ತಡೆಯಿರಿ.

ವಿಧ್ಯುಚ್ಚಕ್ತಿಯನ್ನು ಮಿತವಾಗಿ ಬಳಸಿ,ಇತರೆ ಮೂಲಗಳಿಂದ ವಿಧ್ಯುಚ್ಚಕ್ತಿಯನ್ನು ತಯಾರಿಸಿ,ಬಳಸುವ ವಿಧಾನಗಳನ್ನು
ರೂಡಿಸಿಕೊಳ್ಳಿ.
o ಆಹಾರ ಪದಾರ್ಥಗಳನ್ನು ಅನಗತ್ಯವಾಗಿ ಚೆಲ್ಲಬೇಡಿ.
o ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಮಾಡಿ.
o ಮರ-ಗಿಡಗಳನ್ನು ಹೆಚ್ಚಾಗಿ ಬೆಳಸಿ.
o ಕಸವನ್ನು ವಿಂಗಡನೆ ಮಾಡಿ ವಿಲೇವಾರಿ ಮಾಡಿ.
o ಬೈಸಿಕಲ್ ಅಥವಾ ನಡೆಯುವ ಹವ್ಯಾಸದಿಂದ ಆರೋಗ್ಯವೂ ವೃದ್ಧಿಸುತ್ತದೆ ಹಾಗು ಪರಿಸರ ಮಾಲಿನ್ಯವೂ ತಪ್ಪುತ್ತದೆ.
o ವಾರದಲ್ಲಿ ಒಂದು ದಿನವಾದರೂ ಸಾರ್ವಜನಿಕ ವಾಹನ ಬಳಸಿ.
o ಜವಾಬ್ದಾರಿಯುತ ನಾಗರೀಕರಾಗಿ ನಿಮ್ಮ ಹಕ್ಕು ಹಾಗು ಜವಾಬ್ದಾರಿಯನ್ನು ಅರಿತುಕೊಳ್ಳಿ.
o ಹಸಿರೇ ಉಸಿರು ಎಂಬ ತತ್ವದಲ್ಲಿ ನಂಬಿಕೆಯಿಡಿ.
o ಜನ ಸಾಮಾನ್ಯರಲ್ಲಿಪರಿಸರದ ಕಾಳಜಿಯ ಬಗ್ಗೆಅರಿವು ಮೂಡಿಸಿ.
೨೦೧೦ ರ ವಿಶ್ವ ಪರಿಸರ ದಿನದ ಘೋಷ ವಾಕ್ಯ
" ಹಲವು ಜೀವ ಪ್ರಭೇದ- ಒಂದು ಭೂಮಿ, ಒಂದೇ ಭವಿಷ್ಯ"

ಮಂಗಳವಾರ, ಸೆಪ್ಟೆಂಬರ್ 14, 2010

ಇಂಗು ತಿಂದ ಮಂಗ

ಹೀಗೆ ಮೊನ್ನೆ ಇದ್ದಕ್ಕಿದ್ದ ಹಾಗೆ ನನ್ನ ಕಾರ್ಖಾನೆಯಲ್ಲಿ ,ನನಗೆ ಹಾಗು ನನ್ನ ಮೇಲಿನ ಧರ್ಜೆಯ ಇಂಜಿನಿಯರ್ ಗಳಿಗೆಲ್ಲಾ ನಮ್ಮ ವ್ಯವಸ್ಥಾಪಕ ನಿರ್ದೇಶಕರು ಬೆಂಗಳೂರು ಕ್ಲಬ್ ನಲ್ಲಿ ಪಾರ್ಟಿ ಕೊಡುವ ಆಮಂತ್ರಣ ಬಂದಿತ್ತು. ನಮಗೂ ತುಂಬಾ ಸಂತೋಷದ ಜೊತೆಗೆ ಆತಂಕವೂ ಅಯಿತು. ಸಂತೋಷ ಏಕೆಂದರೆ ನಾವು ಕಳೆದ ಎರಡು ವರ್ಷಗಳಿಂದ ಇನ್ಕ್ರ್ ಮೆಂಟ್ ಹಾಗು ಪ್ರಮೋಶನ್ ಗಾಗಿ ಕಾಯುತ್ತಿದ್ದೇವು ಅದರ ಬಗ್ಗೆ ನಾವು ಅವರನ್ನೇ ನೇರವಾಗಿ ಕೇಳಿ ನಮ್ಮ ಸಂದೇಹಗಳನ್ನು ಪರಿಹಾರ ಮಾಡಿಕೊಳ್ಳಬಹುದೆನ್ನುವ ಆಸೆಯ ಜೊತೆಗೆ ನಮ್ಮ ಸಮಸ್ಯೆಗೆ ಇಷ್ಟು ಬೇಗ ಪರಿಹಾರ ಸಿಕ್ಕಿಬಿಡ್ತಲ್ಲ ಅನ್ನೋದು ಸೇರಿತ್ತು. ಆತಂಕ ಏಕೆಂದರೆ ನಮ್ಮ ಸಮಸ್ಯೆಗಳ ಪಟ್ಟಿ ತುಂಬಾ ದೊಡ್ಡದಾಗಿತ್ತು ಅದನ್ನು ಕೇಳಿಸಿಕೊಳ್ಳುವ ವ್ಯವಧಾನ ಅವರಿಗೆ ಇರುತ್ತದೋ ಇಲ್ಲವೋ ಅಥವಾ ನಮ್ಮ ಸಮಸ್ಯೆಗಳನ್ನು ನಮ್ಮ ಮೇಲಿನ ಅಧಿಕಾರಿಗಳಿಗೆ ಹೇಳಿ ಹೇಳಿ ಸಾಕಾಗಿತ್ತಲ್ಲ, ನಮ್ಮ ಮೇಲಿನ ಅಧಿಕಾರಿಗಳು ಅವರಿಗೆ ಏನು ಹೇಳಿದ್ದಾರೋ ಅಥವಾ ನಮ್ಮ ಮೇಲೆಯೇ ಎತ್ತಿ ಕಟ್ಟಿದ್ದಾರೋ ಎಂಬ ಆತಂಕ ನನ್ನನ್ನು ಹಾಗು ನನ್ನ ಸ್ನೇಹಿತರಿಗೆ ಕಾಡುತ್ತಿತ್ತು. ಎಲ್ಲ ಗೆಳೆಯರ, ಸಹೊದ್ಯೋಗಿಗಳನ್ನು ಭೇಟಿಮಾಡಿ ಅವರವರ ಸಮಸ್ಯೆಗಳನ್ನು ಕೇಳಿ ಅದಕ್ಕೆಲ್ಲಾ ಪ್ರಶ್ನೆಯ ರೂಪ ಕೊಟ್ಟೆವು. ಪ್ರತಿಯೊಂದು ಸಮಸ್ಯೆಗೂ ಒಂದೊಂದು ಉದಾಹರಣೆಯನ್ನು ಇಟ್ಟುಕೊಂಡಿದ್ದೆವು. ಉದಾಹರಣೆ ಏಕೆಂದರೆ ನಮ್ಮ ಸಮಸ್ಯೆ ಬರೀ ಊಹಾಪೋಹದ್ದಲ್ಲ ಅದು ನೈಜವಾದುದು ಎಂಬುದು ಅವರಿಗೆ ಮನಗಾಣಿಸಲು ಅದರ ಅಗತ್ಯ ನಮಗಿತ್ತು.ಎಲ್ಲರಿಗೂ ನಾವು ಇಂತೆಲ್ಲಾ ಪ್ರಶ್ನೆಗಳನ್ನು ಕೇಳುತ್ತೇವೆ, ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೇ, ನಮ್ಮ ಡಿಮ್ಯಾಂಡ್ ಸರಿಯಾಗಿದೆ ಅಂದುಕೊಂಡೆವು ಹಾಗು ಮನಸ್ಸಿನಲ್ಲಿ ನಮ್ಮ ಸಮಸ್ಯೆಗೆ ಪರಿಹಾರಸಿಕ್ಕೇ ಬಿಡ್ತು ಎಂದು ಮಂಡುಗೆಯನ್ನು ಒಳಒಳಗೇ ತಿನ್ನುತ್ತಿದ್ದೆವು. ಎಲ್ಲೆಲ್ಲಿ ನಾವು ಹೋದರೂ ಅದರದೇ ಮಾತುಕತೆ,ಅದರದೇ ಚರ್ಚೆ, ಗುಸುಗುಸು-ಪಿಸುಪಿಸು ಆ ಕುತೂಹಲದ ಕ್ಷಣಗಳನ್ನು ತುಂಬಾ ಆನಂದಿಸಿದೆವು.ನಮ್ಮ ಸಮಸ್ಯೆಗಳ ಪಟ್ಟಿಯನ್ನು ತಯಾರಿಸಿ ಪ್ರತಿಯೊಬ್ಬರಿಗೂ ಅದರ ಪ್ರತಿಯನ್ನು ತಲುಪಿಸಿದೆವು ಹಾಗು ಯಾರು ಯಾರು ಯಾವ ಯಾವ ಪ್ರಶ್ನೆಯನ್ನು ಕೇಳಬೇಕು ಎಂದು ಮಾರ್ಕ್ ಮಾಡಿ ಅವರು ಅದನ್ನು ಕೇಳುವ ತಾಲೀಮು ಮಾಡಲು ಆದೇಶಿಸಿದ್ದೆವು.
ನನಗೋ ರಾತ್ರಿಯೆಲ್ಲಾ ಅವೇ ಪ್ರಶ್ನೆಗಳು ಕಣ್ಣ ಮುಂದೆ ಬಂದು ಮನದಲ್ಲೇ ಪರಿಹಾರ ಸಿಕ್ಕಿಬಿಡುವ ಆನಂದ ಕ್ಷಣಗಳನ್ನು ಅನುಭವಿಸಿದ್ದೆ.ರಾತ್ರೋ ರಾತ್ರಿ ನಾನೇ ಸಮಸ್ಯೆಗಳನ್ನು ಪರಿಹರಿಸುವ ನಾಯಕನಾಗಿ ಕಂಗೊಳಿಸುತ್ತಿದ್ದೆ. ಡಾ\\ ರಾಜ್ ಕುಮಾರ್ ರವರ ಮಯೊರ ವರ್ಮ ಹಾಡುವ "ನಾನಿರುವುದೆ ನಿಮಗಾಗಿ" ಹಾಡು ಮನದಲ್ಲೇ ನೂರು ಬಾರಿ ಹಾಡಿಕೊಂಡು ಸಂತಸ ಪಟ್ಟಿದ್ದೇನೆ.
ಆ ದಿನ ಬಂದೇ ಬಂತು, ಹಿಂದಿನ ದಿನ ನಾನು ಎರಡನೇ ಪಾಳಿಯಲ್ಲಿದ್ದೆ ಹೀಗಾಗಿ ನನ್ನ ಮೇಲಿನ ಅಧಿಕಾರಿಗಳು "ನಾಳೆ ನೀವು informal meeting ಗೆ ಹೋಗಬೇಕಲ್ಲಾ, ಅದಕ್ಕೆ ನೀವು ನಾಳೆ ಜನರಲ್ ಶಿಫ್ಟನಲ್ಲಿ ಬನ್ನಿ ಸಾಯಂಕಾಲ ಹೋಗೋದಕ್ಕೆ ಅನುಕೂಲ ಆಗುತ್ತೆ" ಅಂದಿದ್ದರು. ಜನರಲ್ ಶಿಫ್ಟನಲ್ಲಿ ಕೆಲಸ ಮಾಡುವ ಮನಸ್ಸೇ ಇರಲಿಲ್ಲ ಯಾವಾಗ ೪.೩೦ ಆಗಿ ಹೊರಟರೆ ಸಾಕೆನಿಸಿತು. ಅಂತೂ ಕೆಲಸ ಮುಗಿಸಿ ಮನೆಗೆ ಬಂದು ಎಲ್ಲಾ ತಯಾರಿ ಮುಗಿಸಿದ್ದೆ. ಕಾರ್ಖಾನೆ ಬಿಟ್ಟು ಮನೆಗೆ ಬರುವ ಹೊತ್ತಿಗೆ ಸಂಜೆ ಆರಾಗಿತ್ತು. ಮನೆಯಲ್ಲಿ ಹೆಂಡತಿಯ ಮುನಿಸು ಬೇರೆ "ಹೊರಗಡೆ ಅವಳನ್ನು ಬಿಟ್ಟು ಹೋಟಲಿನಲ್ಲಿ ನಾರ್ಥ್ ಇಂಡಿಯನ್ನು ಊಟ ಮಾಡುತ್ತೇನೆ" ಅಂತ. ಹೇಗೋ ಸಮಾಧಾನ ಮಾಡಿ ನನ್ನ ಸ್ಕೂಟರಿನಲ್ಲಿ ಹೊರಟೆ. ನಾನಿರುವುದು ಕತ್ರಗುಪ್ಪೆ ವಾಟರ್ ಟ್ಯಾಂಕ ಹತ್ತಿರ ಗೊತ್ತಾಗಲಿಲ್ಲವೇ, ಅದೇ ನಮ್ಮ ಪ್ರೇಮ ಕವಿ ಕೆ.ಎಸ್. ನರಸಿಂಹಸ್ವಾಮಿ ಇದ್ದರಲ್ಲ ಅವರ ಹೆಸರಲ್ಲಿ ಒಂದು ಉಧ್ಯಾನವನ ಅಲ್ಲಿದೆ, ಅದರ ಹತ್ತಿರ. ಸೀತ ಸರ್ಕಲ್ ದಾಟಿ ಬ್ಯಾಂಕ್ ಕಾಲೋನಿ, ಹನುಮಂತ ನಗರ, ಬಸವನ ಗುಡಿ, ನ್ಯಾಷನಲ್ ಕಾಲೇಜ್, ಸಜ್ಜನ್ ರಾವ್ ಸರ್ಕಲ್, ಜೇಸಿ ರೋಡ್ ಮೊಲಕ ಕಾರ್ಪೊರೇಷನ್. ಹಡ್ಸಂನ್ ವೃತ್ತ, ಆನಂತರ ಮಲ್ಯ ಹಾಸ್ಪೆಟಲ್ ರೋಡ್ ನಲ್ಲಿ ಬಂದು ರಿಚ್ ಮಂಡ್ ವೃತ್ತದ ಫ್ಲೈ ಓವರ್ ಆದ ನಂತರ ಬೆಂಗಳೂರು ಕ್ಲಬಿನ ವಾಹನ ನಿಲುಗಡೆಯ ಪ್ರದೇಶದಲ್ಲಿ ನನ್ನ ವಾಹನವನ್ನು ನಿಲ್ಲಿಸಿದೆ. ಅಷ್ಟೊತ್ತಿಗೆ ನನ್ನ ಆತ್ಮೀಯ ಗೆಳೆಯ ರಾಮಮೊರ್ತಿ ಬಂದಿದ್ದರು. ಆಗಲೇ ಸಮಯ ೭.೩೦ ಆಗಿತ್ತು. ಬಿರಬಿರನೇ ಗೋಯಂಕಾ ಹಾಲಿನ ಕಡೆ ಹೊರಟೆವು. ಅದಾಗಲೇ ಮೀಟಿಂಗ್ ಆರಂಭಗೊಂಡಿತ್ತು. ಎಲ್ಲರ ಮುಂದೆಯೂ ಉದ್ದುದ್ದದ ಬಾಟಲಿನಲಿ ಬೀರ್,ಸಾಪ್ಟ್ ಡ್ರಿಂಕ್ಸ್, ಅದರ ಜೊತೆಗೆ ಬೋಂಡ, ಕಡ್ಲೇಬೀಜ ತಿನ್ನುವುದಕ್ಕೆ ರೆಡಿಯಾಗಿತ್ತು. ಕೆಲವರು ಅದಾಗಲೇ ತೀರ್ಥ ಸೇವನೆ ಆರಂಭಮಾಡಿದ್ದರು. ಯಾರ ಬಾಯಿಂದಲೂ ಒಂದು ಮಾತು ಬರುತ್ತಿರಲಿಲ್ಲ ಏಕೆಂದರೆ ಎಲ್ಲರೂ ತುಂಬಾ ಬಿಸ್ಜಿಯಾಗಿದ್ದರು. ನಮ್ಮ ವ್ಯವಸ್ಥಾಪಕ ನಿರ್ದೇಶಕರು ಮಾತ್ರ ಮಾತನಾಡುತ್ತಿದ್ದರು. ಬೇರೆಯವರೆಲ್ಲಾ ಕೋಲೆ ಬಸವನಹಾಗೆ ಅವರು ಹೇಳಿದ್ದಕ್ಕೆಲ್ಲಾ ತಲೆಯಾಡಿಸುತ್ತಿದ್ದರು. ಕೆಲವರು ಕೇಳಿದ ಪ್ರಶ್ನೆಗೆಲ್ಲಾ ಸೊಂಟ ಮುರಿಯುವ ನಾಯಕನ ಹಾಗೆ ನಮ್ಮನ್ನು ಮಾತನಾಡದಂತೆ ಅವರು ಮಾಡುತ್ತಿದ್ದರು. ನಮ್ಮ ಸಮಸ್ಯೆಗಳೆಲ್ಲಾ ಗಾಳಿಯಲ್ಲಿ ತೇಲಿಹೋಗಿತ್ತು. ಅವರು ಮೀಟಿಂಗ್ ಆರಂಭವಾಗಲೇ ಹೇಳಿದ್ದರಂತೆ "ಇನ್ಕ್ರಿಮೆಂಟ್,ಪ್ರಮೋಶನ್ ಬಗ್ಗೆ ಯಾರೂ ಪ್ರಶ್ನೆ ಕೇಳುವಹಾಗಿಲ್ಲ, ಏನಿದ್ದರೂ ಕಂಪನಿಯ ಭವಿಷ್ಯದ ಬಗ್ಗೆ ಮಾತ್ರ ನಿಮ್ಮ ಪ್ರಶ್ನೆಗಳನ್ನು ಕೇಳಬಹುದು" ಅಂತ. ಕಂಪನಿಯ ಭವಿಷ್ಯಮಾತ್ರ ಉಜ್ವಲವಾಗಿದೆ ಆದರೆ ನಮ್ಮ ಭವಿಷ್ಯದ ಗೊತ್ತು-ಗುರಿ ಅದರಲ್ಲಿ ಕಾಣಿಸುತ್ತಿರಲಿಲ್ಲ. ಪಾಲಿಗೆ ಬಂದದ್ದು ಪಂಚಾಮೃತ ಅನ್ನೋಹಾಗೆ ಕೆಲವರು ನಮ್ಮ ಆಸೆಗಳೆಲ್ಲಾ ನೀರಿನಲ್ಲಿ ಹೋಮ ಮಾಡಿದಹಾಗೆ ಆಯಿತಲ್ಲ ಅನ್ನುವ ವ್ಯಥೆಯಲ್ಲಿ ಎರ್ರಾಬಿರ್ರಿ ಗುಂಡು ಹಾಕಿ ಅದರಲ್ಲೇ ತೃಪ್ತಿ ಕಂಡುಕೊಳ್ಳುತ್ತಿದ್ದರು. ನನ್ನ ಹಾಗು ನನ್ನ ಗೆಳೆಯರ ಮುಖ ಇಂಗು ತಿಂದ ಮಂಗನಂತೆ ಆಗಿತ್ತು.
ನಮ್ಮ ಇನ್ಕ್ರಿಮೆಂಟ್,ಪ್ರಮೋಶನ್ ಬೆಂಗಳೂರಿನ ಟ್ರಾಫಿಕ್ನಲ್ಲಿ ಮನದಲ್ಲೇ ಸತ್ತುಹೋಗಿತ್ತು.


ಹಾಂ! ಅಂದ ಹಾಗೆ ೧೩.೦೯.೨೦೧೦ ರಂದು ನಮ್ಮ ವ್ಯವಸ್ಥಾಪಕ ನಿರ್ದೇಶಕರ ೬೦ ನೆ ಹುಟ್ಟು ಹಬ್ಬ. ಅವರಿಗೆ ಈ ಸಂದರ್ಭದಲ್ಲಿ ನಮ್ಮ ಎಲ್ಲಾ ಸಹೋಧ್ಯೋಗಿಗಳ ಪರವಾಗಿ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ.

ಭಾನುವಾರ, ಸೆಪ್ಟೆಂಬರ್ 5, 2010

ಹಬ್ಬ-ಪರಿಸರ

ಶ್ರಾವಣ ಬಂತೆಂದರೆ ಹಬ್ಬಗಳ ಸಾಲು ಸಾಲು ಓಡಿಬರುತ್ತದೆ. ಹಿಂದುಗಳಿಗೆ ಹಬ್ಬಗಳೆಂದರೆ ಆಸಕ್ತಿ,ಕಾಳಜಿ ಅದರ ಜೊತೆಗೆ ಸಂತೋಷ,ಸಡಗರ. ಧಾರ್ಮಿಕ ಹಾಗು ಸಾಮಾಜಿಕವಾಗಿ ಮನ-ಮನಗಳನ್ನು ಜೊತೆಗೂಡಿಸುತ್ತದೆ ನಮ್ಮ ಹಬ್ಬಗಳು. ನೋವು,ಗೋಳುಗಳಿಗೆ ಪೂರ್ಣವಿರಾಮ ಹಾಕಿ ಮನಸ್ಸು ಸಂತೋಷ.ಉಲ್ಲಸಿಸುವ ಕಾಲ ಈ ಹಬ್ಬಗಳಂದು.ಯಾಂತ್ರಿಕ ಜಂಜಾಟಗಳನ್ನು ಮರೆತು ಹೊಸತನಕ್ಕೆ ನಾಂಧಿ ಹಾಡುತ್ತದೆ ನಮ್ಮ ಹಬ್ಬಗಳು. ಹಬ್ಬಗಳ ಆಚರಣೆಯ ಹಿಂದಿನ ಧ್ಯೇಯ,ಆದರ್ಶಗಳು ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದರೂ ಆಚರಣೆಯ ಆಡಂಬರಕ್ಕೆ ದಕ್ಕೆ ಏನೂ ಇಲ್ಲ.

ನಮ್ಮ ಹಬ್ಬಗಳು ಪರಿಸರ ಪ್ರೇಮಿಯಾಗಿದ್ದು ಆಧುನಿಕತೆ,ವಿಜ್ನಾನ,ತಂತ್ರಜ್ನಾನಗಳ ಸೆಳೆತದಿಂದ ತನ್ನ ಸ್ವರೂಪದಲ್ಲಿ ಬದಲಾವಣೆಯನ್ನು ಪಡೆದಿದೆ.ಎಂದೂ ನಿಂತ ನೀರಾಗಿರದೆ ಸದಾ ಬದಲಾವಣೆಗೆ ತೆರೆದುಕೊಂಡಿರುವ ನಮ್ಮ ಆಚರಣೆಗಳು ಕಾಲಕ್ಕೆ ತಕ್ಕಹಾಗೆ ತನ್ನ ಸ್ವರೂಪವನ್ನು ಬದಲಾಯಿಸಿಕೊಂಡಿದೆ. ಆಷಾಡ ಅಮಾವಾಸ್ಯೆಯಿಂದ ಆರಂಭಗೊಂಡು ದೀಪಾವಳಿಯವರೆವಿಗೂ ಜನತೆಯಲ್ಲಿ ಸಡಗರ,ಸಂಭ್ರಮವನ್ನು ಕಾಪಿಡುತ್ತದೆ.

ಹಬ್ಬಗಳ ಆಚರಣೆಯಿಂದ ನಮ್ಮ ಪರಿಸರದ ಮೇಲಾಗುವ ಪರಿಣಾಮಗಳನ್ನು ಅರಿತು ನಮ್ಮ ನಡುವಳಿಕೆಗಳನ್ನು ತಿದ್ದಿಕೊಳ್ಳುವುದು ಈಗ ತೀರ ಅವಶ್ಯಕವಾಗಿದೆ. ಪರಿಸರ ಸ್ವಚ್ಛವಾಗಿದ್ದರೆ ನಾವು ಹಾಗು ನಮ್ಮ ಹಬ್ಬಗಳು ಅಲ್ಲವೇ?
ಪ್ರತಿನಿತ್ಯದಲ್ಲಿ ನಡೆಯುವ ವ್ಯವಹಾರಗಳಲ್ಲಿಯೂ ಹತ್ತು ಹಲವು ಬಗೆಯಲ್ಲಿ ಪರಿಸರ ನಮ್ಮ ನಿಮ್ಮಿಂದ ಹಾನಿಗೊಳಗಾಗುತ್ತಲೇಯಿದೆ, ಸಧ್ಯಕ್ಕೆ ಅದಕ್ಕೆ ಪರಿಹಾರವೆಂಬುದಿಲ್ಲವೆಂಬುದು ನಿಜವಾದರೂ ನಮ್ಮ ಪ್ರಯತ್ನ ನಿಲ್ಲಬಾರದು. ಇನ್ನು ಹಬ್ಬ-ಹರಿದಿನಗಳಂದೂ ನಮ್ಮ ಇತಿ-ಮಿತಿಗಳಿಂದ ಪರಿಸರದ ಮೇಲಾಗುವ ಪರಿಣಾಮಗಳನ್ನು ಕಡಿಮೆಮಾಡಬಹುದು.

ಈಗಾಗಲೇ ಗಣೇಶ ಚತುರ್ಥಿ ಹೊಸಲಲ್ಲಿ ನಿಂತಿದೆ, ಮಾರುಕಟ್ಟೆ,ಅಂಗಡಿ ಮುಂಗಟ್ಟುಗಳಲ್ಲಿ ಚಿಕ್ಕ ಪುಟ್ಟದಿಂದ ಹಿಡಿದು ಆಳೆತ್ತರದ ಬಣ್ಣ ಬಣ್ಣದ ಗಣೇಶ ವಿಗ್ರಹಗಳು ಗ್ರಾಹಕರಿಗಾಗಿ ಕಾಯುತ್ತಿದೆ. ಆಚರಣೆ ನಿಲ್ಲಬಾರದು ನಿಜ ಹಾಗಾದರೆ ನಾವು ಪರಿಸರದ ಸಂರಕ್ಷಣೆಗೆ ಏನು ಮಾಡಬಹುದು? ಈ ಕೆಳಗಿನ ಅಂಶಗಳನ್ನು ಚಾಚುತಪ್ಪದೆ ಮಾಡಿದರೆ ನಮ್ಮ ಕೈಲಾದ ಮಟ್ಟಿಗೆ ಪರಿಸರ ಸಂರಕ್ಷಣೆ ಮಾಡಬಹುದು.

೧. ಬಣ್ಣ ಬಣ್ಣದ ಗಣಪಗಳನ್ನು ಖರೀದಿ ಮಾಡಬೇಡಿ. ಬಣ್ಣಗಳು ರಾಸಾಯನಿಕಗಳಾದ್ದರಿಂದ ಅವು ನೀರು,ಮಣ್ಣನ್ನು ಮಾಲಿನ್ಯಮಾಡುತ್ತದೆ.
೨.ಪ್ಲಾಷ್ಟರ್ ಆಫ್ ಪ್ಯಾರಿಸಿನಿಂದ ಗಣಪಗಳನ್ನು ಖರೀದಿ ಮಾಡಬೇಡಿ.
೩. ಗಣಪಗಳ ವಿಸರ್ಜನೆಯನ್ನು ಪಾಲಿಕೆ/ನಗರ ಪಾಲಿಕೆ ನಿಗದಿಪಡಿಸಿದ ಸ್ಥಳಗಳಲ್ಲಿಯೇ ಮಾಡಿ.
೪. ಕಸ-ಕಡ್ಡಿಗಳನ್ನು ಎಲ್ಲೆಂದರಲ್ಲಿ ಬಿಸಾಡಬೇಡಿ, ನಿಗದಿತ ಜಾಗಗಳಲ್ಲಿ ಶೇಖರಿಸಿ ಪಾಲಿಕೆಯವರು ತೆಗೆದೊಯ್ಯುವಂತೆ ವ್ಯವಸ್ಥೆಮಾಡಿ.
೫.ನೀರನ್ನು ಮಿತವಾಗಿ ಬಳಸಿ ಹಾಗು ಮಾಲಿನ್ಯಗೊಳ್ಳುವುದನ್ನು ತಡೆಯಿರಿ. ಮಳೆ ನೀರನ್ನು ಇತರೇ ಕೆಲಸಗಳಿಗೆ ಬಳಕೆ ಮಾಡುವುದನ್ನು ರೂಡಿಸಿಕೊಳ್ಳಿ.
೬. ಧ್ವನಿ ವರ್ಧಕಗಳನ್ನು ಸಾರ್ವಜನಿಕರ ಅವಶ್ಯತೆಗನುಗುಣವಾಗಿ ಬಳಸಿ. ಅತಿಯಾದ ಬಳಕೆ ಸಲ್ಲ.
ನಮ್ಮ ಪರಿಸರವನ್ನು ಸಂರಕ್ಷಿಸುವುದು ಮುಂದಿನ ಪೀಳಿಗೆಗೆ ಕೊಡುವ ಅತಿದೊಡ್ಡ ಉಡುಗೊರೆ.
ಆದ್ದರಿಂದ ಸ್ನೇಹಿತರೇ ಹಬ್ಬಗಳನ್ನು ಆಚರಿಸುವಾಗ ಪರಿಸರದ ಬಗ್ಗೆ ಗಮನವಿಟ್ಟು, ಪರಿಣಾಮಗಳನ್ನು ಗಣನೆಗೆ ತೆಗೆದುಕೊಂಡು ಆಚರಿಸಿ. ನಿಮ್ಮ ಕೈಲಾದಷ್ಟು ಜನರಲ್ಲಿ ಪರಿಸರದ ಬಗ್ಗೆ ಖಾಳಜಿ, ಅರಿವು ಮೊಡಿಸಿ. ಮಕ್ಕಳಲ್ಲಿ ಪರಿಸರ ಪ್ರೀತಿಯನ್ನು ಬೆಳೆಸಿ.
ಎಲ್ಲರಿಗೂ ಗಣೇಶ ಹಬ್ಬದ ಶುಭಾಷಯಗಳು